ಜನಮಾನಸದಲ್ಲಿ ಶಾಶ್ವತ ನೆಲೆಸಿದ ಕನಕರು, ರಾಯಣ್ಣ: ಸಚಿವ ಎಂ.ಬಿ.ಪಾಟೀಲ್

By Kannadaprabha NewsFirst Published Feb 26, 2024, 8:20 PM IST
Highlights

ಕನಕದಾಸರು ಭಕ್ತಿಯ ಮೂಲಕ ಮತ್ತು ಸಂಗೊಳ್ಳಿ ರಾಯಣ್ಣ ಸ್ವಾತಂತ್ರ್ಯ ಹೋರಾಟದ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಹೇಳಿದರು. 
 

ವಿಜಯಪುರ (ಫೆ.26): ಕನಕದಾಸರು ಭಕ್ತಿಯ ಮೂಲಕ ಮತ್ತು ಸಂಗೊಳ್ಳಿ ರಾಯಣ್ಣ ಸ್ವಾತಂತ್ರ್ಯ ಹೋರಾಟದ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ಬಬಲೇಶ್ವರ ತಾಲೂಕಿನ ಕಾತ್ರಾಳ ಗ್ರಾಮದಲ್ಲಿ ಶ್ರೀ ಭಕ್ತ ಕನಕದಾಸ ಮತ್ತು ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೂತನ ಪುತ್ಥಳಿಯ ಉದ್ಘಾಟನೆ ನೆರವೇರಿಸಿದ ನಂತರ ಧರ್ಮಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಬಸವಣ್ಣ, ಕನಕದಾಸ, ರಾಯಣ್ಣ, ಅಂಬೇಡ್ಕರ ಮಹಾಪುರುಷರು ಮತ್ತು ರಾಷ್ಟ್ರ ನಾಯಕರು ಒಂದೇ ಸಮಾಜಕ್ಕೆ ಸೀಮಿತರಾದವರಲ್ಲ. 

ಹಾಲುಮತ ಅಪಾರ ದೈವಭಕ್ತಿ ಹೊಂದಿರುವ ಸಮಾಜ. ಭಕ್ತ ಕನಕದಾಸರು ಭಕ್ತಿಯಿಂದ ಕೃಷ್ಣನನ್ನು ಒಲಿಸಿಕೊಂಡಿದ್ದರು. ಸಂಗೊಳ್ಳಿ ರಾಯಣ್ಣ ಕಿತ್ತೂರು ಸಂಸ್ಥಾನದ ಉಳಿವಿಗಾಗಿ ರಾಣಿ ಚನ್ನಮ್ಮರ ಜೊತೆ ಬ್ರಿಟೀಷರ ವಿರುದ್ಧ ಹೋರಾಡಿ ಹುತಾತ್ಮರಾಗಿದ್ದಾರೆ. ಅವರ ತ್ಯಾಗ ಮತ್ತು ಆದರ್ಶಮಯ ಜೀವನ ನಮಗೆಲ್ಲರಿಗೂ ಮಾದರಿ ಎಂದರು. ಕಾತ್ರಾಳ ಗ್ರಾಮಸ್ಥರು ದುಡಿಮೆಗೆ ಸಶಕ್ತರು, ಶ್ರಮಜೀವಿಗಳು. 2013ರಿಂದ 18ರ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಅವಧಿಯಲ್ಲಿ ಜಲಸಂಪನ್ಮೂಲ ಸಚಿವನಾಗಿ ಕೈಗೊಂಡಿರುವ ನೀರಾವರಿ ಯೋಜನೆಗಳು ಈ ಭಾಗದಲ್ಲಿ ರೈತರು ಆರ್ಥಿಕವಾಗಿ ಸಶಕ್ತರಾಗುತ್ತಿರುವುದು ಸಂತಸ ತಂದಿದೆ. 

ಕಾಂಗ್ರೆಸ್ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ: ಸಚಿವ ಸಂತೋಷ್ ಲಾಡ್‌

