ಕೊರೋನಾ ನೆಪ ಹೇಳಿ ಜಾಮೀನು ಕೇಳಿದವನ ಅರ್ಜಿ ವಜಾ

By Kannadaprabha NewsFirst Published Jul 11, 2020, 11:03 AM IST
Highlights

ಕೋವಿಡ್‌-19 ಪರಿಸ್ಥಿತಿಯಿಂದ ಅಧೀನ ನ್ಯಾಯಾಲಯದ ವಿಚಾರಣೆ ವಿಳಂಬವಾಗಲಿದೆ ಎಂಬ ಕಾರಣ ಪರಿಗಣಿಸಿ ತನಗೆ ಜಾಮೀನು ನೀಡಬೇಕು ಎಂಬ ಕೊಲೆ ಪ್ರಕರಣದ ಆರೋಪಿಯೊಬ್ಬನ ವಾದವನ್ನು ಹೈಕೋಟ್‌ ತಿರಸ್ಕರಿಸಿದೆ.

ಮಂಗಳೂರು(ಜು.11): ಕೋವಿಡ್‌-19 ಪರಿಸ್ಥಿತಿಯಿಂದ ಅಧೀನ ನ್ಯಾಯಾಲಯದ ವಿಚಾರಣೆ ವಿಳಂಬವಾಗಲಿದೆ ಎಂಬ ಕಾರಣ ಪರಿಗಣಿಸಿ ತನಗೆ ಜಾಮೀನು ನೀಡಬೇಕು ಎಂಬ ಕೊಲೆ ಪ್ರಕರಣದ ಆರೋಪಿಯೊಬ್ಬನ ವಾದವನ್ನು ಹೈಕೋಟ್‌ ತಿರಸ್ಕರಿಸಿದೆ.

ಜಾಮೀನು ಕೋರಿ ಆರೋಪಿ ಹರೀಶ್‌ ರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾನ್‌ ಮೈಕೆಲ್‌ ಕುನ್ಹಾ ಅವರಿದ್ದ ಏಕ ಸದಸ್ಯ ನ್ಯಾಯಪೀಠ, ಅರ್ಜಿದಾರನ ವಾದವನ್ನು ಒಪ್ಪದೆ ಅರ್ಜಿ ವಜಾಗೊಳಿಸಿತು.

ಕಾಲಿನಲ್ಲೇ ಸಚಿವ ಸುರೇಶ್‌ ಕುಮಾರ್‌ ಹೆಸರು ಬರೆದ ಕೌಶಿಕ್‌ಗೆ ಪ್ರಶಂಸೆ

ಅರ್ಜಿದಾರ ಪರ ವಕೀಲ, ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ನಲ್ಲಿ ಹರೀಶ್‌ ರೆಡ್ಡಿ ಇರಲಿಲ್ಲ. ಮೊದಲನೇ ಆರೋಪಿಯ ಹೇಳಿಕೆ ಆಧರಿಸಿ ಅರ್ಜಿದಾರನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಆತನ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಸೂಕ್ತ ಸಾಕ್ಷ್ಯಾಧಾರ ಇಲ್ಲ. ಕೋವಿಡ್‌-19 ಪರಿಸ್ಥಿತಿಯಿಂದಾಗಿ ವಿಚಾರಣಾ ನ್ಯಾಯಾಲಯಗಳ ಕಾರ್ಯ ನಿರ್ವಹಣೆ ಸ್ಥಗಿತಗೊಂಡಿದೆ. ಶೀಘ್ರ ವಿಚಾರಣಾ ನ್ಯಾಯಾಲಯದ ವಿಚಾರಣೆ ಶೀಘ್ರ ಪೂರ್ಣಗೊಳ್ಳುವ ಸಾಧ್ಯತೆ ಇಲ್ಲ. ಅರ್ಜಿದಾರನ ತಾಯಿ ವಯಸ್ಸು 70 ಇದ್ದು, ಅವರನ್ನು ಆರೈಕೆ ಮಾಡಲು ಅರ್ಜಿದಾರನಿಗೆ ಜಾಮೀನು ನೀಡಬೇಕು ಎಂದು ಕೋರಿದರು. ಆ ವಾದವನ್ನು ಒಪ್ಪದ ನ್ಯಾಯಪೀಠ, ಪ್ರಕರಣದ ಇತ್ಯರ್ಥವು ವಿಳಂಬವಾಗುತ್ತದೆ ಎಂಬ ಕಾರಣಕ್ಕೆ ಆರೋಪಿಯನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು.

ಬೆಂಗಳೂರಲ್ಲಿ ಗರಿಷ್ಠ 29 ಸಾವು, 1447 ಮಂದಿಗೆ ಸೋಂಕು, 1003 ಮಂದಿ ಡಿಸ್ಚಾರ್ಜ್

ಕೊಲೆ, ಕೊಲೆಯತ್ನ, ಜೀವ ಬೆದರಿಕೆ ಮತ್ತು ಅಕ್ರಮ ಕೂಟ ಸೇರಿದಂತೆ ಇನ್ನಿತರ ಆರೋಪಗಳ ಸಂಬಂಧ ಉಡುಪಿಯ ಬ್ರಹ್ಮಾವರ ವೃತ್ತದ ಕೊಟ ಠಾಣಾ ಪೊಲೀಸರು ಹರೀಶ್‌ ರೆಡ್ಡಿಯನ್ನು ಬಂಧಿಸಿದರು. ವಿಚಾರಣಾ ನ್ಯಾಯಾಲಯ ಜಾಮೀನು ನಿರಾಕರಿಸಿ ನ್ಯಾಯಾಂಗ ಬಂಧನದ ವಶಕ್ಕೆ ನೀಡಿತ್ತು. ಇದರಿಂದ ಜಾಮೀನು ಕೋರಿ ಅರ್ಜಿದಾರ ಹೈಕೋರ್ಟ್‌ ಮೆಟ್ಟಿಲೇರಿದ್ದ.

click me!