ಯುಪಿಎ ಸರ್ಕಾರ ಮಾಡಿದ ಸಾಲ ತೀರಿಸಲು ಸಿಲಿಂಡರ್‌ ಬೆಲೆ ಹೆಚ್ಚಳ: ಬಿಜೆಪಿ ಸಂಸದ ಕರಡಿ

By Kannadaprabha NewsFirst Published Sep 2, 2021, 11:53 AM IST
Highlights

* ನಿಮ್ಮಪ್ಪ ಮಾಡಿದ ಸಾಲವನ್ನು ಮಗನಾಗಿ ನೀನು ತೀರಿಸ್ತೀಯಲ್ಲವೇ?
* ಪತ್ರಕರ್ತರನ್ನೇ ಪ್ರಶ್ನಿಸಿದ ಸಂಸದ ಸಂಗಣ್ಣ ಕರಡಿ
* ಇನ್ನೊಂದು ಲಕ್ಷ ಕೋಟಿ ರುಪಾಯಿ ಸಾಲ ಇದೆ
 

ಕೊಪ್ಪಳ(ಸೆ.02):  ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಮಾಡಿದ ಸಾಲ ತೀರಿಸಲು ಈಗ ಸಿಲಿಂಡರ್‌ ಬೆಲೆಯಲ್ಲಿ ಹೆಚ್ಚಳವಾಗುತ್ತಿದೆ. ಯುಪಿಎ ಸರ್ಕಾರ ಕಂಪನಿಗಳಿಗೆ ಬಾಂಡ್‌ ನೀಡಿದ್ರು, ಅದನ್ನು ಹರಿಬೇಕಾಗಿದೆ (ತೀರಿಸಬೇಕಾಗಿದೆ).

ಬುಧವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವ ಪ್ರಭು ಚವ್ಹಾಣ ಅವರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸಂಸದ ಸಂಗಣ್ಣ ಕರಡಿ ಅವರನ್ನು ಪತ್ರಕರ್ತರು ಅಡುಗೆ ಅನಿಲದ ಬೆಲೆ ಏರಿಕೆ ಕುರಿತು ಪ್ರಶ್ನಿಸಿದಾಗ ಉತ್ತರಿಸಿದ ಪರಿ ಇದು.
ಸಿಲಿಂಡರ್‌ ಬೆಲೆ ಹೆಚ್ಚಳ ಕುರಿತು ಸಚಿವರನ್ನು ಎಷ್ಟೇ ಪ್ರಶ್ನೆ ಮಾಡಿದರೂ ಅವರು ಉತ್ತರಿಸಲೇ ಇಲ್ಲ. ನನ್ನ ಇಲಾಖೆಯದ್ದನ್ನು ಕೇಳಿ ಹೇಳುತ್ತೇನೆ. ಸಿಲಿಂಡರ್‌ ಬೆಲೆ ಹೆಚ್ಚಳದ ಕುರಿತು ನಾನೇನು ಉತ್ತರ ನೀಡಲಿ ಎಂದು ಅಸಹಾಯಕತೆ ವ್ಯಕ್ತಪಡಿಸಿ, ಪಕ್ಕದಲ್ಲಿಯೇ ಇದ್ದ ಸಂಸದ ಸಂಗಣ್ಣ ಕರಡಿ ಅವರತ್ತ ಸನ್ನೆ ಮಾಡಿದರು.

ಪತ್ರಕರ್ತರ ಪ್ರಶ್ನೆಗೆ ಕೆಂಡಾಮಂಡಲರಾದ ಸಂಸದರು, ಪತ್ರಕರ್ತರನ್ನೇ ಮರುಪ್ರಶ್ನೆ ಮಾಡಿದರು. ದೇಶದ ಸಾಲ ತೀರಿಸಲು ಜನರು ಸಾಲ ಮಾಡಬೇಕಲ್ಲ ಎನ್ನುವ ಪ್ರಶ್ನೆಗೆ, ನಿಮ್ಮಪ್ಪ ಮಾಡಿದ್ದ ಸಾಲವನ್ನು ಮಗನಾಗಿ ನೀನು ತೀರಿಸ್ತೀಯೋ ಇಲ್ಲವೋ ಎಂದು ಪ್ರಶ್ನೆ ಮಾಡಿದರು.

