‘ಜೈಲಿಗೆ ಕಳಿಸ್ತೇನೆ’: ದೇವಸ್ಥಾನ ಅನುದಾನ ದುರ್ಬಳಕೆ ಆರೋಪಕ್ಕೆ ಜನಾರ್ದನ ರೆಡ್ಡಿ ಖಡಕ್ ವಾರ್ನಿಂಗ್!

Published : Aug 21, 2026, 09:39 PM IST
Janardhana Reddy

ಸಾರಾಂಶ

ಕಾಮಗಾರಿಗಳಿಗೆ ವೈಯಕ್ತಿಕವಾಗಿ ಸುಮಾರು ₹10 ಕೋಟಿ ಅನುದಾನ ನೀಡಿದ್ದೇನೆ. ದೇವಸ್ಥಾನಗಳ ಅಭಿವೃದ್ಧಿಗೆ ನೀಡಿರುವ ಅನುದಾನ ದುರ್ಬಳಕೆಯಾಗಲು ಸಾಧ್ಯವೇ ಇಲ್ಲ ಎಂದು ಶಾಸಕ ಜನಾರ್ದನ ರೆಡ್ಡಿ ಸ್ಪಷ್ಟಪಡಿಸಿದರು.

ಗಂಗಾವತಿ (ಆ.21): ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವೈಯಕ್ತಿಕವಾಗಿ ಸುಮಾರು ₹10 ಕೋಟಿ ಅನುದಾನ ನೀಡಿದ್ದೇನೆ. ದೇವಸ್ಥಾನಗಳ ಅಭಿವೃದ್ಧಿಗೆ ನೀಡಿರುವ ಅನುದಾನ ದುರ್ಬಳಕೆಯಾಗಲು ಸಾಧ್ಯವೇ ಇಲ್ಲ ಎಂದು ಶಾಸಕ ಜನಾರ್ದನ ರೆಡ್ಡಿ ಸ್ಪಷ್ಟಪಡಿಸಿದರು. ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದೇವಸ್ಥಾನಗಳ ಅಭಿವೃದ್ಧಿ ಕಾಮಗಾರಿಗಳ ಹಣ ದುರ್ಬಳಕೆಯಾಗಿದೆ ಎಂದು ಕೆಲವರು ಮಾಡುತ್ತಿರುವ ಆರೋಪಗಳನ್ನು ತಳ್ಳಿಹಾಕಿದರು.

ಆರ್‌ಟಿಐ ನೆಪದಲ್ಲಿ ಅಪಪ್ರಚಾರ: ರೆಡ್ಡಿ ಆರೋಪ

ನಗರದ ಕರವೇ ಮುಖಂಡರೊಬ್ಬರು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆದು ದೇವಸ್ಥಾನಗಳ ಅಭಿವೃದ್ಧಿಗೆ ಬಿಡುಗಡೆಯಾದ ಹಣ ದುರ್ಬಳಕೆಯಾಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಜನಾರ್ದನ ರೆಡ್ಡಿ ಆರೋಪಿಸಿದರು. ‘ಮಾಹಿತಿ ಹಕ್ಕಿನ ನೆಪದಲ್ಲಿ ಕೆಲ ಇಲಾಖೆಗಳಲ್ಲಿ ಬ್ಲಾಕ್‌ಮೇಲ್ ಮಾಡಿದ ಉದಾಹರಣೆಗಳಿವೆ. ನನ್ನ ಹಿಂದೆ ಇದ್ದುಕೊಂಡೇ ಇಂತಹ ಕೆಲಸಗಳಿಗೆ ಮುಂದಾಗಿರುವವರು ಇದೀಗ ನನ್ನ ವಿರುದ್ಧ ಕಪ್ಪುಚುಕ್ಕೆ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಇಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿದ್ದರೆ ಜೈಲಿಗೆ ಕಳುಹಿಸುವ ಕ್ರಮವನ್ನೂ ಕೈಗೊಳ್ಳುತ್ತೇನೆ ಎಂದು ಜನಾರ್ದನ ರೆಡ್ಡಿ ಎಚ್ಚರಿಕೆ ನೀಡಿದರು.

