
ದಾವಣಗೆರೆ; ಕರ್ನಾಟಕ ಲೋಕಸೇವಾ ಆಯೋಗದಲ್ಲಿ (KPSC) ನಡೆದಿದೆ ಎನ್ನಲಾದ ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಈಗ ರಾಜ್ಯಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರಕರಣದ ಆಳ-ಅಗಲಗಳನ್ನು ಜಾಲಾಡುತ್ತಿರುವ ಸಿಐಡಿ (CID) ಅಧಿಕಾರಿಗಳ ತಂಡ, ಇದೀಗ ಕೆಪಿಎಸ್ಸಿ ಸದಸ್ಯೆ ಶಾಂತಾ ಹೊಸಮನಿ ಅವರಿಗೆ ಸೇರಿದ ದಾವಣಗೆರೆಯ ನಿವಾಸದ ಮೇಲೆಯೂ ದಾಳಿ ನಡೆಸಿ, ಇಂಚಿಂಚೂ ತನಿಖೆ ನಡೆಸಿರುವುದು ಭಾರೀ ಸಂಚಲನ ಮೂಡಿಸಿದೆ.
ದಾವಣಗೆರೆ ನಗರದ ಪ್ರಭಾವಿ ಪ್ರದೇಶವಾದ ತರಳುಬಾಳು ಬಡಾವಣೆಯಲ್ಲಿ ಕೆಪಿಎಸ್ಸಿ ಸದಸ್ಯೆ ಶಾಂತಾ ಹೊಸಮನಿ ಅವರು ಸ್ವಂತ ಮನೆ ಹೊಂದಿದ್ದಾರೆ. ನಿನ್ನೆ ದಾವಣಗೆರೆಗೆ ದಿಢೀರ್ ಭೇಟಿ ನೀಡಿದ್ದ ಸಿಐಡಿ ವಿಶೇಷ ಅಧಿಕಾರಿಗಳ ತಂಡ, ಈ ನಿವಾಸಕ್ಕೆ ತೆರಳಿ ಪರಿಶೀಲನೆ ನಡೆಸಿದೆ. ಹಗರಣಕ್ಕೆ ಸಂಬಂಧಿಸಿದಂತೆ ಕಡತಗಳು, ಅಕ್ರಮ ವ್ಯವಹಾರಗಳ ದಾಖಲೆಗಳು ಅಥವಾ ಯಾವುದೇ ರೀತಿಯ ಸಾಕ್ಷ್ಯಗಳು ಲಭ್ಯವಾಗಬಹುದೇ ಎಂಬ ನಿಟ್ಟಿನಲ್ಲಿ ಸಿಐಡಿ ಅಧಿಕಾರಿಗಳು ಸುದೀರ್ಘ ಶೋಧ ಕಾರ್ಯ ನಡೆಸಿದ್ದಾರೆ.
ವಿಚಾರಣೆಯ ಭಾಗವಾಗಿ ಸ್ಥಳಕ್ಕೆ ಬಂದ ಸಿಐಡಿ ತಂಡ, ಬಂದ್ ಆಗಿದ್ದ ಮನೆಯ ಬಾಗಿಲು ತೆಗೆಸಿ ಒಳಗೆ ಪ್ರವೇಶಿಸಿದೆ. ಮನೆಯ ಪ್ರತಿಯೊಂದು ಕೊಠಡಿ, ಕಬೋರ್ಡ್ ಮತ್ತು ದಾಸ್ತಾನು ಸ್ಥಳಗಳನ್ನು ಸಿಐಡಿ ಸಿಬ್ಬಂದಿ ಇಂಚಿಂಚಾಗಿ ಪರಿಶೀಲಿಸಿದ್ದಾರೆ. ಸುಮಾರು ಎಂಟು ತಿಂಗಳಿಂದ ಈ ಮನೆಯಲ್ಲಿ ಯಾರೂ ವಾಸವಿರಲಿಲ್ಲ ಎನ್ನಲಾಗಿದೆ. ಆದಾಗ್ಯೂ, ಪ್ರಕರಣದ ತನಿಖೆಯಲ್ಲಿ ಯಾವುದೇ ಸಣ್ಣ ಸುಳಿವು ಕೂಡ ಕೈಬಿಡಬಾರದು ಎಂಬ ಉದ್ದೇಶದಿಂದ ಅಧಿಕಾರಿಗಳು ಸುದೀರ್ಘ ಕಾರ್ಯಾಚರಣೆ ನಡೆಸಿ, ಅಗತ್ಯ ಮಾಹಿತಿಗಳನ್ನು ಕಲೆಹಾಕಿದ್ದಾರೆ.
