ಕಾಂತರಾ ಎಫೆಕ್ಟ್: ದೈವದ ಚದ್ಮವೇಷ, ಆರಾಧಕರ ವಿರೋಧ

By Suvarna NewsFirst Published Dec 11, 2022, 3:34 PM IST
Highlights

ಕಾಂತರಾ ಸಿನಿಮಾ ಬಿಡುಗಡೆಯಾದ ನಂತರ ಅದರ ಜನಪ್ರಿಯತೆಯ ಬೆನ್ನು ಹತ್ತಿ ನಾನಾ ವೇದಿಕೆಗಳಲ್ಲಿ ದೈವದ ಮುಖವರ್ಣಕ್ಕೆ ರಚಿಸಿ ಮನೋರಂಜನಾ ಕಾರ್ಯಕ್ರಮ ನಡೆಸುತ್ತಿದ್ದಾರೆ. ಈ ಬೆಳವಣಿಗೆಯನ್ನು ಕರಾವಳಿಯ ದೈವಾರಾಧಕರು ಖಂಡಿಸಿದ್ದಾರೆ. ದೈವದ ಛದ್ಮವೇಶ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಡಿ.11): ಕಾಂತರಾ ಸಿನಿಮಾ ಬಿಡುಗಡೆಯಾದ ನಂತರ ಅದರ ಜನಪ್ರಿಯತೆಯ ಬೆನ್ನು ಹತ್ತಿ ನಾನಾ ವೇದಿಕೆಗಳಲ್ಲಿ ದೈವದ ಮುಖವರ್ಣಕ್ಕೆ ರಚಿಸಿ ಮನೋರಂಜನಾ ಕಾರ್ಯಕ್ರಮ ನಡೆಸುತ್ತಿದ್ದಾರೆ. ಈ ಬೆಳವಣಿಗೆಯನ್ನು ಕರಾವಳಿಯ ದೈವಾರಾಧಕರು ಖಂಡಿಸಿದ್ದಾರೆ. ದೈವದ ಛದ್ಮವೇಶ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ದೈವದ ವೇಷ ಧರಿಸುವುದಕ್ಕೆ ಕರಾವಳಿಗರ ವಿರೋಧವಿದ್ದು, ಇತ್ತೀಚೆಗೆ ರಾಜ್ಯದ ಹಲವು ಭಾಗಗಳಲ್ಲಿ ದೈವದ ವೇಷ ಧರಿಸಿ ಮನೋರಂಜನ ಕಾರ್ಯಕ್ರಮ ನೀಡಲಾಗಿತ್ತು. ಚಪ್ಪಲಿ ಧರಿಸಿ ದೈವಕ್ಕೆ ದೀವಟಿಕೆ ಕೊಟ್ಟ ಘಟನೆ ನಡೆದಿತ್ತು. ಕ್ರೀಡಾಕೂಟಗಳಲ್ಲೂ ದೈವದ ವೇಷ ಧರಿಸಲಾಗಿತ್ತು. ದೈವಾರಾಧನೆಯನ್ನು ಅಪಮಾನ ಮಾಡುವುದಕ್ಕೆ ಆರಾಧಕರ ವಿರೋಧವಿದೆ ಇಂದು ತಿಂಗಳೆ ಗರಡಿಯ ಅರಸು ಮನೆತನಕ್ಕೆ ಸೇರಿದ ವಿಕ್ರಮಾರ್ಜುನ ಹೆಗ್ಗಡೆಯವರು ತಿಳಿಸಿದ್ದಾರೆ.

