ತವರು ಜಿಲ್ಲೆಯಲ್ಲೇ ಹರಿವು ನಿಲ್ಲಿಸಿದ ಕಾವೇರಿ; ದುಬಾರೆ ಸಾಕಾನೆಗಳಿಗೆ ಕುಡಿಯಲು, ಸ್ನಾನಕ್ಕೂ ನೀರಿಲ್ಲ!

By Ravi JanekalFirst Published Apr 5, 2024, 7:31 PM IST
Highlights

ಕೊಡಗು ಜಿಲ್ಲೆಯಲ್ಲಿ ನಿರಂತರ ಆರು ತಿಂಗಳು ಮಳೆ ಸುರಿಯುತ್ತದೆ ಎನ್ನುವ ವಾಡಿಕೆ ಮಾತಿದೆ. ಮಳೆ ಆರಂಭವಾಯಿತ್ತೆಂದರೆ ಸಹಜವಾಗಿ ಕಾವೇರಿ ನದಿ ಉಕ್ಕಿ ಯಾವೆಲ್ಲಾ ಗ್ರಾಮಗಳಿಗೆ ನುಗ್ಗಿಬಿಡುತ್ತದೆಯೋ ಎನ್ನುವ ಆತಂಕವೇ ಜಿಲ್ಲೆಯಲ್ಲಿ ಮನೆ ಮಾಡಿಬಿಡುತಿತ್ತು. ಆದರೀಗ ಅದೇ ಕಾವೇರಿ ನದಿಯನ್ನು ನೋಡಿದರೆ ಎಂತಹವರಿಗಾದರೂ ಇನ್ನಿಲ್ಲದಂತೆ ಅಚ್ಚರಿಯಾಗುತ್ತದೆ. 

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಏ.5) : ಕೊಡಗು ಜಿಲ್ಲೆಯಲ್ಲಿ ನಿರಂತರ ಆರು ತಿಂಗಳು ಮಳೆ ಸುರಿಯುತ್ತದೆ ಎನ್ನುವ ವಾಡಿಕೆ ಮಾತಿದೆ. ಮಳೆ ಆರಂಭವಾಯಿತ್ತೆಂದರೆ ಸಹಜವಾಗಿ ಕಾವೇರಿ ನದಿ ಉಕ್ಕಿ ಯಾವೆಲ್ಲಾ ಗ್ರಾಮಗಳಿಗೆ ನುಗ್ಗಿಬಿಡುತ್ತದೆಯೋ ಎನ್ನುವ ಆತಂಕವೇ ಜಿಲ್ಲೆಯಲ್ಲಿ ಮನೆ ಮಾಡಿಬಿಡುತಿತ್ತು. ಆದರೀಗ ಅದೇ ಕಾವೇರಿ ನದಿಯನ್ನು ನೋಡಿದರೆ ಎಂತಹವರಿಗಾದರೂ ಇನ್ನಿಲ್ಲದಂತೆ ಅಚ್ಚರಿಯಾಗುತ್ತದೆ. 

ಹೌದು ಕೊಡಗು ಜಿಲ್ಲೆಯಲ್ಲಿ ಈ ಬಾರಿ ಎಂದೂ ಕಂಡು ಕೇಳರಿಯದ ಭೀಕರ ಬರಗಾಲ ಎದುರಾಗಿದೆ. ಪರಿಣಾಮವಾಗಿ ಕಾವೇರಿ ನದಿ ಪೂರ್ಣ ಬರಿದಾಗಿ ಹೋಗಿದೆ. ಕುಶಾಲನಗರ ತಾಲ್ಲೂಕಿನಲ್ಲಿರುವ ಪ್ರಸಿದ್ಧ ಸಾಕಾನೆ ಶಿಬಿರ ದುಬಾರೆಯಲ್ಲಿ ಕಾವೇರಿ ನದಿ ಪೂರ್ಣ ಬರಿದಾಗಿ ಹೋಗಿದೆ. ಉಕ್ಕಿ ಹರಿಯುತ್ತಿದ್ದ ಕಾವೇರಿ ನದಿಯಲ್ಲಿ ಈಗ ಎಲ್ಲೆಲ್ಲೂ ಬಂಡೆಗಳೇ ಕಾಣಿಸುತ್ತಿವೆ. ಇದೇ ಕಾವೇರಿ ನದಿಯನ್ನು ನಂಬಿಕೊಂಡಿದ್ದ ದುಬಾರೆ ಸಾಕಾನೆ ಶಿಬಿರದ ಆನೆಗಳು ಕುಡಿಯುವ ನೀರಿಗೂ ಆಹಾಕಾರ ಎದುರಿಸುತ್ತಿವೆ. 