ಶಾಂತಾ ಹೊಸಮನಿ ಅವರು ಕಳೆದ ಐದು ವರ್ಷಗಳ ಹಿಂದೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಸುದೀರ್ಘ ಸೇವೆ ಸಲ್ಲಿಸಿದ್ದರು. ದಾವಣಗೆರೆಯಲ್ಲಿ ಸೇವೆಯಲ್ಲಿದ್ದಾಗ ಅವರು ಈ ತರಳುಬಾಳು ಬಡಾವಣೆಯ ನಿವಾಸದಲ್ಲಿ ವಾಸವಾಗಿದ್ದರು. ತದನಂತರ ಅವರಿಗೆ ಬೆಂಗಳೂರಿಗೆ ವರ್ಗಾವಣೆಯಾಯಿತು. ಬೆಂಗಳೂರಿಗೆ ಸ್ಥಳಾಂತರಗೊಂಡ ಬಳಿಕ, ದಾವಣಗೆರೆಯ ಈ ಮನೆಯನ್ನು ಬಾಡಿಗೆಗೆ ನೀಡಲಾಗಿತ್ತು. ಆದರೆ, ಕಳೆದ ಎಂಟು ತಿಂಗಳಿಂದ ಮನೆಯಲ್ಲಿದ್ದ ಬಾಡಿಗೆದಾರರು ಖಾಲಿ ಮಾಡಿದ್ದರಿಂದ ಮನೆ ಬೀಗ ಹಾಕಲಾಗಿತ್ತು. ಆ ಬಳಿಕ ಅವರು KPSC ಸದಸ್ಯೆಯಾಗಿ ನಿಯೋಜನೆಗೊಂಡಿದ್ದರು.
ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಎಸಗಲಾಗಿದೆ, ಅರ್ಹ ಅಭ್ಯರ್ಥಿಗಳನ್ನು ಬದಿಗೊತ್ತಿ ಅಕ್ರಮ ಮಾರ್ಗದಲ್ಲಿ ಹುದ್ದೆಗಳನ್ನು ಭರ್ತಿ ಮಾಡಲು ಯತ್ನಿಸಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಈ ಹಗರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿದ್ದು, ಅಧಿಕಾರಿಗಳು ಈಗಾಗಲೇ ಹಲವು ಪ್ರಮುಖರ ವಿಚಾರಣೆ ನಡೆಸಿದ್ದಾರೆ. ಕೆಪಿಎಸ್ಸಿ ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಸದಸ್ಯರ ಪಾತ್ರದ ಕುರಿತು ಅನುಮಾನಗಳು ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ, ಪ್ರಮುಖ ಸಾಕ್ಷ್ಯಾಧಾರಗಳನ್ನು ಕಲೆಹಾಕಲು ಈ ಸರ್ಚ್ ಆಪರೇಷನ್ ನಡೆಸಲಾಗಿದೆ. ಈ ದಿಢೀರ್ ಕಾರ್ಯಾಚರಣೆಯು ದಾವಣಗೆರೆ ನಗರದಲ್ಲಿ ಹಾಗೂ ಕೆಪಿಎಸ್ಸಿ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ದಿನಗಳಲ್ಲಿ ಈ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಯಾರ ತಲೆದಂಡವಾಗಲಿದೆ ಎಂಬ ಕುತೂಹಲ ಮೂಡಿಸಿದೆ.