
ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ ನಡೆದಿದ್ದ ಲಾಂಗ್ ಹಾಗೂ ಮಚ್ಚು ಬಳಸಿ ನಡೆಸಲಾದ ಭೀಕರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ಭಾರೀ ಆತಂಕ ಮತ್ತು ಚರ್ಚೆಗೆ ಕಾರಣವಾಗಿತ್ತು. ಇದೀಗ ಪೊಲೀಸರ ತನಿಖೆಯಿಂದ ಹಲ್ಲೆಯ ಹಿಂದಿನ ನಿಜವಾದ ಕಾರಣಗಳು ಬೆಳಕಿಗೆ ಬಂದಿವೆ.
ಬಂಧಿತ ಆರೋಪಿಗಳನ್ನು ಮಂಜು ಹಾಗೂ ನಾಗೇಶ್ ಎಂದು ಗುರುತಿಸಲಾಗಿದೆ. ಜನವರಿ 31ರ ರಾತ್ರಿ ಈ ಇಬ್ಬರು ಆರೋಪಿಗಳು ಲಾಂಗ್ ಮತ್ತು ಮಚ್ಚು ಹಿಡಿದು ಜಗದೀಶ್ ಹಾಗೂ ವಿಜಯ್ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಘಟನೆ ಕುಣಿಗಲ್ ಪಟ್ಟಣದ ಸಾರ್ವಜನಿಕ ಸ್ಥಳವೊಂದರಲ್ಲಿ ನಡೆದಿದ್ದು, ಹಲ್ಲೆಯ ದೃಶ್ಯಗಳು ಸಾರ್ವಜನಿಕರ ಮೊಬೈಲ್ ಫೋನ್ಗಳಲ್ಲಿ ಸೆರೆಯಾಗಿದ್ದವು. ನಂತರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಕುಣಿಗಲ್ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಹಲ್ಲೆ ನಡೆಸಿದ ಬಳಿಕ ಆರೋಪಿಗಳು ಪರಾರಿಯಾಗಿದ್ದು, ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಮಂಜು ಮತ್ತು ನಾಗೇಶ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ಹಲ್ಲೆಗೆ ಕಾರಣವಾದ ಅಸಲಿ ಹಿನ್ನೆಲೆ ಬಹಿರಂಗವಾಗಿದೆ. ಬಂಧಿತ ಆರೋಪಿ ಮಂಜು ಅವರ ಸಹೋದರಿಯೊಂದಿಗೆ ಗಾಯಾಳು ಜಗದೀಶ್ ಜೊತೆಗೆ ಪ್ರೀತಿಯಲ್ಲಿದ್ದಳು. ಆದರೆ ಮಂಜುಗೆ ತನ್ನ ತಂಗಿಯ ಈ ಪ್ರೀತಿ ಸಂಬಂಧ ಇಷ್ಟವಾಗಿರಲಿಲ್ಲ. ಇತ್ತೀಚೆಗೆ ಮಂಜು ಕಟ್ಟಿದ ಮನೆಯ ಗೃಹಪ್ರವೇಶ ಕಾರ್ಯಕ್ರಮಕ್ಕೆ ಜಗದೀಶ್ ತನ್ನ ತಂಗಿಯೊಂದಿಗೆ ಆಗಮಿಸಿದ್ದನು. ಈ ಸಂದರ್ಭದಲ್ಲಿ ಮದುವೆಯಾಗುವವರೆಗೂ ಈ ರೀತಿಯ ಓಡಾಟ ಬೇಡ ಎಂದು ಎಚ್ಚರಿಕೆ ನೀಡಿದ ಮಂಜು ಪಂಚಾಯಿತಿ ಮಾಡಿಸಿದ್ದಾನೆ ಎನ್ನಲಾಗಿದೆ.
ಪಂಚಾಯಿತಿ ನಡೆಯುವ ವೇಳೆ ಹಣದ ವಿಚಾರ ಪ್ರಸ್ತಾಪವಾಗಿದ್ದು, ಈ ವೇಳೆ ಮಂಜು ಜಗದೀಶ್ ವಿರುದ್ಧ “ಬೇರೊಬ್ಬರ ಹಣ ತಿಂದು ಬದುಕುತ್ತಿದ್ದೀಯಾ” ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ ಎಂದು ತಿಳಿದುಬಂದಿದೆ. ಈ ವಿಚಾರದಿಂದ ವಾಗ್ವಾದ ಉಂಟಾಗಿ, ವಿಷಯ ಆಣೆ ಪ್ರಮಾಣದ ಮಟ್ಟಕ್ಕೆ ತಲುಪಿದೆ. ಪಂಚಾಯಿತಿಯಲ್ಲಿ ಆದ ತೀರ್ಮಾನದಂತೆ ಎಲ್ಲರೂ ಶನಿದೇವರ ದೇವಸ್ಥಾನದ ಮುಂದೆ ಆಣೆ ಪ್ರಮಾಣ ಮಾಡಲು ಬಂದಿದ್ದಾರೆ. ಈ ವೇಳೆ ಮೊದಲಿಗೆ ಜಗದೀಶ್ ಹಾಗೂ ವಿಜಯ್ ಜೊತೆ ವಾಗ್ವಾದ ಉಂಟಾಗಿ, ಮಾತಿನ ಚಕಮಕಿ ತೀವ್ರ ಗಲಾಟೆಯಾಗಿ ಮಾರ್ಪಟ್ಟಿದೆ.
ಪೊಲೀಸರ ತನಿಖೆಯ ಪ್ರಕಾರ, ಆರೋಪಿ ಮಂಜು ಬೆಳಿಗ್ಗೆಯೇ ಲಾಂಗ್ ಖರೀದಿಸಿ ತನ್ನ ಕಾರಿನಲ್ಲಿ ಇಟ್ಟುಕೊಂಡಿದ್ದನು. ದೇವಸ್ಥಾನದ ಬಳಿ ಗಲಾಟೆ ಹೆಚ್ಚಾಗುತ್ತಿದ್ದಂತೆ, ಮಂಜು ಕಾರಿನಿಂದ ಲಾಂಗ್ ತೆಗೆದು ಜಗದೀಶ್ ಮತ್ತು ವಿಜಯ್ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಆರೋಪಿ ನಾಗೇಶ್ ಸಹ ಮಂಜುಗೆ ಬೆಂಬಲವಾಗಿ ಹಲ್ಲೆಯಲ್ಲಿ ಭಾಗಿಯಾಗಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಘಟನೆ ಸಂಬಂಧ ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಗಾಯಾಳುಗಳ ಸ್ಥಿತಿ ಸ್ಥಿರವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿಗಾಗಿ ತನಿಖೆ ಮುಂದುವರಿದಿದೆ ಎಂದು ಕುಣಿಗಲ್ ಪೊಲೀಸರು ತಿಳಿಸಿದ್ದಾರೆ. ಕುಣಿಗಲ್ನಲ್ಲಿ ನಡೆದ ಈ ಘಟನೆ, ವೈಯಕ್ತಿಕ ವಿಚಾರಗಳು ಹೇಗೆ ಸಾರ್ವಜನಿಕ ಶಾಂತಿಗೆ ಧಕ್ಕೆ ತರಬಹುದು ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.