
ಮಂಡ್ಯ (ಆ.02): ಕನ್ನಡ ನಾಡಿನ ಜೀವನಾಡಿ ಕಾವೇರಿ (Cauvery) ಮತ್ತೊಮ್ಮೆ ಕನ್ನಡಿಗರ ನಿರೀಕ್ಷೆ ಉಳಿಸಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ (Cauvery Catchment) ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ (Heavy Rain) ಪರಿಣಾಮ ಮಂಡ್ಯ (Mandya) ಜಿಲ್ಲೆಯ ಕೃಷ್ಣರಾಜ ಸಾಗರ ಅಣೆಕಟ್ಟೆ (KRS Dam) ನೀರಿನ ಮಟ್ಟದಲ್ಲಿ ಗಮನಾರ್ಹ ಏರಿಕೆ ದಾಖಲಾಗಿದೆ.
ಭಾನುವಾರ ಲಭ್ಯವಾದ ಮಾಹಿತಿಯ ಪ್ರಕಾರ, ಕೆಆರ್ಎಸ್ ಅಣೆಕಟ್ಟೆಯಲ್ಲಿ 98.80 ಅಡಿ ನೀರು ಸಂಗ್ರಹವಾಗಿದ್ದು, ಬೆಳಗಿನ ವೇಳೆಗೆ 100 ಅಡಿ ಗಡಿ ತಲುಪುವ ಸಾಧ್ಯತೆ ಇದೆ. ಅಣೆಕಟ್ಟೆಯ ಗರಿಷ್ಠ ಮಟ್ಟ 124.80 ಅಡಿ ಆಗಿದ್ದು, ಇನ್ನೂ 26.80 ಅಡಿ ನೀರು ತುಂಬಬೇಕಿದೆ. ಪ್ರಸ್ತುತ ಡ್ಯಾಂಗೆ 31,583 ಕ್ಯೂಸೆಕ್ (Cusecs) ನೀರು ಒಳಹರಿವು ದಾಖಲಾಗುತ್ತಿದೆ. ಇನ್ನೊಂದೆಡೆ 1,819 ಕ್ಯೂಸೆಕ್ ನೀರನ್ನು ಹೊರಹರಿಸಲಾಗುತ್ತಿದೆ. ಒಳಹರಿವು ಹೆಚ್ಚುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ನೀರಿನ ಮಟ್ಟ ಮತ್ತಷ್ಟು ವೇಗವಾಗಿ ಏರಿಕೆಯಾಗುವ ನಿರೀಕ್ಷೆಯಿದೆ.
ಸದ್ಯ ಕೆಆರ್ಎಸ್ ಅಣೆಕಟ್ಟೆಯಲ್ಲಿ 21.885 ಟಿಎಂಸಿ (TMC) ನೀರು ಸಂಗ್ರಹವಾಗಿದೆ. ಡ್ಯಾಂನ ಒಟ್ಟು ಗರಿಷ್ಠ ಸಾಮರ್ಥ್ಯ 49.452 ಟಿಎಂಸಿ ಆಗಿದೆ. ಕೊಡಗು ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಇದೇ ರೀತಿ ಮುಂದುವರಿದರೆ, ಆಗಸ್ಟ್ ತಿಂಗಳಲ್ಲೇ ಅಣೆಕಟ್ಟೆ ಗಣನೀಯ ಮಟ್ಟಕ್ಕೆ ಭರ್ತಿಯಾಗುವ ಸಾಧ್ಯತೆ ಇದೆ ಎಂದು ನೀರಾವರಿ ಇಲಾಖೆ (Irrigation Department) ಮೂಲಗಳು ಅಂದಾಜಿಸಿವೆ.
ಕೆಆರ್ಎಸ್ ಅಣೆಕಟ್ಟೆಯ ನೀರಿನ ಮಟ್ಟ ಏರಿಕೆಯಿಂದ ಮಂಡ್ಯ, ಮೈಸೂರು (Mysuru) ಸೇರಿದಂತೆ ಕಾವೇರಿ ನೀರಾವರಿ ಪ್ರದೇಶದ (Cauvery Irrigation Region) ರೈತರಲ್ಲಿ ಸಂತಸ ಮನೆ ಮಾಡಿದೆ. ಮುಂಗಾರು (Monsoon) ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ನೀರಿನ ಲಭ್ಯತೆ ಹೆಚ್ಚುವ ನಿರೀಕ್ಷೆ ವ್ಯಕ್ತವಾಗಿದೆ.