ಬತ್ತಿ ಹೋದ ಹೇಮಾವತಿ; ನೀರಿನ ಮೂಲಗಳೆಲ್ಲ ಖಾಲಿ ಖಾಲಿ, ಆತಂಕದಲ್ಲಿ ಕಾಫಿ ಬೆಳೆಗಾರರು

ಕಾವೇರಿ ನದಿ ತುಂಬಿ ಹರಿಯುತ್ತಿದ್ದರಿಂದ ಇದೇ ನದಿಯಲ್ಲಿ ಆನೆಗಳಿಗೆ ಮಾವುತರು ಸ್ವಚ್ಛಂದವಾಗಿ ಸ್ನಾನ ಮಾಡಿಸುತ್ತಿದ್ದರು. ಆನೆಗಳನ್ನು ನೋಡಲು ಬರುತ್ತಿದ್ದ ಪ್ರವಾಸಿಗರು ನದಿಯಲ್ಲಿ ಇಳಿದು ಸ್ವತಃ ತಾವೂ ಕೂಡ ಆನೆಗಳಿಗೆ ಸ್ನಾನ ಮಾಡಿಸಿ ಎಂಜಾಯ್ ಮಾಡುತ್ತಿದ್ದರು. ಆದರೀಗ ಆನೆಗಳಿಗೆ ಸ್ನಾನ ಮಾಡಿಸುವ ಮಾತಿರಲಿ, ಕೊನೆ ಪಕ್ಷ ಆನೆಗಳು ಕುಡಿದು ತಮ್ಮ ದಾಹ ತಣಿಸಿಕೊಳ್ಳಲು ಆಗದಂತ ಸ್ಥಿತಿ ತಲುಪಿದೆ ಕಾವೇರಿ ನದಿ. ಸುತ್ತಮುತ್ತಲ ಗ್ರಾಮಗಳ ಜಾನುವಾರುಗಳು ಕಾವೇರಿ ನದಿ ದಂಡೆಗಳಲ್ಲಿ ಮೇಯ್ದು ತಮ್ಮ ಹಸಿವು ನೀಗಿಸಿಕೊಳ್ಳುವುದರ ಜೊತೆಗೆ ಇದೇ ನದಿಯಲ್ಲಿ ನೀರು ಕುಡಿದು ತಮ್ಮ ದಣಿವಾರಿಸಿಕೊಳ್ಳುತ್ತಿದ್ದವು. ಆದರೀಗ ದನಕರುಗಳು ಕುಡಿಯಲು ನೀರಿಲ್ಲದೆ ನದಿಯಲ್ಲೆಲ್ಲಾ ಓಡಾಡಿ ನೀರಿಗಾಗಿ ಹುಡುಕಾಡುತ್ತಿವೆ. ಮತ್ತೊಂದೆಡೆ ಇದೇ ಕಾವೇರಿ ನದಿಯಲ್ಲಿ ಹರಿಯುತ್ತಿದ್ದ ನೀರನ್ನು ಆಶ್ರಯಿಸಿ ರ್ಯಾಫ್ಟಿಂಗ್ ನಡೆಸಲಾಗುತಿತ್ತು. ಈ ರ್ಯಾಫ್ಟಿಂಗ್ ನಡೆಸುತ್ತಿದ್ದ ಮಾಲೀಕರು ಅಷ್ಟೇ ಅಲ್ಲ, ಬೋಟ್ ಚಲಾಯಿಸುತ್ತಿದ್ದವರು, ಈಜು ತಜ್ಞರು ಹಾಗೂ ಗೈಡ್ಗಳು ಬದುಕು ನಡೆಸುತ್ತಿದ್ದರು. ಆದರೆ ಈಗ ಇವರೆಲ್ಲರೂ ಕೆಲಸವಿಲ್ಲದೆ ಕೂಲಿ ಕೆಲಸಗಳನ್ನು ಮಾಡಿಕೊಂಡು ಬದುಕು ದೂಡಬೇಕಾಗಿದೆ. 

