ಆಸ್ತಿಗಾಗಿ ಅಪ್ಪನಿಗೇ ವಿಷವಿಕ್ಕಿ ಕೊಂದನಾ ಪುತ್ರ; ದೂರು ಕೊಟ್ಟ ಬೆನ್ನಲ್ಲೇ ತಂದೆಯ ಅನುಮಾನಾಸ್ಪದ ಸಾವು!

Published : Jan 27, 2026, 02:31 PM IST
Koppal Property Dispute

ಸಾರಾಂಶ

ಕೊಪ್ಪಳ ಜಿಲ್ಲೆಯ ವರಣಖೇಡ ಗ್ರಾಮದಲ್ಲಿ, ಮಗನ ವಿರುದ್ಧ ಆಸ್ತಿ ಕಿರುಕುಳದ ಬಗ್ಗೆ ಪೊಲೀಸ್ ದೂರು ನೀಡಿದ ಮರುದಿನವೇ ತಂದೆ ವೆಂಕೋಬಾ ಹಂಚಿನಾಳ ಅವರು ತಮ್ಮ ಜಮೀನಿನಲ್ಲಿ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾರೆ. ಇದು ಆಸ್ತಿಗಾಗಿ ಮಗನೇ ಮಾಡಿದ ಕೊಲೆ ಎಂದು ಮೃತನ ತಾಯಿ ಆರೋಪಿಸಿದ್ದಾರೆ.

ಕೊಪ್ಪಳ (ಜ.27): ಜಿಲ್ಲೆಯ ಕನಕಗಿರಿ ತಾಲೂಕಿನ ವರಣಖೇಡ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಮಗನ ಕಿರುಕುಳದ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ತಂದೆಯು ಮರುದಿನವೇ ಜಮೀನಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

50 ವರ್ಷದ ವೆಂಕೋಬಾ ಹಂಚಿನಾಳ ಸಾವನ್ನಪ್ಪಿದ ದುರ್ದೈವಿ. ಇದು ಕೇವಲ ಸಾವಲ್ಲ, ಆಸ್ತಿಗಾಗಿ ಮಗನೇ ಮಾಡಿರುವ ವ್ಯವಸ್ಥಿತ ಕೊಲೆ ಎಂದು ಮೃತನ ತಾಯಿ ಗಂಭೀರ ಆರೋಪ ಮಾಡಿದ್ದಾರೆ.

ಘಟನೆಯ ಹಿನ್ನೆಲೆ

ವರಣಖೇಡ ಗ್ರಾಮದ ವೆಂಕೋಬಾ ಹಂಚಿನಾಳ ಅವರಿಗೆ ಸುಮಾರು 10 ಎಕರೆ ಜಮೀನಿದ್ದು, ಈ ಆಸ್ತಿ ವಿಚಾರವಾಗಿ ಕಳೆದ ಕೆಲವು ಸಮಯದಿಂದ ತಂದೆ ಮತ್ತು ಮಗ ವೀರೇಶ ನಡುವೆ ನಿರಂತರವಾಗಿ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಮಗ ಮತ್ತು ಸೊಸೆಯ ಕಿರುಕುಳ ತಾಳಲಾರದೆ ವೆಂಕೋಬಾ ಅವರು ಎರಡು ದಿನಗಳ ಹಿಂದೆಯಷ್ಟೇ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಮಗನ ವಿರುದ್ಧ ದೂರು ದಾಖಲಿಸಿದ್ದರು. ಆದರೆ, ದೂರು ನೀಡಿದ ಮರುದಿನವೇ ವೆಂಕೋಬಾ ಅವರು ತಮ್ಮ ಜಮೀನಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ಸಂಬಂಧಿಕರ ಆಕ್ರೋಶ ಮತ್ತು ದೂರು

ವೆಂಕೋಬಾ ಅವರ ಸಾವು ಸಹಜವಲ್ಲ, ಅವರನ್ನು ಮಗನೇ ವಿಷ ಹಾಕಿ ಕೊಂದಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಮೃತನ ತಾಯಿ ಸೂರಮ್ಮ ಅವರು ಈ ಕುರಿತು ಕನಕಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, 'ನನ್ನ ಮಗನ ಸಾವಿಗೆ ಆತನ ಮಗ (ಮೊಮ್ಮಗ), ಸೊಸೆ ಮತ್ತು ಹೆಂಡತಿಯೇ ಕಾರಣ. ಆಸ್ತಿಗಾಗಿ ಸಂಚು ರೂಪಿಸಿ ಈ ಕೃತ್ಯ ಎಸಗಿದ್ದಾರೆ' ಎಂದು ದೂರಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು

ವಿಷಯ ತಿಳಿಯುತ್ತಿದ್ದಂತೆ ಕನಕಗಿರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿಯ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಸ್ಥಳೀಯವಾಗಿ ಈ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದ್ದು, ಹೆತ್ತ ತಂದೆಯನ್ನೇ ಆಸ್ತಿಗಾಗಿ ಮಗ ಕೊಂದಿರುವ ಸಾಧ್ಯತೆ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

PREV
Read more Articles on
click me!

Recommended Stories

ದಾವಣಗೆರೆ ನವ ವಿವಾಹಿತನ ಆತ್ಮ*ಹತ್ಯೆಗೆ ಮೇಜರ್ ಟ್ವಿಸ್ಟ್; ಹೆಂಡತಿ ಬೇರೆಯವನೊಟ್ಟಿಗೆ ಹೋಗಿದ್ದೇ ಸಾವಿಗೆ ಕಾರಣವಾ?
ಲಕ್ಕುಂಡಿ ಬಂಗಾರದ ನಿಧಿ ತೆಗೆದುಕೊಂಡ ಸರ್ಕಾರ, ಪ್ರತಿವರ್ಷ ಲಕ್ಕುಂಡಿ ಉತ್ಸವ ಆಚರಿಸಿ: ಎಸ್.ಎಸ್. ಪಾಟೀಲ ಆಗ್ರಹ