ಕೊರೋನಾ ಪ್ರಯೋಗಾಲಯದಲ್ಲಿ ಕೊಪ್ಪಳದ ವಿಜ್ಞಾನಿ...!

By Kannadaprabha NewsFirst Published Apr 19, 2020, 8:11 AM IST
Highlights

ಪುಣೆಯಲ್ಲಿರುವ ಎನ್‌ಸಿಎಲ್‌ (ನ್ಯಾಷನಲ್‌ ಕೆಮಿಕಲ್‌ ಲ್ಯಾಬ್‌)ನಲ್ಲಿ ಕೆಲಸ ಮಾಡುತ್ತಿರುವ ಕೊಪ್ಪಳದ ವಿಜ್ಞಾನಿ ಸೈಯದ್‌ ದಸ್ತಗಿರಿ| ಬಿಸಿಜಿ ಹಾಕಿಸಿಕೊಂಡಿರುವುದರಿಂದ ಭಾರತದಲ್ಲಿ ಹರಡುವ ಪ್ರಮಾಣ ಕಡಿಮೆ|60 ವರ್ಷ ಮೇಲ್ಪಟ್ಟವರಿಗೆ ಮತ್ತೆ ಬಿಸಿಜಿ ಮದ್ದು ಹಾಕಿ​ದರೂ ಅಚ್ಚರಿ ಇಲ್ಲ|

ಸೋಮರಡ್ಡಿ ಅಳವಂಡಿ

ಕೊಪ್ಪಳ(ಏ.19): ಜಗತ್ತಿಗೆ ಕಂಟಕವಾಗಿರುವ ಮಹಾಮಾರಿ ಕೊರೋನಾ ನಿಗ್ರಹಕ್ಕಾಗಿ ದೇಶದಾದ್ಯಂತ ಪ್ರಯತ್ನ ನಡೆಯುತ್ತಿದೆ. ಅದರಲ್ಲೂ ಪುಣೆಯಲ್ಲಿರುವ ಎನ್‌ಸಿಎಲ್‌ (ನ್ಯಾಷನಲ್‌ ಕೆಮಿಕಲ್‌ ಲ್ಯಾಬ್‌) ನಲ್ಲಿ ಕೊಪ್ಪಳದ ವಿಜ್ಞಾನಿ ಸೈಯದ್‌ ದಸ್ತಗಿರಿ ಕೆಲಸ ಮಾಡುತ್ತಿದ್ದಾರೆ. ಬಿಡುವಿಲ್ಲದ ಕೆಲಸದ ನಡುವೆಯೂ ಕೋವಿಡ್‌-19 ನಿಗ್ರಹ ಕುರಿತು ‘ಕನ್ನಡಪ್ರಭ’ದೊಂದಿಗೆ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಕೊಪ್ಪಳ ಗವಿಸಿದ್ಧೇಶ್ವರ ಶಿಕ್ಷಣ ಸಂಸ್ಥೆಯಲ್ಲಿಯೇ ಅಭ್ಯಾಸ ಮಾಡಿರುವ ಇವರು ನಂತರ ಮೈಕ್ರೋ ಬಯಾಲಜಿಯಲ್ಲಿ ಕಲಬುರಗಿ ವಿವಿಯಲ್ಲಿ ಎಂಎಸ್ಸಿ ಪದವಿ ಪಡೆದಿದ್ದಾರೆ. ಪಿಎಚ್‌ಡಿ ನಂತರ ಚೀನಾ ಹಾಗೂ ಕೊರಿಯಾಗಳಲ್ಲಿ ಉನ್ನತ ಅಭ್ಯಾಸವನ್ನು ಮಾಡಿ, ಈಗ ಪುಣೆಯ ಎನ್‌ಸಿಎಲ್‌ನಲ್ಲಿ 2012ರಿಂದ ವಿಜ್ಞಾನಿಯಾಗಿದ್ದಾರೆ. ಜಗತ್ತಿನ ಎಲ್ಲ ಪ್ರಯೋಗಾಲಯಗಳಲ್ಲಿ ಇದುವರೆಗೂ ಬಿಎಸ್‌ಎಲ್‌ 3 ವರೆಗೂ ಮಾತ್ರ ಸಂಶೋಧನೆಯಾಗಿದ್ದು, ಕೋವಿಡ್‌-19 ವೈರಾಣು ಬಿಎಸ್‌ಎಲ್‌ 4 ಹಂತದ್ದಾಗಿದ್ದರಿಂದ ಇದುವರೆಗೂ ಇದರ ನಿಯಂತ್ರಣಕ್ಕೆ ಔಷಧಿ ಕಂಡು ಹಿಡಿಯಲು ಆಗಿಲ್ಲ.

ಪೊಲೀಸರ ಕಣ್ತಪ್ಪಿಸಿ ಜನರ ಓಡಾಟ: ಗಂಗಾವತಿಯಲ್ಲಿ ದ್ರೋಣ್‌ ಕಣ್ಗಾವಲು
 

ಇದುವರೆಗೂ ಲಗ್ಗೆ ಇಟ್ಟಿದ್ದ ವೈರಸ್‌ ನಿಯಂತ್ರಣ ಮಾಡಲು ಕಂಡು ಹಿಡಿದಿರುವ ಔಷಧಿಯನ್ನೇ ಮುಂದಿಟ್ಟುಕೊಂಡು, ಈಗ ಬಂದಿರುವ ಕೊರೋನಾಕ್ಕೆ ಯಾವುದು ಸೂಕ್ತವಾಗುತ್ತದೆ ಎನ್ನುವ ಪ್ರಯೋಗ ನಡೆದಿದೆ. ಇದರಲ್ಲಿ ಒಂದಿಷ್ಟು ಪ್ರಗತಿಯನ್ನು ಸಾಧಿಸಲಾಗಿದೆ.

