
ಚಿಕ್ಕಮಗಳೂರು (ಮಾ. 5): ಮಧ್ಯಪ್ರಾಚ್ಯದಲ್ಲಿ ಇರಾನ್-ಇಸ್ರೇಲ್ ನಡುವೆ ನಡೆಯುತ್ತಿರುವ ಭೀಕರ ಯುದ್ಧದ ನಡುವೆ ನಾಪತ್ತೆಯಾಗಿದ್ದ ಕರ್ನಾಟಕದ ಯುವಕನೊಬ್ಬ ಪತ್ತೆಯಾಗಿದ್ದು, ಆತಂಕದಲ್ಲಿದ್ದ ಕುಟುಂಬಸ್ಥರು ಈಗ ನಿಟ್ಟುಸಿರು ಬಿಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದ ನಿಶ್ಚಿತ್ ಎಂಬ ಯುವಕ ಇದೀಗ ಸುರಕ್ಷಿತವಾಗಿದ್ದಾನೆ ಎಂಬ ಅಧಿಕೃತ ಮಾಹಿತಿ ಲಭ್ಯವಾಗಿದೆ.
ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ನಂತರ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಈ ವೇಳೆ ಇರಾನ್ನಲ್ಲಿ ವ್ಯಾಪಾರಿ ನೌಕಾಪಡೆಯಲ್ಲಿ (Merchant Navy) ಕೆಲಸ ಮಾಡುತ್ತಿದ್ದ ನಿಶ್ಚಿತ್ ಕಳೆದ ಒಂದು ವಾರದಿಂದ ಪೋಷಕರ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದರು. ಮಗನ ಯಾವುದೇ ಮಾಹಿತಿ ಸಿಗದ ಕಾರಣ ಆತಂಕಗೊಂಡ ಪೋಷಕರು ನೆರವಿಗಾಗಿ ಸರ್ಕಾರಕ್ಕೆ ಮೊರೆ ಹೋಗಿದ್ದರು.
ನಿಶ್ಚಿತ್ ಕುಟುಂಬದವರು ವಿಧಾನ ಪರಿಷತ್ ಸದಸ್ಯೆ ಡಾ. ಆರತಿ ಕೃಷ್ಣ ಅವರ ಗಮನಕ್ಕೆ ವಿಷಯ ತಂದಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಆರತಿ ಕೃಷ್ಣ ಅವರು ಭಾರತೀಯ ರಾಯಭಾರಿ ಶ್ರೀ ರುದ್ರ ಗೌರವ್ ಶ್ರೇಷ್ಠ ಅವರನ್ನು ಸಂಪರ್ಕಿಸಿ ಪರಿಸ್ಥಿತಿಯನ್ನು ವಿವರಿಸಿದ್ದರು. ರಾಯಭಾರಿ ಕಚೇರಿಯು ಕೂಡಲೇ ನಿಶ್ಚಿತ್ ಕೆಲಸ ಮಾಡುತ್ತಿದ್ದ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿ, ಆತ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಂಡಿದೆ.
ಸಂಪರ್ಕ ಕಡಿತಕ್ಕೆ ಯುದ್ಧವೇ ಕಾರಣ
ಇರಾನ್ನಲ್ಲಿ ಯುದ್ಧದ ಹಿನ್ನೆಲೆಯಲ್ಲಿ ಇಂಟರ್ನೆಟ್ ಮತ್ತು ನೆಟ್ವರ್ಕ್ ಸಂಪರ್ಕ ಕಡಿತಗೊಂಡಿತ್ತು. ಈ ತಾಂತ್ರಿಕ ಕಾರಣದಿಂದಾಗಿ ನಿಶ್ಚಿತ್ಗೆ ತನ್ನ ಪೋಷಕರನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಇದೀಗ ರಾಯಭಾರಿ ಕಚೇರಿಯ ಮಧ್ಯಸ್ಥಿಕೆಯಿಂದಾಗಿ ಯುವಕ ಕ್ಷೇಮವಾಗಿರುವುದು ಪೋಷಕರಿಗೆ ತಿಳಿದಿದ್ದು, ಅವರ ಮನೆಮಂದಿಯಲ್ಲಿದ್ದ ಆತಂಕ ದೂರವಾಗಿದೆ.
ಅನಿವಾಸಿ ಭಾರತೀಯರಿಗೆ ತುರ್ತು ಸೂಚನೆ
ಮಧ್ಯಪ್ರಾಚ್ಯ ದೇಶಗಳಲ್ಲಿ ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ನೆಲೆಸಿರುವ ಕೋಟ್ಯಾಂತರ ಭಾರತೀಯರು ಇಂತಹ ಯುದ್ಧದ ಸಂದರ್ಭಗಳಲ್ಲಿ ಆತಂಕಕ್ಕೊಳಗಾಗದಂತೆ ಸರ್ಕಾರ ಭರವಸೆ ನೀಡಿದೆ. ಕುಟುಂಬ ಸದಸ್ಯರ ಸಂಪರ್ಕ ಸಿಗದಿದ್ದಲ್ಲಿ ತಕ್ಷಣವೇ ಸರ್ಕಾರಿ ಸಹಾಯವಾಣಿ ಅಥವಾ 'ಅನಿವಾಸಿ ಭಾರತೀಯ ಸಮಿತಿ'ಯನ್ನು ಸಂಪರ್ಕಿಸುವಂತೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.