ಅಫಜಲ್ಪುರ: ಖಾಜಾಸಾಬ್ ಉರುಸ್, ಹಿಂದೂ- ಮುಸ್ಲಿಮ್‌ ಭಕ್ತರ ಸಂಗಮ

By Kannadaprabha NewsFirst Published Jan 20, 2020, 10:16 AM IST
Highlights

ಇಂದಿನಿಂದ 886 ನೇ ಖಾಜಾಸಾಬ್ ಉರುಸ್| ಹಿಂದೂ- ಮುಸ್ಲಿಮರ ಭಾವೈಕ್ಯತೆ ಬೆಸೆದ ಸಂಗಮ ಕ್ಷೇತ್ರ ಹೈದ್ರಾ| ಕರ್ನಾಟಕ, ಮಹಾರಾಷ್ಟ್ರದಿಂದ ಸಾವಿರಾರು ಭಕ್ತರ ಸಂಗಮ|

ಕಲಬುರಗಿ/ ಅಫಜಲ್ಪುರ(ಜ.20):  ಅಫಜಲ್ಪುರ ತಾಲೂಕಿನ ಸುಕ್ಷೇತ್ರ, ಹಿಂದು-ಮುಸ್ಲಿಂ ಭಾವೈಕ್ಯತೆ ಬೆಸೆದ ಸಾಮರಸ್ಯದ ಸ್ಥಳವಾದಂತಹ, ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿರುವ ಹೈದ್ರಾ ಗ್ರಾಮದಲ್ಲೀಗ ಹಜರತ ಖ್ವಾಜಾ ಹಾಜಿ ಸೈಫುಲ್ ಮುಲ್ಕ ಚಿಸ್ತಿ ಇವರ ಉರುಸ್ ಸಂಭ್ರಮ ಮನೆ ಮಾಡಿದೆ. ಜ. 21 ರಿಂದ 3 ದಿನಗಳ ಕಾಲ ಸೂಫಿಸಂತನನ್ನು ಜನ ದೂರದಿಂದ ಬಂದು ಇಲ್ಲಿ ಸೇರಿ ಗಂಧ ಲೇಪನ, ಚಾದರ್ ಅರ್ಪಣೆ, ನೈವೇದ್ಯ ಇತ್ಯಾದಿ ರೂಪಗಳಿಂದ ಆರಾಧಿಸುತ್ತಾರೆ. ಅವರ ಕೃಪೆಗೆ ಪಾತ್ರರಾಗುವ ತವಕದಲ್ಲಿದ್ದಾರೆ. 

ಹೆದ್ರಾ ಸುಪ್ರಸಿದ್ಧಿ ಪಡೆದದ್ದೇ ಖಾಜಾ ಸಾಬ್ ಅವರ ನೆಲೆಯಿಂದ. ಹೀಗಾಗಿ ಇಲ್ಲಿಗೆ ಹಿಂದು- ಮುಸ್ಲಿಂ ಭಕ್ತರು ಬಂದು ಅವರನ್ನು ಪೂಜಿಸುತ್ತಾರೆ. ನಮಿಸುತ್ತ ತಮ್ಮ ಕಷ್ಟಕ್ಕೆ ಪರಿಹಾರ ಪಡೆದುಕೊಳ್ಳುತ್ತಾರೆ. ಉರುಸ್ ಅಂಗವಾಗಿ ಗುರುವಾರ ಬೆಳಗ್ಗೆ ಹಜರತ ಖ್ವಾಜಾ ಹಾಜಿ ಸೈಫುಲ್ ಮುಲ್ಕ ಚಿಸ್ತಿ ಅವರ ಪವಿತ್ರ ಗದ್ದುಗೆಗೆ ಸುಗಂಧ ದ್ರವ್ಯಗಳಿಂದ ಲೇಪನ ಮಾಡಲಾಯಿತು.ಗುಸುಲ್ ದಿನನಿತ್ಯ ಊರಿನ ಜನರಿಂದ ನೈವಿಧ್ಯ ಕಾರ್ಯಕ್ರಮ ಕಳಸಾಹೋಹಣ ಕಾರ್ಯಕ್ರಮ ಜರುಗಿತು. 