ನಗರ, ಗ್ರಾಮೀಣ ಭಾಗದ ದೇಗುಲಗಳಿಗೂ ಅನುದಾನ

ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳ ಹಲವು ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ ಎಂದು ಶಾಸಕ ಹೇಳಿದರು. ಕಾಮಗಾರಿಗಳನ್ನು ಗುತ್ತಿಗೆದಾರರ ಸಮ್ಮುಖದಲ್ಲಿ ನಡೆಸಲಾಗುತ್ತಿದ್ದು, ಕೆಲವು ದೇವಸ್ಥಾನಗಳಿಗೆ ಕಾಮಗಾರಿ ಆರಂಭಿಸಲು ಮುಂಗಡ ಹಣವನ್ನೂ ನೀಡಲಾಗಿದೆ ಎಂದು ತಿಳಿಸಿದರು. 2024-25ನೇ ಸಾಲಿನಲ್ಲಿ ನಗರದ ಕೆಲವು ದೇವಸ್ಥಾನಗಳಿಗೆ ನೀಡಿರುವ ಅನುದಾನದ ಕುರಿತು ದುರ್ಬಳಕೆ ಆರೋಪ ಮಾಡುತ್ತಿರುವವರ ಮೇಲೆ ನಿಗಾ ಇಡಲಾಗಿದೆ ಎಂದರು.

ಅಂಜನಾದ್ರಿ ದೇವಸ್ಥಾನದ ಚಿನ್ನದ ವಸ್ತುಗಳ ವಿಚಾರ

ಅಂಜನಾದ್ರಿಯ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಚಿನ್ನದ ವಸ್ತುಗಳನ್ನು ನೀಡಿದ ಸಂದರ್ಭದಲ್ಲೂ ಕೆಲವರು ಅಪಪ್ರಚಾರ ಮಾಡಿದ್ದರು ಎಂದು ಜನಾರ್ದನ ರೆಡ್ಡಿ ಹೇಳಿದರು. ಆದರೆ, ದೇಣಿಗೆ ನೀಡಿದ ಭಕ್ತರು ಸಂಬಂಧಿಸಿದ ಲೆಕ್ಕಪತ್ರಗಳನ್ನು ನೀಡಿದ್ದಾರೆ. ಹೀಗಾಗಿ ದೇವಸ್ಥಾನಗಳ ಅನುದಾನ ದುರ್ಬಳಕೆಯಾಗಿದೆ ಎಂಬ ಆರೋಪಗಳಿಗೆ ಯಾವುದೇ ಆಧಾರವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ತಮ್ಮ ಹಿಂದೆ ಇದ್ದು ಇದೀಗ ಅಪಪ್ರಚಾರಕ್ಕೆ ಮುಂದಾಗಿರುವ ಕರವೇ ರಾಜ್ಯಾಧ್ಯಕ್ಷ ಎಂದು ಹೇಳಿಕೊಳ್ಳುವ ವ್ಯಕ್ತಿಯ ವಿರುದ್ಧವೂ ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ದೇವಸ್ಥಾನಗಳ ಅನುದಾನ ದುರ್ಬಳಕೆಯಾಗಿಲ್ಲ. ದೇವಸ್ಥಾನಗಳ ಅಭಿವೃದ್ಧಿ ಸೇರಿದಂತೆ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ’ ಎಂದು ಜನಾರ್ದನ ರೆಡ್ಡಿ ತಿಳಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ಮನೋಹರಗೌಡ, ಯಮೂನೂರು ಚೌಡ್ಕಿ, ವೀರೇಶ ಬಲಕುಂದಿ, ಚಂದ್ರು ಹಿರಿಯೂರು, ಡಿ.ಕೆ. ಆಗೋಲಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

PREV
Read more Articles on
click me!

Recommended Stories

ವರಮಹಾಲಕ್ಷ್ಮಿ ಸಂಭ್ರಮ: ₹3 ಲಕ್ಷ ಮೌಲ್ಯದ ನೋಟುಗಳ ಅಲಂಕಾರದಲ್ಲಿ ಕಂಗೊಳಿಸಿದ ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ದೇವಿ!
ಕರಾವಳಿ ಕರ್ನಾಟಕದ ಬಹುದಿನದ ಬೇಡಿಕೆ ನನಸು: ಕೇರಳ ವಶದಲ್ಲಿದ್ದ ಮಂಗಳೂರು ರೈಲ್ವೆ ಮೈಸೂರು ವಿಭಾಗಕ್ಕೆ ಸೇರ್ಪಡೆ!