ಪಾಶ್ಚಾತ್ಯ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಇಮ್ಯೂನಿಟಿ ಹೆಚ್ಚಳವಾಗಿದೆ. ಇದುವೆ ನಮ್ಮನ್ನು ಕಾಪಾಡುತ್ತಿದೆ. ಹೀಗಾಗಿ, ಗುಣಮುಖರಾಗುತ್ತಿರುವವರ ಸಂಖ್ಯೆಯೂ ಅಧಿಕವಾಗಿದೆ.
ಪಾಶ್ಚಿಮಾತ್ಯ ದೇಶಗಳಲ್ಲಿ ಸ್ಟಿರಾಯಿಲ್‌ನಿಂದ ಕಡಿಮೆ ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ. ಆದರೆ, ಭಾರತೀಯರಲ್ಲಿ ಮೆಲೆನಿಲ್‌ ಪ್ರಮಾಣದಿಂದ ಕಪ್ಪಾಗಿರುತ್ತೇವೆ. ಹುಟ್ಟುತ್ತಲೇ ಮಣ್ಣಿನಲ್ಲಿ ಆಡಿ ಬೆಳೆಯುತ್ತೇವೆ. ಇದರಿಂದ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗಿರುತ್ತದೆ. ಅದಲ್ಲದೆ ಭಾರತೀಯರ ಸ್ಕಿನ್‌ ಸಹ ರೋಗವನ್ನು ತಡೆಯುವ ತಾಕತ್ತು ಹೊಂದಿರುತ್ತದೆ. ಆದರೆ, ಇದು ಪಾಶ್ಚಿಮಾತ್ಯರಲ್ಲಿ ತೀರಾ ಕಡಿಮೆ.

ಬಿಸಿಜಿ ಹಾಕಿರುವುದರಿಂದ ನಮ್ಮಲ್ಲಿ ಇದನ್ನು ತಡೆಯುವ ಶಕ್ತಿ ಇದೆ ಎನ್ನುವ ಬಗ್ಗೆಯೂ ಸಂಶೋಧನೆ ನಡೆಯುತ್ತಿದೆ. ಇದರ ಪ್ರಯೋಗಾಲಯ ವರದಿ ಅಂತಿಮವಾಗಿ ಬರಬೇಕಾಗಿದೆ. ಹೀಗಾಗಿ, 60 ವರ್ಷ ಮೇಲ್ಪಟ್ಟವರಿಗೆ ಮತ್ತೊಮ್ಮೆ ಬಿಸಿಜಿ ಹಾಕುವ ತೀರ್ಮಾನ ತೆಗೆದುಕೊಂಡರೂ ಅಚ್ಚರಿ ಇಲ್ಲ ಎನ್ನಲಾಗುತ್ತದೆ. ಆದರೆ ಇದೆಲ್ಲವೂ ನಡೆಯುತ್ತಿರುವ ಪ್ರಯೋಗಗಳು ಅಷ್ಟೆ.

ಭಾರತ ಸೇರಿದಂತೆ ಜಗತ್ತಿನಾದ್ಯಂತ ಔಷಧಿಯನ್ನು ಕಂಡು ಹಿಡಿಯುವ ಪ್ರಯತ್ನ ನೂರಾರು ಪ್ರಯೋಗಾಲಯಗಳಲ್ಲಿ ನಡೆದಿದೆ. ಕೆಲ ಮಟ್ಟಿಗೆ ಪ್ರಗತಿಯನ್ನೂ ಕಂಡಿದೆ. ಆದರೂ ಅದನ್ನು ಏಕಾಏಕಿ ಬಳಕೆ ಮಾಡುವುದು ಸಾಧ್ಯವಿಲ್ಲ. ಹೀಗಾಗಿ, ಸಂಶೋಧನೆಗಳು ನಡೆಯುತ್ತವೆ. ಈಗ ಬಹುದೊಡ್ಡ ಮದ್ದು ಎಂದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಸೈಕಲ್‌ ತಪ್ಪಿಸಿದರೆ ಸಾಕು, ಅದು ನಿಯಂತ್ರಣ ತನ್ನಿಂದ ತಾನೆ ಪ್ರಾರಂಭವಾಗುತ್ತದೆ. ಹೀಗಾಗಿ, ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಗತ್ಯವಾಗಿದೆ.

ಈ ವೈರಸ್‌ನ ಸಮಸ್ಯೆ ಎಂದರೆ ಕಾಯಿ​ಲೆ ಇದ್ದರೂ ಬೇಗನೇ ಗುಣಲಕ್ಷಣಗಳು ಗೊತ್ತಾಗುವುದೇ ಇಲ್ಲ. ಇನ್ನು ಅಚ್ಚರಿ ಎಂದರೆ ಆರೋಗ್ಯವಾಗಿದ್ದರೆ ಅದು ಕಾಣಿಸಿಕೊಳ್ಳುವುದೇ ಇಲ್ಲ. ಆದರೆ, ಆತನ ಸಂಪರ್ಕಕ್ಕೆ ವೀಕ್‌ ಇದ್ದವರು ಬಂದರೆ ಆತನಿಗೆ ಬೇಗ ತಗಲುತ್ತದೆ ಮತ್ತು ಕಾಣಿಸಿಕೊಳ್ಳುತ್ತದೆ. ಹೀಗಾಗಿ, ರಾರ‍ಯಂಡಮ್‌ ಟೆಸ್ಟ್‌ ಮಾಡಿಸುವುದು ಅನಿವಾರ್ಯ ಎನ್ನುತ್ತಾರೆ.
 

click me!