ಫಕೀರರಿಂದ ಕುರಾನ್ ಪಠಣ: 

ಅನೇಕ ಸಾಧು ಸಂತರು ಫಕೀರರಿಂದ ಶಾಸ್ತ್ರಗಳ ಕಾರ್ಯಕ್ರಮ ನಂತರ ಕುರಾನ ಪಠಣ ಧರ್ಮಸಭೆ ನಡೆದವು. ಸಂಗೊಳ್ಳಿ ರಾಯಣ್ಣ ನಾಟಕ ಜನಮನ ರಂಜಿಸಿತು. ಜ.21ರ ಬೆಳಗ್ಗೆ 5 ಕ್ಕೆ ಕರಜಗಿಯಿಂದ ಗಂಧದ ಬಂಡಿ ವೆಂಕಟೇಶ ಮಾಲೀಪಾಟೀಲರ ಮನೆಯಿಂದ ಹೊರಡುತ್ತದೆ. ಗೌಡಪ್ಪಗೌಡ ಪೊಲೀಸ್ ಪಾಟೀಲ್ ಇರುತ್ತಾರೆ. ವಿವಿಧ ವಾಧ್ಯ ವೈಭವಗಳೊಂದಿಗೆ ಹೈದರಾ ಗ್ರಾಮಕ್ಕೆ ಆಗಮಿಸುವುದು. ನಂತರ 8 ಗಂಟೆಗೆ ಬಂಡಿ ಮರಳಿ ಕರಜಗಿ ಗ್ರಾಮಕ್ಕೆ ತೆರಳುವುದು. ಪವಿತ್ರ ಗದ್ದುಗೆಗೆ ಗುಸುಲ ಅರ್ಚಕರಿಂದ ಜರುಗುವುದು. ಸಾವಿರಾರು ಭಕ್ತರಿಂದ ಗಲೀಫ ಹೂವಿನ ಚಾದರ ಖ್ವಾಜಾ ಸಾಹೇಬರಿಗೆ ಅರ್ಪಿಸಲಾಗುವುದು. ಸಂಜೆ 9 ಕ್ಕೆ ಸುಪ್ರಸಿದ್ದ ಕವ್ವಾಲಿ ಗಾಯಕರಾದ ರಬಿಯಾ ಚಿಸ್ತಿ ಬೆಂಗಳೂರು ಹಾಗೂ ಕಾಮಿಲ ಚಿಸ್ತಿ ಪುಣೆ ಇವರಿಂದ ಕವ್ವಾಲಿ ರಸಮಂಜರಿ ಕಾರ್ಯಕ್ರಮ ಜರುಗುವುದು. 

886 ವರ್ಷಗಳ ಇತಿಹಾಸ: 

ಗಡಿ ನಾಡಲ್ಲಿರುವ ಅಕ್ಕಲ ಕೋಟ ತಾಲೂಕಿನ ಹೈದರಾ ಗ್ರಾಮದ ಸೂಫಿಸಂತ ಹಜರತ್ ಖ್ವಾಜಾ ಹಾಜಿ ಸೈಫನಮುಲ್ಕ ಚಿಸ್ತಿ ಇವರದ್ದು 886 ವರ್ಷಗಳ ಇತಿಹಾಸವಿರುವ ದಗಾರ್. ಖ್ವಾಜಾ ಸಾಹೇಬರು ಸೌದಿ ಅರೇಬಿಯಾದಲ್ಲಿ ಜನಿಸಿ ಭಾರತಕ್ಕೆ ಬಂದವರು. ಧರ್ಮ ಗುರುಗಳಾದ ಖ್ವಾಜಾ ಉಸ್ಮಾ ಯಿನ್ ಹಾರುನ್ ದೆಹಲಿ ಇವರು ಅವರಿಗೆ ಗುರು ಬೋಧನೆ ನೀಡಿದರು. 

