'ಕಾಂಗ್ರೆಸ್‌ ಹಮಾಲರಾಗಲು ಪುಣ್ಯ ಬೇಕು, ಪಕ್ಷಕ್ಕಾಗಿ ಕಸ ಗುಡಿಸೋದಕ್ಕೂ ಸಿದ್ಧ'

By Kannadaprabha NewsFirst Published Dec 27, 2020, 1:53 PM IST
Highlights

ಹಮಾಲರು ಎಂದರೆ ಮೈಮುರಿದು ಕಷ್ಟಪಟ್ಟು ಪ್ರಾಮಾಣಿಕವಾಗಿ ದುಡಿಯುವ ಶ್ರಮಿಕ ವರ್ಗ| ಈ ವರ್ಗಕ್ಕೆ ನಮ್ಮನ್ನು ಸೇರಿಸಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇವೆ| ಹಮಾಲಿಗಳು ಇಲ್ಲದೇ ದೇಶದ ಅಭಿವೃದ್ಧಿ ಚಕ್ರ ಮುಂದೆ ಸಾಗದು| 135 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್‌ ಪಕ್ಷವು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದೆಯೆಂಬ ಹೆಮ್ಮೆ ನಮಗಿದೆ: ಡಿ.ಬಸವರಾಜ|

ದಾವಣಗೆರೆ(ಡಿ.27): ಕಾಂಗ್ರೆಸ್‌ ಪಕ್ಷಕ್ಕಾಗಿ ಕಸ ಗುಡಿಸುವುದಕ್ಕೂ ಸಿದ್ಧರಿದ್ದು, ಕಾಂಗ್ರೆಸ್ಸಿನ ಹಮಾಲರು ಎಂಬುದಾಗಿ ತಮ್ಮನ್ನು ಟೀಕಿಸಿರುವ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತ ರಾವ್‌ ಅವರಿಗೆ ಧನ್ಯವಾದ ಹೇಳುವುದಾಗಿ ಕೆಪಿಸಿಸಿ ವಕ್ತಾರ, ಕೆಎಸ್‌ಐಸಿ ಮಾಜಿ ಅಧ್ಯಕ್ಷ ಡಿ.ಬಸವರಾಜ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌ ಕಾಂಗ್ರೆಸ್ಸಿನ ಆರೋಪಗಳಿಗೆ ಪ್ರತಿಕ್ರಿಯೆ ನೀಡುವ ವೇಳೆ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಸಾಮಾನ್ಯ ಕಾರ್ಯಕರ್ತರಾದ ನಮ್ಮನ್ನು ಹಮಾಲರು ಎಂಬುದಾಗಿ ಕರೆದಿದ್ದಾರೆ. ಇದಕ್ಕಾಗಿ ಯಶವಂತ ರಾವ್‌ಗೆ ಧನ್ಯವಾದ ಅರ್ಪಿಸುತ್ತೇವೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗ್ರಾಪಂಗೆ ಸ್ಪರ್ಧಿಸಿದ್ದ ಇಬ್ಬರು ಅಭ್ಯರ್ಥಿಗಳ ನಿಧನ

ಹಮಾಲರು ಎಂದರೆ ಮೈಮುರಿದು ಕಷ್ಟಪಟ್ಟು ಪ್ರಾಮಾಣಿಕವಾಗಿ ದುಡಿಯುವ ಶ್ರಮಿಕ ವರ್ಗವಾಗಿದೆ. ಈ ವರ್ಗಕ್ಕೆ ನಮ್ಮನ್ನು ಸೇರಿಸಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಹಮಾಲಿಗಳು ಇಲ್ಲದೇ ದೇಶದ ಅಭಿವೃದ್ಧಿ ಚಕ್ರ ಮುಂದೆ ಸಾಗದು. 135 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್‌ ಪಕ್ಷವು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದೆಯೆಂಬ ಹೆಮ್ಮೆ ನಮಗಿದೆ ಎಂದು ಹೇಳಿದ್ದಾರೆ

ಇಂತಹ ಐತಿಹಾಸಿಕ ಕಾಂಗ್ರೆಸ್‌ ಪಕ್ಷದ ಹಮಾಲರಾಗಲಿಕ್ಕೆ ಪುಣ್ಯಬೇಕು. ಕಾಂಗ್ರೆಸ್‌ ಪಕ್ಷವನ್ನು ಹೆತ್ತ ತಾಯಿಯಂತೆ ಪ್ರೀತಿಸುತ್ತೇವೆ. ಅಪಾರ ಗೌರವ, ಅಭಿಮಾನವನ್ನು ಪಕ್ಷದ ಬಗ್ಗೆ ನಾವು ಹೊಂದಿದ್ದೇವೆ. ಇಂತಹ ಚರಿತ್ರಾರ್ಹ ಪಕ್ಷದ ಹಮಾಲರಾಗುವುದಕ್ಕೂ ಯೋಗ ಬೇಕು. ಅಂತಹ ಯೋಗ ನಾವು ಪಡೆದಿದ್ದೇವೆ. ಅದಕ್ಕೆ ನಮಗೆ ಸಂತೋಷ, ಹೆಮ್ಮೆ ಇದೆ ಎಂದು ಯಶವಂತ ರಾವ್‌ ಟೀಕಿಗೆ ಡಿ.ಬಸವರಾಜ ಪ್ರತಿಕ್ರಿಯಿಸಿದ್ದಾರೆ.
 

click me!