'ರಾಜ್ಯ ಸರ್ಕಾರದಿಂದ ಕನ್ನಡ ವಿರೋಧಿ ನೀತಿ'

By Kannadaprabha NewsFirst Published Dec 26, 2020, 9:15 AM IST
Highlights

ಕನ್ನಡ ಭಾಷೆ, ಸಾಹಿತ್ಯ, ಪರಂಪರೆ ಕುರಿತು ಅಧ್ಯಯನ ನಡೆಸುವುದು ಹಂಪಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಯ ಉದ್ದೇಶ| ಹಂಪಿ ಕನ್ನಡ ವಿವಿಗೆ ಶೇ.80ರಷ್ಟು ಅನುದಾನ ಕಡಿತಗೊಳಿಸಿರುವುದರಿಂದ ವಿವಿಯ ಎಲ್ಲ ಸಂಶೋಧನಾ ಚಟುವಟಿಕೆ ಸ್ಥಗಿತ| ಅನುದಾನ ಬಿಡುಗಡೆಗೆ ಹಣವಿಲ್ಲ ಎನ್ನುತ್ತಿರುವ ಸರ್ಕಾರ ಸಂಸ್ಕೃತ ವಿವಿಗೆ ಮಾತ್ರ ಅನುದಾನ ಬಿಡುಗಡೆ ಮಾಡುತ್ತಿದೆ: ದತ್ತ| 

ಶಿವಮೊಗ್ಗ(ಡಿ.26): ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಅನುದಾನ ಕಡಿತಗೊಳಿಸದೆ, ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಂಪೂರ್ಣ ಅನುದಾನ ಕಡಿತಗೊಳಿಸುವ ಮೂಲಕ ರಾಜ್ಯ ಸರ್ಕಾರ ಕನ್ನಡ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ರಾಜ್ಯ ಜೆಡಿಎಸ್‌ ವಕ್ತಾರ ವೈ.ಎಸ್‌.ವಿ.ದತ್ತ ಆರೋಪಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ, ಪರಂಪರೆ ಕುರಿತು ಅಧ್ಯಯನ ನಡೆಸುವುದು ಹಂಪಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆ ಉದ್ದೇಶವಾಗಿದೆ. ಹಂಪಿ ಕನ್ನಡ ವಿವಿಗೆ ಶೇ.80ರಷ್ಟು ಅನುದಾನ ಕಡಿತಗೊಳಿಸಿರುವುದರಿಂದ ವಿವಿಯ ಎಲ್ಲ ಸಂಶೋಧನಾ ಚಟುವಟಿಕೆ ಸ್ಥಗಿತಗೊಂಡಿವೆ. ಅನುದಾನ ಬಿಡುಗಡೆಗೆ ಹಣವಿಲ್ಲ ಎನ್ನುತ್ತಿರುವ ಸರ್ಕಾರ ಸಂಸ್ಕೃತ ವಿವಿಗೆ ಮಾತ್ರ ಅನುದಾನ ಬಿಡುಗಡೆ ಮಾಡುತ್ತಿದೆ. ನಾನು ಸಂಸ್ಕೃತ ವಿರೋಧಿಯಲ್ಲ, ಸಂಸ್ಕೃತ ವಿವಿಗೆ ಅನುದಾನ ನೀಡಿ, ಕನ್ನಡ ವಿವಿಗೆ ಮಾತ್ರ ಅನುದಾನ ಕಡಿತಗೊಳಿಸಿರುವುದಕ್ಕಷ್ಟೇ ನನ್ನ ವಿರೋಧವಿದೆ ಎಂದರು.

ಬಿಜೆಪಿ ಜತೆ ಜೆಡಿಎಸ್‌ ವಿಲೀನ: ವೈಎಸ್‌ವಿ ದತ್ತ ಪ್ರತಿಕ್ರಿಯೆ

ರಾಜ್ಯ ಸರ್ಕಾರ ಅನುಸರಿಸುತ್ತಿರುವ ಈ ಧೋರಣೆಯಿಂದಾಗಿ ಕನ್ನಡದ ಸ್ಥಾನಮಾನಕ್ಕೆ ಧಕ್ಕೆ ಉಂಟಾಗುತ್ತಿದೆ. 1980ರಲ್ಲಿ ನಡೆದ ಗೋಕಾಕ್‌ ಚಳವಳಿಯಂತೆ ಇಂದು ಜನಾಂದೋಲನ ಅನಿವಾರ್ಯವಾಗಿದೆ. ಅನುದಾನ ಕಡಿತ ಹಾಗೂ ಸರ್ಕಾರದ ಕನ್ನಡ ವಿರೋಧಿ ನೀತಿ ಖಂಡಿಸಿ ನಾರಾಯಣಗೌಡ ಬಣದ ಕನ್ನಡ ರಕ್ಷಣಾ ವೇದಿಕೆ ಅಭಿಯಾನ ಹಮ್ಮಿಕೊಂಡಿದ್ದು, ಇದಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.
 

click me!