ಈಗ ಕಾತ್ರಾಳ ಗ್ರಾಮದ ಅಗಸಿಯಲ್ಲಿ ಕನಕದಾಸ ಮತ್ತು ಸಂಗೊಳ್ಳಿ ರಾಯಣ್ಣರ ಪ್ರತಿಮೆ ಸ್ಥಾಪನೆಯಿಂದಾಗಿ ಗ್ರಾಮಕ್ಕೆ ಲಕ್ಷಣ ಬಂದಿದೆ ಎಂದ ಅವರು, ಈ ಭಾಗದಲ್ಲಿ ಬಾಕಿ ಇರುವ 15ನೇ ವಿತರಣೆ ಕಾಲುವೆ ಮತ್ತು 5ಎ ಮತ್ತು 5ಬಿ ನೀರಾವರಿ ಕಾಮಗಾರಿಗಳಿಗೆ ಕೆಬಿಜೆಎನ್ಎಲ್ ಆಡಳಿತಾತ್ಮಕ ಅನುಮೋದನೆ ದೊರಕಿದೆ. ಒಟ್ಟು ₹319 ಕೋ. ವೆಚ್ಚದ ಕಾಮಗಾರಿಗಳಿಗೆ ಶೀಘ್ರ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಲಿದೆ. ಅಲ್ಲದೇ, ಕಾತ್ರಾಳ ಕೆರೆ ತುಂಬಿಸಲೂ ಕೂಡ ಕ್ರಮ ಕೈಗೊಳ್ಳಲಾಗಿದೆ ಎಂದರು. ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಕಾರ್ಯೋನ್ಮುಖನಾಗಿದ್ದು, ಈಗಾಗಲೇ ಎರಡು ಕಂಪನಿಗಳು ಉದ್ಯಮ ಸ್ಥಾಪನೆಗೆ ಮುಂದಾಗಿವೆ. ಜೆ.ಎಸ್.ಡಬ್ಲ್ಯೂ ಜೊತೆಗೂ ಈ ನಿಟ್ಟಿನಲ್ಲಿ ಮಾತುಕತೆ ಪ್ರಗತಿಯಲ್ಲಿದೆ ಎಂದರು.

ಸರೂರ ಅಗತೀರ್ಥ ಹಾಲುಮತ ಗುರುಪೀಠದ ಶ್ರೀ ರೇವಣಸಿದ್ಧೇಶ್ವರ ಶಾಂತಮಯ ಮಹಾಸ್ವಾಮಿಗಳು ಮಾತನಾಡಿ, ಸಚಿವ ಎಂ.ಬಿ. ಪಾಟೀಲ ಅವರು ಬಿಸಿಲ ನಾಡಿನಲ್ಲಿ ಭೂತಾಯಿಗೆ ಅಗತ್ಯವಾಗಿರುವ ನೀರನ್ನು ನೀಡುವ ಮೂಲಕ ಪ್ರಕೃತಿಯಲ್ಲಿ ಹಸಿರು ಸಮೃದ್ಧಿಯಾಗಿರುವಂತೆ ಮಾಡಿದ್ದಾರೆ ಎಂದು ಶ್ಲಾಘಿಸಿದರು. ಸಂಗೊಳ್ಳಿ ರಾಯಣ್ಣ ಮನುಕುಲದ ಒಳಿತಿಗಾಗಿ ಹೋರಾಡಿದ್ದಾರೆ. ನಾಡು ಮತ್ತು ದೇಶಕ್ಕಾಗಿ ಜೀವತ್ಯಾಗ ಮಾಡಿ ಕ್ರಾಂತಿ ಮಾಡಿದ್ದಾರೆ. ಬಸವಣ್ಣನವರು ಅನುಭವ ಮಂಟಪದ ಮೂಲಕ ಸಮಾನತೆಗಾಗಿ ಶ್ರಮಿಸಿದ್ದಾರೆ. ಅವರ ನಂತರ ಕನಕದಾಸರು ಸಮಾನತೆಗಾಗಿ ಹೋರಾಟ ಮುಂದುವರಿಸಿದ್ದರು. 

ಕನಕದಾಸರ ಕಾಲದಲ್ಲಿ ಕನಕರನ್ನು ಕೆಣಕಬೇಡಿ. ಕೆಣಕಿ ತಿಣುಕಬೇಡಿ ಎಂಬುದು ಅಂದಿನ ಕಾಲದಲ್ಲಿ ಜನಜನಿತವಾಗಿತ್ತು. ಇಂದಿನ ಯುವಕರು ಮೂಢ ನಂಬಿಕೆಗಳಿಂದ ಹೊರ ಬರಬೇಕು. ದುಶ್ಚಟಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು. ಮಹಾರಾಷ್ಟ್ರದ ಸುಕ್ಷೇತ್ರ ಹುಲಜಂತಿ ಪಟ್ಟದ ಶ್ರೀ ಮಾಳಿಂಗರಾಯ ಮಹಾರಾಯರು ಮಾತನಾಡಿ, ಪರೋಪಕಾರಕ್ಕಾಗಿ ಬದುಕಿದವರು ದೇವರಾಗುತ್ತಾರೆ. ಕನಕದಾಸರು, ರಾಯಣ್ಣರು ತಮ್ಮ ಕಾಯಕಗಳ ಮೂಲಕ ಅಜರಾಮರರಾಗಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್, ಕನಕದಾಸ, ರಾಯಣ್ಣ ನಮಗೆ ಮಾದರಿಯಾಗಬೇಕು ಎಂದು ಹೇಳಿದರು.

