ಸಾರಿಗೆ ಮುಷ್ಕರ: ಸರ್ಕಾರ ಹಠಮಾರಿ ಧೋರಣೆ ಬಿಡಲಿ, ಕೋನರಡ್ಡಿ

By Kannadaprabha NewsFirst Published Apr 18, 2021, 11:05 AM IST
Highlights

ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನೌಕರರ ಪರವಾಗಿ ಪಕ್ಷದಿಂದ ಹೋರಾಟದ ನಿರ್ಧಾರ| ಸಾರಿಗೆ ನೌಕರರ ಸಮಸ್ಯೆಗಳನ್ನು ಬಗೆಹರಿಸುವ ಬದಲು ಹೋರಾಟ ಹತ್ತಿಕ್ಕುವ ದಮನಕಾರಿ ನೀತಿ ಅನುಸರಿಸು​ತ್ತಿದೆ| ಸಂಸ್ಥೆಯನ್ನು ಖಾಸಗೀಕರಣ ಮಾಡುವ ಹುನ್ನಾರ ನಡೆದಿದೆ: ಕೋನರೆಡ್ಡಿ| 

ಹುಬ್ಬಳ್ಳಿ(ಏ.18):  ಸರ್ಕಾರ ಹಠಮಾರಿ ಧೋರಣೆ, ತುರ್ತು ಪರಿಸ್ಥಿತಿ ರೀತಿಯ ನಡವಳಿಕೆ ಬಿಟ್ಟು ಮುಷ್ಕರ ನಿರತ ಸಾರಿಗೆ ನೌಕರರನ್ನು ತಕ್ಷಣವೇ ಕರೆದು ಚರ್ಚೆ ನಡೆಸಿ ಸಮಸ್ಯೆ ಪರಿಹರಿಸಬೇಕು. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನೌಕರರ ಪರವಾಗಿ ಪಕ್ಷ ಹೋರಾಟದ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮಾಜಿ ಶಾಸಕ, ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್‌.ಎಚ್‌. ಕೋನರಡ್ಡಿ ಎಚ್ಚರಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ನೌಕರರ ಸಮಸ್ಯೆಗಳನ್ನು ಬಗೆಹರಿಸುವ ಬದಲು ಹೋರಾಟ ಹತ್ತಿಕ್ಕುವ ದಮನಕಾರಿ ನೀತಿ ಅನುಸರಿಸು​ತ್ತಿದೆ. ಪ್ರಜಾಪ್ರಭುತ್ವದಲ್ಲಿ ಹೋರಾಟ ಸಾಮಾನ್ಯ. ಆದರೆ, ಸರ್ಕಾರ ತುರ್ತು ಪರಿಸ್ಥಿತಿ ರೀತಿಯಲ್ಲಿ ಹೋರಾಟವನ್ನು ಹತ್ತಿಕ್ಕಲು ಯತ್ನಿಸಿದೆ. ವರ್ಗಾವಣೆ, ವಜಾ, ಸಂಬಳ ನೀಡದೆ ನೌಕರರಿಗೆ ತೊಂದರೆಗಳನ್ನು ಉಂಟುಮಾಡುತ್ತಿದೆ. ಹೋರಾಟವನ್ನು ಬಳಸಿಕೊಂಡು ಖಾಸಗೀಕರಣ ಮಾಡುವ ಹುನ್ನಾರ ನಡೆಯುತ್ತಿದೆ. ಡಿಸಿ, ಪೊಲೀಸ್‌ ಇಲಾಖೆ ಬಳಸಿಕೊಂಡು ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಆಪಾದಿಸಿದರು.

ಹುಬ್ಬಳ್ಳಿ: ನೇಣು ಬಿಗಿದುಕೊಂಡು ಬಸ್‌ ಕಂಡಕ್ಟರ್‌ ಆತ್ಮಹತ್ಯೆ

ಒಂಬತ್ತು ಬೇಡಿಕೆಗಳಲ್ಲಿ ಎಷ್ಟು ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಪ್ರಯತ್ನ ಮಾಡಿದೆ ಎಂಬುದನ್ನು ಪ್ರಕಟಿಸಬೇಕು. ಸಾರಿಗೆ ನೌಕರರು ನಮ್ಮನ್ನು ಬಹಿರಂಗವಾಗಿ ಭೇಟಿಯಾಗಲು ಹೆದರುವಂತ ಪರಿಸ್ಥಿತಿ ನಿರ್ಮಿಸಿದೆ. ಕೋವಿಡ್‌ ನೆಪ, ಕೋಡ್‌ ಆಫ್‌ ಕಂಡಕ್ಟ್ ನೆಪ ಹೇಳಿ ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಸಾಧ್ಯವಾಗಿಲ್ಲ ಎಂಬುದು ಸಮಂಜಸವಾದ ಕಾರಣವಲ್ಲ. ಸಂಸ್ಥೆಯನ್ನು ಖಾಸಗೀಕರಣ ಮಾಡುವ ಹುನ್ನಾರ ನಡೆದಿದೆ. ಒಟ್ಟಾರೆ ಈ ಪ್ರಕರಣ ನಿರ್ವಹಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿದ್ದು, ಇದೇ ರೀತಿ ಮುಂದುವರಿದರೆ ಜೆಡಿಎಸ್‌ ಪಕ್ಷದಿಂದ ಹೋರಾಟ ನಡೆಸಲಾಗುವುದು ಎಂದರು.

ಜಿಲ್ಲೆಯಲ್ಲಿ ಕೊರೋನಾ ಲಸಿಕೆ ಕೊರತೆ ಎದುರಾಗಿದೆ. ತಜ್ಞರ ವರದಿ ಪಡೆದು ಲಾಕ್‌ಡೌನ್‌ ಬಗ್ಗೆ ಸರ್ಕಾರ ನಿರ್ಣಯ ಕೈಗೊಳ್ಳಲಿ. ಆದರೆ, ಜನರನ್ನು ನಿರಂತರವಾಗಿ ಭಯದಲ್ಲಿ ಇಡುವುದು ಸರಿಯಲ್ಲ ಎಂದರು. ಗುರುರಾಜ ಹುಣಸಿಮರದ, ಸಾದಿಕ್‌ ಹಕೀಂ, ವಿನಾಯಕ ಗಾಡಿವಡ್ಡರ ಸೇರಿದಂತೆ ಇತರರು ಇದ್ದರು.
 

click me!