LPG ಗ್ಯಾಸ್‌ ಸಿಲಿಂಡರ್‌ ಮತ್ತಷ್ಟು 'ಭಾರ': 15 ದಿನದಲ್ಲಿ 2ನೇ ಬಾರಿ ಬೆಲೆ ಏರಿಕೆ!

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಸಾಲ ಮಾಡಿದೆ, ಬಾಂಡ್‌ ಮಾಡಿ ಕೊಟ್ಟಿದೆ. ಹೀಗಾಗಿ, ಅದನ್ನು ಎನ್‌ಡಿಎ ಸರ್ಕಾರ ತೀರಿಸಬೇಕಾಗಿದೆ. ಈಗಾಗಲೇ . 59 ಸಾವಿರ ಕೋಟಿ ಹಾಗೂ . 39 ಸಾವಿರ ಕೋಟಿಯಂತೆ ಎರಡು ಬಾರಿ ತೀರಿಸಿದೆ. ಇನ್ನು ಒಂದು ಲಕ್ಷ ಕೋಟಿ ರು. ಸಾಲ ಇದೆ. ಅದನ್ನು ತೀರಿಸಿಬೇಕೋ ಅಥವಾ ಬೇಡವೋ ಎಂದು ಪ್ರಶ್ನೆ ಮಾಡಿದರು.

ಏರಿಕೆಯಿಂದ ಜನರು ಸಾಲ ಮಾಡಬೇಕಾ? ಎಂದು ಕೇಳಿದರೆ, ಹಾಗಾದರೆ ದೇಶವನ್ನು ಒತ್ತೆ ಇಡಬೇಕಾ ಎಂದು ಮರುಪ್ರಶ್ನೆ ಹಾಕಿದರು. ನೀವು ಬಡವರ ಬಗ್ಗೆ ಕಾಳಜಿಯಿಂದ ಕೇಳುತ್ತಿದ್ದೀರಿ, ಆದರೆ, ನಮಗೂ ಬಡವರ ಬಗ್ಗೆ ಕಾಳಜಿ ಇದೆ. ಇದಕ್ಕಾಗಿಯೋ ಕೋವಿಡ್‌ ಸಮಯದಲ್ಲಿ ಎಷ್ಟುಪಡಿತರ ಉಚಿತವಾಗಿ ಕೊಟ್ಟಿದೆ ಎಂದು ಗೊತ್ತಿದೆಯಾ ನಿಮಗೆ?. ಬಡವರ ಬಗ್ಗೆ ಕಾಳಜಿ ಇರುವುದರಿಂದಲೇ ಈ ರೀತಿ ಮಾಡಿರುವುದು. ಆದರೆ, ದೇಶದ ಸಾಲ ತೀರಿಸುವುದಕ್ಕಾಗಿ ಸಿಲಿಂಡರ್‌ ಬೆಲೆ ದುಬಾರಿಯಾಗಿದೆ. ಸರ್ಕಾರ ನಡೆಸಬೇಕಲ್ಲ, ಸರ್ಕಾರಕ್ಕೆ ಕೋವಿಡ್‌ನಿಂದ ಆದಾಯವೇ ಇಲ್ಲದಂತೆ ಆಗಿದೆ. ಇದೆಲ್ಲ ನಿಮಗೆ ಗೊತ್ತಿಲ್ಲವೇ ಎಂದು ಹೇಳುತ್ತಲೇ ಮುಂದೆ ಸಾಗಿದರು.
 

click me!