ಜೆಡಿಎಸ್ ಮುಖಂಡರೋರ್ವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಬೆಂಗಳೂರು [ಜು.2] : ದುರ್ನಡತೆ ಆರೋಪದ ಮೇರೆಗೆ ಜೆಡಿಎಸ್ ಪಕ್ಷದ ನಗರ ಘಟಕದ ವಕ್ತಾರ ಕೆ.ಎಚ್.ಕುಮಾರ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿ ಪಕ್ಷದ ನಗರ ಅಧ್ಯಕ್ಷ ಆರ್.ಪ್ರಕಾಶ್ ಆದೇಶ ಹೊರಡಿಸಿದ್ದಾರೆ.
ಪಕ್ಷದ ಸಂಘಟನೆ ಸಂಬಂಧ ಭಾನುವಾರ ನಡೆದ ಸಭೆಯಲ್ಲಿ ಅನಗತ್ಯವಾಗಿ ಮಧ್ಯೆ ಪ್ರವೇಶಿಸಿ ಮೈಕ್ ಕಿತ್ತುಕೊಂಡು ಮಾತನಾಡಲು ಪ್ರಯತ್ನಿಸಿದ್ದು ಇತರೆ ಕಾರ್ಯಕರ್ತರಿಗೆ ಪ್ರಚೋದನೆ ನೀಡುವಂತಿತ್ತು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಸೇರಿದಂತೆ ಇತರೆ ನಾಯಕರಿಗೆ ಅಗೌರವವನ್ನುಂಟು ಮಾಡಿದ್ದಾರೆ. ಸಭೆ ಮುಗಿದ ಬಳಿಕವೂ ಏರುಧ್ವನಿಯಲ್ಲಿ ಅಸಂಬದ್ಧ ಪ್ರಶ್ನೆಗಳನ್ನು ಕೇಳಿ ವಾತಾವರಣವನ್ನು ಕಲುಷಿತಗೊಳಿಸಿದರು. ಇದು ಮಾಧ್ಯಮಗಳಲ್ಲಿ ಪ್ರಕಟವಾಗಿ ಪಕ್ಷದ ಮರ್ಯಾದೆಯನ್ನು ಹಾಳು ಮಾಡಲು ಪ್ರಯತ್ನಿಸಿದರು. ಹೀಗಾಗಿ ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಲ್ಲದೇ, ಏಳು ದಿನದಲ್ಲಿ ಘಟನೆಯ ಬಗ್ಗೆ ಲಿಖಿತ ಮೂಲಕ ಸೂಕ್ತ ಸಮಜಾಯಿಷಿ ನೀಡಬೇಕು. ಇಲ್ಲವಾದ್ದಲ್ಲಿ ಪಕ್ಷದಿಂದ ಉಚ್ಛಾಟಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.