ಇನ್ನು ಬಿಸಿಲ ಬೇಗೆಗೆ ಜಿಲ್ಲೆಯ ವಾಣಿಜ್ಯ ಬೆಳೆ ಕಾಫಿ ಎಲ್ಲೆಡೆ ಹೂವಾಗಿದ್ದು, ಮಳೆಯಿಲ್ಲದೆ ಅದು ಒಣಗಿ ಹೋಗುತ್ತಿದೆ. ಹೀಗಾಗಿ ಈ ಬಾರಿ ಕಾಫಿಯಿಂದ ಉತ್ತಮ ಆದಾಯ ಕಂಡಿದ್ದ ಕಾಫಿ ಬೆಳೆಗಾರರು ಮುಂದಿನ ವರ್ಷ ನಷ್ಟ ಅನುಭವಿಸಬೇಕಾಗಬಹುದು ಎನ್ನುವ ಆತಂಕದಲ್ಲಿ ಇದ್ದಾರೆ. ಈ ಕುರಿತು ಮಾತನಾಡಿರುವ ಪ್ರವಾಸಿ ಮಧು ಎಂಬುವವರು ಪ್ರತೀ ವರ್ಷ ದುಬಾರೆ ಸಾಕಾನೆ ಶಿಬಿರಕ್ಕೆ ಒಮ್ಮೆ ಭೇಟಿ ನೀಡುತ್ತಿದ್ದೆವು. ಆ ಸಮಯದಲ್ಲಿ ಕಾವೇರಿ ನದಿ ತುಂಬಿ ಹರಿಯುತ್ತಿತ್ತು. ಇಡೀ ಪರಿಸರ ತಣ್ಣ್ಣಗೆ ಇರುತಿತ್ತು. ಆದರೆ ಈಗ ಇಲ್ಲಿನ ಪರಿಸರ ಭೀಕರವಾಗಿದೆ. ನದಿಯಲ್ಲಿ ಎಲ್ಲಿಂದ, ಎಲ್ಲಿ ನೋಡಿದರೂ ಕಾವೇರಿ ನದಿ ಒಣಗಿರುವುದೇ ಕಾಣಿಸುತ್ತಿದೆ. ಇಂತಹ ಪರಿಸ್ಥಿತಿಯನ್ನು ನಾವು ಎಂದಿಗೂ ನೋಡಿರಲಿಲ್ಲ. ಏಪ್ರಿಲ್ ತಿಂಗಳಿನಲ್ಲಿಯೇ ಪರಿಸ್ಥಿತಿ ಹೀಗೆ ಆದಲ್ಲಿ, ಇನ್ನು ಮೇ ತಿಂಗಳಲ್ಲಿ ಗತಿ ಏನು ಎನ್ನುವ ಚಿಂತೆ ಶುರುವಾಗಿದೆ ಎನ್ನುತ್ತಿದ್ದಾರೆ. 

 

ಬರಪರಿಹಾರ: ಗೃಹ ಸಚಿವ ಅಮಿತ್ ಶಾಗೆ ಕೃಷ್ಣಬೈರೇಗೌಡ ಸವಾಲು!

ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಭೀಕರ ಬರಗಾಲ ಎದುರಾಗಿದ್ದು ಕಾವೇರಿ ನದಿ ಪೂರ್ಣ ಖಾಲಿಯಾಗಿದ್ದು, ಸುಡು ಬಿಸಿಲಿಗೆ ಜಿಲ್ಲೆಯ ಜನರು ತತ್ತರಿಸಿ ಹೋಗುವಂತೆ ಆಗಿದೆ. 

click me!