ಜೆಡಿಎಸ್- ಬಿಜೆಪಿ ನಾಯಕರಿಬ್ಬರು ಕೈ ಸೇರ್ಪಡೆ : ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ ಎಂದ ಪರಮೇಶ್ವರ್

By Kannadaprabha NewsFirst Published Apr 19, 2024, 4:19 PM IST
Highlights

 ಜೆಡಿಎಸ್ ಮುಖಂಡರ ಹೆಬ್ಬೂರಿನ ದೀಪಕ್‌ಗೌಡ ಹಾಗೂ ಬಿಜೆಪಿ ಮುಖಂಡ ನರಸೇಗೌಡ ಅವರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

  ತುಮಕೂರು :  ಜೆಡಿಎಸ್ ಮುಖಂಡರ ಹೆಬ್ಬೂರಿನ ದೀಪಕ್‌ಗೌಡ ಹಾಗೂ ಬಿಜೆಪಿ ಮುಖಂಡ ನರಸೇಗೌಡ ಅವರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಶಾಲು ಹಾಕಿ, ಕೈಗೆ ಬಾವುಟ ನೀಡಿ ಜೆಡಿಎಸ್‌ನ ದೀಪಕ್‌ಗೌಡ, ಬಿಜೆಪಿಯ ನರಸೇಗೌಡ,ದಯಾನಂದಗೌಡ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡ ಡಾ.ಜಿ. ಪರಮೇಶ್ವರ್ ಅವರು,ಪಕ್ಷದ ಸಿದ್ದಾಂತ ಒಪ್ಪಿ ಯಾರೇ ಬಂದರೂ ಸ್ವಾಗತಿಸುವುದಾಗಿ ತಿಳಿಸಿದರು.

ಈ ವೇಳೆ ಮಾತನಾಡಿದ ಡಾ.ಜಿ.ಪರಮೇಶ್ವರ್, ಇಂದು ಇಬ್ಬರು ಯುವ ಮುಖಂಡರು ಮತ್ತು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇದರಿಂದ ತುಮಕೂರು ನಗರ ಮತ್ತು ಗ್ರಾಮಾಂತರದಲ್ಲಿ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಧೋರಣೆಗಳಿಂದ ಬೇಸತ್ತು ಕಾಂಗ್ರೆಸ್ ಪಕ್ಷ ಸೇರಿದ್ದು, ನಮ್ಮ ಅಭ್ಯರ್ಥಿ ಮುದ್ದಹನುಮೇಗೌಡ ಪರವಾಗಿ ಕೆಲಸ ಮಾಡಲಿದ್ದಾರೆ.

ಯುವಕರಾಗಿರುವ ದೀಪಕ್‌ಗೌಡ ಅವರಿಗೆ ಒಳ್ಳೆಯ ಭವಿಷ್ಯವಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನಗಳನ್ನು ಪಕ್ಷ ನೀಡಲಿದೆ. ತಮ್ಮ ತಮ್ಮ ವಾರ್ಡುಗಳು, ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷದ ಸಾಧನೆಗಳು ಮತ್ತು ಹೊಸ ಗ್ಯಾರಂಟಿಗಳ ಕರಪತ್ರ ಹಂಚುವ ಮೂಲಕ ಎಸ್.ಪಿ.ಮುದ್ದಹನುಮೇಗೌಡರ ಗೆಲುವಿಗೆ ದುಡಿಯುವಂತೆ ಸಲಹೆ ನೀಡಿದರು.

ಬಿಜೆಪಿ ಧರ್ಮದ ಹೆಸರಿನಲ್ಲಿ ಜನರನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಇದಕ್ಕೆ ಅವಕಾಶ ನೀಡಬಾರದು ಎಂಬ ಕಾರಣಕ್ಕೆ ಕೇಂದ್ರದಲ್ಲಿಯೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕೆಂಬುದು ನಮ್ಮ ಆಶಯ. ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ೧೦ ವರ್ಷದ ಬಿಜೆಪಿಯ ಆಡಳಿತದಿಂದ ಜನರು ಬೇಸತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಮುದ್ದಹನುಮೇಗೌಡರ ಪರ ಅಲೆ ಇದೆ. ಸರಳ ಸಜ್ಜನ ಎಂಬ ಮಾತುಗಳು ಮತದಾರರಿಂದಲೇ ಕೇಳಿ ಬರುತ್ತಿದೆ. ಇದು ನಮ್ಮ ಅಭ್ಯರ್ಥಿಯ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಡಾ.ಜಿ.ಪರಮೇಶ್ವರ್ ನುಡಿದರು.

ಈ ವೇಳೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ,ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್,ಮಾಜಿ ಉಪಮೇಯರ್ ಅಸ್ಲಾಂಪಾಷ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹೇಶ್,ದೀಪಕ್‌ಗೌಡ, ನರಸೇಗೌಡ, ದಯಾನಂದಗೌಡ ಮತ್ತಿತರರು ಉಪಸ್ಥಿತರಿದ್ದರು.

click me!