
ಚಿಕ್ಕಮಗಳೂರು (ಫೆ.11): ಶಾಸಕರ ಆಪ್ತ ಸಹಾಯಕ ಹಾಗೂ ಇತರ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ ಸರ್ಕಾರಿ ನೌಕರನೊಬ್ಬ ಕೊನೆಗೂ ಪತ್ತೆಯಾಗಿದ್ದಾರೆ. ಈ ಘಟನೆಯು ಜಿಲ್ಲೆಯ ರಾಜಕೀಯ ಹಾಗೂ ಆಡಳಿತ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಭ್ರಷ್ಟಾಚಾರ ಮತ್ತು ಕಿರುಕುಳದ ಗಂಭೀರ ಆರೋಪಗಳು ಕೇಳಿಬಂದಿವೆ.
ಕಡೂರು ತಾಲೂಕು ಕಚೇರಿಯಲ್ಲಿ ಸಾಂಖ್ಯಿಕ ನಿರೀಕ್ಷಕ ಅಧಿಕಾರಿಯಾಗಿ (Statistical Inspector) ಕಾರ್ಯನಿರ್ವಹಿಸುತ್ತಿದ್ದ ಇಕ್ಬಾಲ್ ಎಂಬುವವರು ಕಳೆದ ಕೆಲವು ದಿನಗಳ ಹಿಂದೆ ದಿಢೀರ್ ನಾಪತ್ತೆಯಾಗಿದ್ದರು. ನಾಪತ್ತೆಯಾಗುವ ಮುನ್ನ ಇಕ್ಬಾಲ್ ಅವರು ಸುದೀರ್ಘವಾದ ಪತ್ರವೊಂದನ್ನು ಬರೆದಿದ್ದರು. ಅದರಲ್ಲಿ ಕಡೂರು ಕಾಂಗ್ರೆಸ್ ಶಾಸಕ ಕೆ.ಎಸ್. ಆನಂದ್ ಅವರ ಆಪ್ತ ಸಹಾಯಕ (PA) ಮಂಜುನಾಥ್ ಸೇರಿದಂತೆ ನಾಲ್ವರು ತಮಗೆ ಮಾನಸಿಕವಾಗಿ ತೀವ್ರ ಕಿರುಕುಳ ನೀಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದರು.
ಇಕ್ಬಾಲ್ ಅವರು ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ನಾಲ್ಕು ಪ್ರಮುಖ ವ್ಯಕ್ತಿಗಳ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಶಾಸಕರ ಪಿಎ ಮಂಜುನಾಥ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶಿವಕುಮಾರ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಕಲ್ಲೇಶ್ ಹಾಗೂ ಕಡೂರು ತಹಶೀಲ್ದಾರ್ ಪೂರ್ಣಿಮಾ ಅವರು ತಮಗೆ ಕೆಲಸ ಮಾಡಲು ಬಿಡದೆ ಸತತವಾಗಿ ತೊಂದರೆ ನೀಡುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು. ಅಲ್ಲದೆ, ಈ ವ್ಯಕ್ತಿಗಳು ಪ್ರತಿ ತಿಂಗಳು 25,000 ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂಬ ಸ್ಫೋಟಕ ಆರೋಪವನ್ನೂ ಇಕ್ಬಾಲ್ ಮಾಡಿದ್ದಾರೆ.
ಇಕ್ಬಾಲ್ ಅವರ ಕುಟುಂಬದವರು ನೀಡಿದ ದೂರಿನ ಮೇರೆಗೆ ಕಡೂರು ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾದರು. ಮೊಬೈಲ್ ಲೊಕೇಶನ್ ಹಾಗೂ ಇತರ ಮಾಹಿತಿಗಳ ಆಧಾರದ ಮೇಲೆ ತನಿಖೆ ನಡೆಸಿದಾಗ, ಇಕ್ಬಾಲ್ ಅವರು ಚಿಕ್ಕಮಗಳೂರು ನಗರದ ವಿಜಯಪುರದಲ್ಲಿರುವ ತಮ್ಮ ಮನೆಯಲ್ಲಿ ಇರುವುದು ತಿಳಿದುಬಂದಿದೆ. ಕೂಡಲೇ ಅಲ್ಲಿಗೆ ಧಾವಿಸಿದ ಪೊಲೀಸರು ಇಕ್ಬಾಲ್ ಅವರನ್ನು ವಶಕ್ಕೆ ಪಡೆದು, ಆರೋಗ್ಯ ತಪಾಸಣೆಗಾಗಿ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಪ್ರಕರಣಕ್ಕೆ ಮತ್ತೊಂದು ಮಗ್ಗುಲಿದ್ದು, ಇಕ್ಬಾಲ್ ಅವರು ಈ ಹಿಂದೆ ಚಿಕ್ಕಮಗಳೂರು ತಾಲೂಕು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಮರಣ ದೃಢೀಕರಣ ಪತ್ರ ನೀಡಲು ಲಂಚ ಪಡೆದ ಆರೋಪದ ಮೇಲೆ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಈ ಘಟನೆಯ ನಂತರ ಅವರನ್ನು ಕಡೂರಿಗೆ ವರ್ಗಾವಣೆ ಮಾಡಲಾಗಿತ್ತು. ಪ್ರಸ್ತುತ ಕಿರುಕುಳದ ಆರೋಪದ ಹಿಂದೆ ಈ ಹಳೆಯ ಪ್ರಕರಣದ ಪ್ರಭಾವವಿದೆಯೇ ಅಥವಾ ನಿಜವಾಗಿಯೂ ಹಣಕ್ಕಾಗಿ ಕಿರುಕುಳ ನೀಡಲಾಗುತ್ತಿತ್ತೇ ಎಂಬುದು ತನಿಖೆಯಿಂದ ಹೊರಬರಬೇಕಿದೆ.
ಪ್ರಸ್ತುತ ಇಕ್ಬಾಲ್ ಅವರು ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಸರ್ಕಾರಿ ಅಧಿಕಾರಿಯೊಬ್ಬರು ಶಾಸಕರ ಆಪ್ತರು ಹಾಗೂ ತಹಶೀಲ್ದಾರ್ ಮಟ್ಟದ ಅಧಿಕಾರಿಗಳ ವಿರುದ್ಧ ಕಿರುಕುಳದ ಆರೋಪ ಮಾಡಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.