ಈ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿರುವ ಅವರು,ದೈವ ಮತ್ತು ದೇವರು ಇವು ನಮ್ಮ ಬದುಕಿನ ಅವಿಭಾಜ್ಯ ಅಂಗ.
ನಾವು ಮೊದಲಾಗಿ ಅಡ್ಡ ಬೀಳುವುದು ದೈವಕ್ಕೆ -ನಂತರ ದೇವರಿಗೆ. ನಾವು ಪ್ರತಿಯೊಬ್ಬರೂ ಮನೆಯಲ್ಲೂ ದೈವವನ್ನು ನಂಬುತ್ತೇವೆ. ಪಂಜುರ್ಲಿ ಅಥವಾ ಜುಮಾದಿ ಪ್ರತಿಯೊಬ್ಬರ ಮನೆಯಲ್ಲೂ ಇದೆ. ದೈವದ ಕಾರಣಿಕಗಳನ್ನು ಬದುಕಿನಲ್ಲಿ ಕಂಡಿದ್ದೇವೆ, ಇಂತಹ ನಂಬಿಕೆಯನ್ನು ಅಪಹಸ್ಯ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ದೈವಗಳಿಗೆ ಹರಕೆ ಕೊಟ್ಟು ಫಲ ಕಂಡವರು ನಾವು.ಹಾಗಾಗಿ ಕಾಂತರಾ ಸಿನಿಮಾ ಕೂಡ ಬಹಳ ಪ್ರಚಾರ ಪಡೆದಿದೆ. ಕಾಂತಾರ ಸಿನಿಮಾದಿಂದ ನಮ್ಮ ನಂಬಿಕೆಗಳು ಮುಂದಿನ ಪೀಳಿಗೆಗೆ ಉಳಿಯುವಂತಾಗಿದೆ. ಆದರೆ ಕಾಂತಾರದ ರೀತಿಯಲ್ಲಿ ಮುಖವರ್ಣಿಕೆಯನ್ನು ಹಾಕಿಕೊಂಡು ಚದ್ಮವೇಷ ಮಾಡುವುದನ್ನು ನಾವು ವಿರೋಧಿಸುತ್ತೇವೆ. ನಾವು ನಂಬಿದ ಭಗವಂತನನ್ನು ಈ ರೀತಿ ವೇದಿಕೆಯಲ್ಲಿ ಚೆಲ್ಲು ಚೆಲ್ಲಾಗಿ ತೋರಿಸಬಾರದು. ರಿಯಾಲಿಟಿ ಶೋಗಳಲ್ಲಿ ವೇದಿಕೆಗಳಲ್ಲಿ ದೈವದ ವೇಷ ಹಾಕಬಾರದು ಎಂದು ಹೇಳಿದ್ದಾರೆ.

ಹೆಂಗಸರು ದೈವದ ಗಗ್ಗರ ಮುಟ್ಟುವ ಕ್ರಮ ನಮ್ಮಲ್ಲಿ ಇಲ್ಲ. ಹೆಂಗಸರು ಬಾಲಕಿಯರು ದೈವದ ವೇಷ ಧರಿಸುವಂತಿಲ್ಲ.ದೈವದ ಆರಾಧನೆಯನ್ನು ಮಾಡುವಂತದ್ದು ಪುರುಷರು ಮಾತ್ರ. ದೈವದ ಕೊಡಿ ಅಡಿಯಲ್ಲಿ ಚಪ್ಪಲಿಯನ್ನು ಧರಿಸುವ ಪರಿಪಾಠ ಇಲ್ಲ.ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ರಾಜಕಾರಣಿ ಚಪ್ಪಲಿ ಧರಿಸಿದ್ದನ್ನು ನೋಡಿದೆ. ಚಪ್ಪಲಿ ಹಾಕಿಕೊಂಡು ದೈವಕ್ಕೆ ದೀವಟಿಕೆ ಕೊಡುವುದನ್ನು ನೋಡಿದೆ. ದೈವಕ್ಕೆ ದೀವಟಿಗೆ ಹಿಡಿಯುವವರು ಮೇಲ್ಬಟ್ಟೆ ಹಾಕುವಂತಿಲ್ಲ ಮಡಿ ಮೈಲಿಗೆಯಲ್ಲಿ ಇರಬೇಕು.ಎಲ್ಲಾದರೂ ಒಂದು ವೇಳೆ ದೈವ ಮೈ ಮೇಲೆ ಬಂದರೆ ಏನು ಮಾಡುತ್ತೀರಿ? ಎಂದು ಪ್ರಶ್ನಿಸಿದ್ದಾರೆ.