ಖ್ಯಾತ ವಾಗ್ಮಿ ಮತ್ತು ಯುವ ಮುಖಂಡ ಮೋಹನ ಮೇಟಿ ಮಾತನಾಡಿ, ಕಾಯಕ ವೃತ್ತಿಗಳ ಆಧಾರದ ಮೇಲೆ ಜಾತಿಗಳಾಗಿವೆ. 12ನೇ ಶತಮಾನದಲ್ಲಿ ಬಸವಣ್ಣ ಸಮಾನತೆಗಾಗಿ ಹೋರಾಡಿದರೆ, ಅವರ ನಂತರ ಭಕ್ತ ಕನಕದಾಸರು ಸಮಾನತೆ ಮತ್ತು ಸಾಮಾಜಿಕ ಮೌಢ್ಯಗಳ ವಿರುದ್ಧ ಹೋರಾಡಿದರು. ಇವರ ಬಳಿಕ ಸಂಗೊಳ್ಳಿ ರಾಯಣ್ಣ ದೇಶಕ್ಕಾಗಿ ಹೋರಾಡಿದ್ದಾರೆ. ಇಂಥ ಮಹಾಪುರುಷರು ಯುವಕರಿಗೆ ಪ್ರೇರಣೆಯಾಗಬೇಕು. ಹಾಲುಮತ ಧರ್ಮ ಎಲ್ಲದಕ್ಕೂ ಮೂಲ ಧರ್ಮವಾಗಿದೆ. ಸಚಿವ ಎಂ.ಬಿ.ಪಾಟೀಲರು ಅಕ್ಷರ, ಅನ್ನ, ನೀರು ಕೊಟ್ಟ ಭಗೀರಥರಾಗಿದ್ದಾರೆ. ಜನರ ಬದುಕು ಕಟ್ಟಿಕೊಳ್ಳಲು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಕಾನೂನು ತಿದ್ದುಪಡಿ ಮಾಡಿದರೆ ರಾಜ್ಯ ಸರ್ಕಾರದ ವಿರುದ್ಧ ಉಗ್ರ ಚಳವಳಿ: ಪ್ರಲ್ಹಾದ್‌ ಜೋಶಿ ಎಚ್ಚರಿಕೆ

ಸುಕ್ಷೇತ್ರ ಗೊಳಸಾರದ ಶ್ರೀ ಅಭಿನವ ಪುಂಡಲಿಂಗೇಶ್ವರ ಮಹಾರಾಜರು, ಹಂದಿಗುಂದ ಶ್ರೀ ಹಾಲಸಿದ್ಧನಾಥನ ಮಠದ ಶ್ರೀ ಶ್ರೀಮಂತ ಶಿವಯೋಗಿ ಅಜ್ಜನವರು, ಸುಕ್ಷೇತ್ರ ಬಳಗಾನೂರಿನ ಶ್ರೀ ಸೋಮರಾಯ ಮುತ್ಯಾ, ಕಾತ್ರಾಳ ಗದ್ದುಗೆ ಪೂಜಾರಿ ಶ್ರೀ ಮಲಕಾರಿಸಿದ್ಧ ಸೋ. ಒಡೆಯರ, ಮಲ್ಲಯ್ಯ ಕಾ. ಮಠ, ಕಾತ್ರಾಳ ಶ್ರೀ ಕನಕದಾಸ ಸಂಘದ ಅಧ್ಯಕ್ಷ ವಿಠ್ಠಲ ಯಂ. ಪಡಸಲಗಿ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ರಾಜು ಕಂಬಾಗಿ, ಸಾಬು ಮಾಶ್ಯಾಳ, ಮಲ್ಲಿಕಾರ್ಜುನ ಪರಸಣ್ಣವರ, ಮಲ್ಲು ಬಿದರಿ, ವಿಠ್ಠಲ ಪಡಸಲಗಿ, ಕಲ್ಲಪ್ಪಗೌಡ ನ್ಯಾಮಗೌಡ, ವಿಠ್ಠಲ ಯಂಕಪ್ಪ ಪಡಸಲಗಿ, ಎಂ. ಡಿ. ಪಡಸಲಗಿ, ಬಾಳೇಶ ಸೋ. ಪಡಸಲಗಿ, ಮಾಸಿದ್ದಸಾ. ಪಡಸಲಗಿ, ತುಕಾರಾಮ ಭೀ. ಪಡಸಲಗಿ, ಅಮ್ಮೋಗಿ ಸಿ. ಗಲಗಲಿ, ಲಕ್ಷ್ಮಣ ಜಿರಲಿ ಮುಂತಾದರುವ ಉಪಸ್ಥಿತರಿದ್ದರು.

click me!