ಕಬಿನಿ ಬೆನ್ನಲ್ಲೇ KRSನಿಂದಲೂ ತಮಿಳುನಾಡಿಗೆ ಕಾವೇರಿ ನೀರು?: ಒಳಹರಿವು ತಗ್ಗಿದ್ರೂ ಹೊರಹರಿವು 4,917 ಕ್ಯೂಸೆಕ್‌ಗೆ ಏರಿಕೆ!

Published : Aug 18, 2026, 01:20 PM IST
Karnataka Cauvery water

ಸಾರಾಂಶ

ಕೆಆರ್‌ಎಸ್ ಜಲಾಶಯಕ್ಕೆ ಒಳಹರಿವು ತೀವ್ರವಾಗಿ ಕುಸಿದಿದ್ದರೂ, ಹೊರಹರಿವನ್ನು ದುಪ್ಪಟ್ಟು ಮಾಡಿರುವುದು ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸಲಾಗುತ್ತಿದೆ ಎಂಬ ಶಂಕೆಗೆ ಕಾರಣವಾಗಿದೆ. ಸರ್ಕಾರದ ಈ ನಡೆಯಿಂದಾಗಿ ಮಂಡ್ಯದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಮಂಡ್ಯ (ಆ.18): ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂಬ ವಿವಾದದ ಬೆನ್ನಲ್ಲೇ, ಇದೀಗ ಕಾವೇರಿ ಕೊಳ್ಳದ ಜೀವನಾಡಿ ಕೃಷ್ಣರಾಜ ಸಾಗರ (KRS) ಡ್ಯಾಂನಿಂದಲೂ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸಲಾಗುತ್ತಿದೆಯೇ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಜಲಾಶಯಕ್ಕೆ ಬರುತ್ತಿರುವ ಒಳಹರಿವು ಭಾರಿ ಪ್ರಮಾಣದಲ್ಲಿ ಕುಸಿದಿದ್ದರೂ, ಹೊರಹರಿವನ್ನು ದುಪ್ಪಟ್ಟು ಮಾಡಿರುವುದು ಮಂಡ್ಯದ ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರ ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕುಡಿಯುವ ನೀರು ಹಾಗೂ ನಾಲೆಗಳ ನೆಪ ಹೇಳಿ, ತಮಿಳುನಾಡಿಗೆ ಗುಟ್ಟಾಗಿ ನೀರು ಹರಿಸುತ್ತಿದ್ದಾರೆ ಎಂದು ರೈತ ಸಂಘಟನೆಗಳು ಗಂಭೀರವಾಗಿ ಆರೋಪಿಸಿವೆ.

ಒಳಹರಿವು ಕಡಿಮೆ, ದುಪ್ಪಟ್ಟಾದ ಹೊರಹರಿವು

ಕೆಆರ್‌ಎಸ್ ಜಲಾಶಯಕ್ಕೆ ಪ್ರಸ್ತುತ ಹರಿದು ಬರುತ್ತಿರುವ ನೀರಿನ ಪ್ರಮಾಣ ಕೇವಲ 1,961 ಕ್ಯೂಸೆಕ್. ಆದರೆ, ಡ್ಯಾಂನಿಂದ ಹೊರಬಿಡುತ್ತಿರುವ ನೀರಿನ ಪ್ರಮಾಣ ಬರೋಬ್ಬರಿ 4,917 ಕ್ಯೂಸೆಕ್ ಆಗಿದೆ. ಕಳೆದ ಕೆಲವು ದಿನಗಳ ಹಿಂದೆ ನಾಲೆಗಳಿಗೆ ಹಾಗೂ ಬೆಂಗಳೂರಿನ ಕುಡಿಯುವ ನೀರಿನ ಉದ್ದೇಶಕ್ಕೆ ಕೇವಲ 2,000 ದಿಂದ 2,500 ಕ್ಯೂಸೆಕ್ ನೀರನ್ನು ಮಾತ್ರ ಹರಿಸಲಾಗುತ್ತಿತ್ತು. ಆದರೆ, ಕಳೆದ ಆಗಸ್ಟ್ 15 ರಿಂದಲೇ ಯಾವುದೇ ಅಧಿಕೃತ ಮುನ್ಸೂಚನೆ ನೀಡದೆ ಹೊರಹರಿವನ್ನು ಏಕಾಏಕಿ 4,917 ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ. ಜಲಾಶಯಕ್ಕೆ ಬರುವ ನೀರಿಗಿಂತ ಹೊರಹೋಗುವ ನೀರಿನ ಪ್ರಮಾಣವೇ ಹೆಚ್ಚಾಗಿರುವುದರಿಂದ ಡ್ಯಾಂ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿದೆ.

ಇಂದಿನ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟದ ವಿವರ (Water Level Stats):

  • ಗರಿಷ್ಠ ಮಟ್ಟ: 124.80 ಅಡಿಗಳು
  • ಇಂದಿನ ನೀರಿನ ಮಟ್ಟ: 109.28 ಅಡಿಗಳು
  • ಒಳಹರಿವು (Inflow): 1,961 ಕ್ಯೂಸೆಕ್
  • ಹೊರಹರಿವು (Outflow): 4,917 ಕ್ಯೂಸೆಕ್
  • ಗರಿಷ್ಠ ಸಂಗ್ರಹ ಸಾಮರ್ಥ್ಯ: 49.452 ಟಿಎಂಸಿ (TMC)
  • ಇಂದಿನ ನೀರಿನ ಸಂಗ್ರಹ: 31.004 ಟಿಎಂಸಿ

ಸುಳ್ಳು ಮಾಹಿತಿ ನೀಡುತ್ತಿರುವ ಅಧಿಕಾರಿಗಳು – ರೈತರ ಆಕ್ರೋಶ:

'ನಮ್ಮ ಭಾಗದ ರೈತರ ಕೃಷಿ ಬೆಳೆಗಳಿಗೆ ನೀರಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಆದರೆ ಅಧಿಕಾರಿಗಳು ಸ್ಥಳೀಯ ನಾಲೆಗಳಿಗೆ ನೀರು ಹರಿಸುತ್ತಿದ್ದೇವೆ ಎಂದು ಸುಳ್ಳು ಲೆಕ್ಕ ನೀಡಿ, ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ ನೀರು ತಲುಪುವಂತೆ ಮಾಡುತ್ತಿದ್ದಾರೆ' ಎಂದು ಸ್ಥಳೀಯ ರೈತರು ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಡ್ಯಾಂನಲ್ಲಿರುವ ನೀರನ್ನು ಸಂರಕ್ಷಿಸದೆ, ನೆರೆ ರಾಜ್ಯಕ್ಕೆ ನೀರು ಬಿಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು; ಇಲ್ಲವಾದರೆ ಕಾವೇರಿ ಕೊಳ್ಳದಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

PREV
Read more Articles on
click me!

Recommended Stories

Shivamogga: ಶಿಖರದ ತುದಿಗೆ ಘಟಸರ್ಪ ಏರಿತಲ್ಲೇ ಎಚ್ಚರ! ರೈತರಲ್ಲಿ ಆತಂಕ ಮೂಡಿಸಿದ ಹನುಮಂತ ದೇವರ ಕಾರ್ಣಿಕ ನುಡಿ
ಪ್ರತ್ಯೇಕ ಘಟನೆ; ನಾಗರ ಪಂಚಮಿಯಂದೆ ದುರಂತ, ಹಾವು ಕಡಿದು ವಾಟರ್‌ಮ್ಯಾನ್, ಮಹಿಳೆ ಸಾವು!