ಕಾಂತಾರ ಮೋಡಿ; ಪರೀಕ್ಷೆಯಲ್ಲಿ 3ನೇ ತರಗತಿ ವಿದ್ಯಾರ್ಥಿ ಉತ್ತರಕ್ಕೆ ಶಿಕ್ಷಕರು ಶಾಕ್

ದೈವಾರದನೆಯ ಅಣುಕು ಪ್ರದರ್ಶನ ಮಾಡಿದವರ ಮೇಲೆ ದೈವ ಬಂದ ಉದಾಹರಣೆ ಇದೆ. ದೈವವನ್ನು ನಂಬಿ ಪೂಜಿಸುವವರಿಗೆ ಮಾನಸಿಕವಾಗಿ ತೊಂದರೆಯಾಗುತ್ತೆ. ಈ ಹಿಂದೆಯೂ ಮೆರವಣಿಗೆಗಳಲ್ಲಿ ದೈವದ ವೇಷ ಧರಿಸುತ್ತಿದ್ದರು. ದೈವದ ಅಣಿಕಟ್ಟಿ ಬಂದಾಗ ದೈವದ ಪರಿಚಾರಕರು ವಿರೋಧಿಸಿದಾಗ ಈ ಪರಿಪಾಠ ನಿಂತಿತ್ತು. ಕಾಂತಾರ ಸಿನಿಮಾದ ಪ್ರಚಾರದಿಂದ ಮತ್ತೆ ಈ ಸಂಸ್ಕೃತಿ ಆರಂಭವಾಗಿದೆ. ಪೊಲೀಸ್ ಇಲಾಖೆಯವರು ಕೂಡ ದೈವದ ವೇಷ ಧರಿಸಿದ್ದ ಘಟನೆ ನಡೆದಿದೆ. ಕರಾವಳಿಯ ಜನಪ್ರತಿನಿಧಿಗಳು ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.

Kantara2: ಕಾಂತಾರ-2 ಚಿತ್ರಕ್ಕೆ ಅನುಮತಿ ಬೇಡಿದ ರಿಷಬ್ ಶೆಟ್ಟಿ: ಎಚ್ಚರಿಕೆ ಕೊಟ್ಟ ಪಂಜುರ್ಲಿ ದೈವ

ಶಿಕ್ಷಣಾಧಿಕಾರಿಗಳು ಶಾಲೆಗಳಲ್ಲಿ ಈ ರೀತಿಯ ಅಣಕು ನಡೆಯದಂತೆ ಎಚ್ಚರಿಸಬೇಕು. ರಿಷಬ್ ಶೆಟ್ಟಿ ಕಾಂತಾರ ಸಿನಿಮಾದಲ್ಲಿ ದೈವದ ವೇಷ ಧರಿಸಿದ್ದಾರೆ, ನಿಜ. ಅವರು ಪಂಜುರ್ಲಿಯ ಮುಂದೆ ನಿಂತು ಅನುಮತಿ ಪಡೆದಿದ್ದೇನೆ ಎಂದು ಹೇಳಿದ್ದಾರೆ. ರಿಷಬ್ ಶೆಟ್ಟರಿಗೆ ದೈವದ ಅನುಮತಿ ಇದ್ದರೆ ನಮ್ಮ ವಿರೋಧ ಇಲ್ಲ. ಅನುಮತಿ ಪಡೆಯದೆ ಅವರು ಸಿನಿಮಾ ಮಾಡಿದ್ದರೆ ನಾವು ಒಪ್ಪುತ್ತಿರಲಿಲ್ಲ. ತುಳುನಾಡಿನಲ್ಲಿ ಪವಾಡ ತೋರಿಸುವ ಅನೇಕ ದೈವಗಳಿವೆ. ನಿರಂತರ ದೈವಾರಾಧನೆಯ ಸಿನಿಮಾಗಳು ಬಂದರೆ ಆರಾಧನೆಯ ಮೇಲಿನ ಗೌರವ ಕಡಿಮೆಯಾಗುತ್ತೆ. ಇಲ್ಲಿ ಬಳಸುವ ಗಗ್ಗರ- ಸಿರಿ ಪ್ರತಿಯೊಂದುಕ್ಕೂ ಮಹತ್ವ ಇದೆ. ಈ ರೀತಿ ಮುಂದುವರೆದರೆ ನಮ್ಮ ನಂಬಿಕೆಗೆ ಪೆಟ್ಟು ಬೀಳುತ್ತೆ. ನಮ್ಮ ನಂಬಿಕೆಗೆ ಪೆಟ್ಟು ಬಿದ್ದರೆ ಎಲ್ಲಾ ದೈವಾರಾಧಕರು ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ್ದಾರೆ.

click me!