ಖ್ವಾಜಾ ಸೈಫನಮುಲ್ಕ ಅವರು ಕರ್ನಾಟಕದ ಗಡಿ ಜಿಲ್ಲೆ ಕಲಬುರಗಿ ಮೂಲಕ ತಮ್ಮ ಹಕೀಮ ವೃತ್ತಿ ಹಾಗೂ ಪವಾಡ ತೋರಿಸುತ್ತಾ ಅಫಜ ಲ್ಪುರ ತಾಲೂಕಿನ ಕರಜಗಿ ಗ್ರಾಮಕ್ಕೆ ಆಗಮಿಸಿದರು. ಅಲ್ಲಿ ಹೂಡೆಯ ಮೇಲೆ ಕುಳಿತು ತಮ್ಮ ಕೈಯಲ್ಲಿದ್ದ ಬೆತ್ತವನ್ನು ಕೊಟ್ಟರು. ಅಂದಿನಿಂದ ಇಂದಿನವರೆಗೂ ಅಲ್ಲಿಂದ ಗಂಧದ ಬಂಡಿಯ ಮೂಲಕ ಹೈದರಾ ಗ್ರಾಮಕ್ಕೆ ಗೌಡಪ್ಪಗೌಡ ಪಾಟೀಲರ ಮನೆಯಿಂದ ಶ್ರೀಗಂಧವನ್ನು ವಾಧ್ಯವೃಂದ ಮೇಳದೊಂದಿಗೆ ಗಂಧದ ಬಂಡಿಯ ಮೂಲಕ ಬರುತ್ತದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಣ್ಣೂರ ಮಾಶಾಳ ಹೊಸೂರ ಉಡಚಾಣ ಕರಜಗಿ ಶಿವೂರ ಕುಡಿಗನೂರ ತೋಳನೂರ ಉಪ್ಪಾರವಾಡಿ ಈ ಎಲ್ಲ ಗ್ರಾಮಗಳಿಂದ ವಿವಿಧ ವಾಧ್ಯ ವೈಭವಗಳೊಂದಿಗೆ ಎಣ್ಣೆ ಹೈದ್ರಾ ಊರಿಗೆ ಅರ್ಪಿಸುವ ಸಂಪ್ರದಾಯವಿದೆ. ದೀಪೋತ್ಸವ ಕಾರ್ಯಕ್ರಮ ನಂತರ ಖ್ವಾಜಾ ಸಾಹೇಬರ ಜಿಯಾರತ ಖುರಾನ ಪಠಣ ಜರುಗುವುದು. ಸತತ ೫ ದಿವಸಗಳವರಗೆ ಪ್ರಸಾದ ವಿತರಣೆ ಜರಗುವುದು ಎಂದು ಖ್ವಾಜಾ ಸೈಫುಲ ಮುಲ್ಕ ಕಮಿಟಿ ಹೈದ್ರಾ ಹುಸೇನಬಾಷಾ ಮುಜಾವರ ಅವರು ಹೇಳಿದ್ದಾರೆ. 

ಪವಾಡ ಪುರುಷರಾದವರು ಖಾಜಾಸಾಬ್ ಖಾಜಾ ಸಾಹೇಬರು ಹೈದ್ರಾ ಗ್ರಾಮಕ್ಕೆ ಬಂದು ಅಲ್ಲಿನ ಅನೇಕ ಮೂಢ ನಂಬಿಕೆ ಇನ್ನಿಲ್ಲದಂತೆ ಹೋಗಲಾಡಿಸಿದರು. ಜನರಿಗೆ ಒಳ್ಳೆಯ ಬೋಧನೆ ನೀಡಿ ಅನೇಕ ಪವಾಡ ತೋರಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದಲ್ಲದೆ ಅಲ್ಲೇ ಐಕ್ಯರಾದರು. ಇಲ್ಲಿ ನಡೆಯುವ ಜಾತ್ರೆಯಲ್ಲಿ ಸುತ್ತೂರಿನ ಎಣ್ಣೆ ಕೊಡ ತೆಗೆದುಕೊಂಡು ಬರುತ್ತಾರೆ. ಖ್ವಾಜಾ ಸಾಹೇಬರ ದರ್ಗಾ ಪಕ್ಕದಲ್ಲಿ ಒಂದು ಬಾವಿ ಇದೆ ಅಲ್ಲಿ ಛಡಿಬಾಬಾ ಐಕ್ಯವಾಗಿದ್ದಾರೆ. ಸವಿರಾರು ಜನರು ಸುಳ್ಳು ಅಣೆಮಾಡಿ ಬಾವಿ ಇಣುಕಿದರೆ ಅವರ ಕುಟುಂಬ ಸರ್ವನಾಶವಾಗುತ್ತದೆ ಎಂಬ ವಾಡಿಕೆ ಇದೆ. ಖ್ವಾಜಾ ಸಾಹೇಬರ ದೇವಸ್ಥಾನದಲ್ಲಿ ಸಾವಿರಾರು ಭಕ್ತರು ತಮ್ಮ ಮಾನಸಿಕ ನೋವು, ತೊಂದರೆಗಳಿಗೆ ಪರಿಹಾರ ಪಡೆಯುತ್ತಿದ್ದಾರೆ.
 

click me!