
ಕೋಲಾರ ( ಜ. 03 ) : ಸಚಿವ ಸಂಪುಟ ವಿಸ್ತರಣೆ ಮುಖ್ಯ ಮಂತ್ರಿಗಳಿಗಿರುವ ಪರಮಾಧಿಕಾರ, ಅವರು ಯಾವ ನಿರ್ಧಾರವನ್ನಾದರೂ ತೆಗದುಕೊಳ್ಳಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು.
ಸೋಮವಾರ ನಗರದ ಕೆಇಬಿ ಸಮುದಾಯ ಭವನದಲ್ಲಿ ಬಿಜೆಪಿ ಬೂತ್ ವಿಜಯ್ ಅಭಿಯಾನದ ಕಾರ್ಯಕ್ರಮಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿ, ಜಾರಕಿಹೊಳಿ ಅವರು ಒಳ್ಳೆಯ ವ್ಯಕ್ತಿ, ಶಾಸಕ, ಜಾರಕಿಹೊಳಿ ಅವರನ್ನ ಸಚಿವ ಸಂಪುಟಕ್ಕೆ ತೆಗೆದುಕೊಳ್ಳಲು ಯಾವುದೇ ವಿರೋಧವಿಲ್ಲ. ಕೆಲವು ಘಟನೆಗಳಿಂದ ಅದು ಕುತಂತ್ರದ ಸಂಚು, ಹಾಗಾಗಿ ಅವರು ಮೋಸ ಹೋಗಿದ್ದಾರೆ ಎಂದರು.
ಅದೇ ರೀತಿ ಈಶ್ವರಪ್ಪ ಅವರು ಸಹ ಪಕ್ಷಕ್ಕೆ ಒಂದು ಶಕ್ತಿ, ಅವರಿಬ್ಬರನ್ನ ಸಚಿವ ಸಂಪುಟಕ್ಕೆ ತೆಗೆದುಕೊಳ್ಳಲು ಯಾವುದೇ ಅಡ್ಡಿಯಿಲ್ಲ, ಮುಖ್ಯಮಂತ್ರಿಗಳು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧ ಎಂದು ತಿಳಿಸಿದರು.
ಕೋಲಾರದಲ್ಲಿ ಬಿಜೆಪಿಗೇ ಗೆÜಲುವು
ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಮುನಿರತ್ನ ಸಿದ್ದರಾಮಯ್ಯ ಅವರು ಘೋಷಣೆ ಮಾಡಲಿ ಮಾಡದೆ ಇರಲಿ, ಅವರು ಬರಲಿ ಬರದೆ ಇರಲಿ, ಅದು ನಮಗೆ ಬೇಡವಾದ ವಿಷಯ. ನಾವು ಕೋಲಾರವನ್ನ ಗೆದ್ದೆ ಗೆಲ್ಲುತ್ತೇವೆ. ಯಾವುದೇ ಅನುಮಾನವಿಲ್ಲ. ರಾಜಕೀಯ ಎನ್ನುವುದು ಯಾರೂ ಊಹೆ ಮಾಡಲಾಗುವುದಿಲ್ಲ. ನಮ್ಮಲ್ಲಿ ಈಗಾಗಲೇ ಪ್ರಬಲ ಅಭ್ಯರ್ಥಿ ಇದ್ದಾರೆ, ಯಾರೋ ಒಬ್ಬರು ಗಣ್ಯ ವ್ಯಕ್ತಿ, ಮುಖ್ಯಮಂತ್ರಿಗಳಾಗಿದ್ದವರು ಬಂದು ಗೆಲ್ತಾರೆ ಎನ್ನುವುದು ಭ್ರಮೆ. ಈ ಹಿಂದೆ ಸಿದ್ದುನ್ಯಾಮಗೌಡರು ಹೆಗಡೆ ಅವರನ್ನ ಸೋಲಿಸಿದ್ದರು. ಹಾಗಾಗಿ ನಾನೇ ಗೆದ್ದು ಬಿಡುವೆ ಎಂದುಕೊಳ್ಳುವುದು ಭ್ರಮೆ ಎಂದರು.
ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ
ಅರವಿಂದ ಲಿಂಬಾವಳಿ ಹೆಸರು ಬರೆದಿಟ್ಟು, ಉದ್ಯಮಿ ಆತ್ಮಹತ್ಯೆ ವಿಚಾರಕ್ಕೆ ಸಂಬಂಧಿಸಿದ್ದಂತೆ ಯಾವುದೇ ವ್ಯಕ್ತಿಯಾದರೂ ಕಾನೂನು ಏನು ಮಾಡಬೇಕೊ ಅದನ್ನು ಮಾಡುತ್ತೆ. ಉದ್ಯಮಿ ಇರಬಹುದು ರಾಜಕಾರಣಿ ಇರಬಹುದು, ಅದರಲ್ಲಿ ನಮ್ಮ ಹಸ್ತಕ್ಷೇಪವೇನಿಲ್ಲ. ಯಾರೂ ಕಾನೂನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ನೋಟ್ ಬ್ಯಾನ್ ವಿಚಾರ ನ್ಯಾಯಾಲಯದ ತೀರ್ಪು ಸರಿಯಾಗಿದೆ, ಜನಗಳೇನೂ ದಂಗೆ ಎದ್ದಿಲ್ಲ. ಅಂದು ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡ ತೀರ್ಮಾನ ಸರಿ ಇದೆ. ಜನ ಅದಕ್ಕೆ ಹೊಂದಿಕೊಂಡು ಜೀವನ ಸಾಗಿಸುತಿದ್ದಾರೆ ಎಂದರು.
ಶಾಸಕರು ಅನುದಾನ ಸರಿಯಾಗಿ ಬಳಸಿಲ್ಲ
ಕೋಲಾರದ ಕ್ಷೇತ್ರದ ಶಾಸಕರಿಗೆ ಮತ ನೀಡಬೇಕಾ ಬೇಡವಾ ಎನ್ನೋದು ರಸ್ತೆಗಳ ಅವ್ಯವಸ್ಥೆ ನೋಡಿ ಮತದಾರ ನಿರ್ಧರಿಸಬೇಕು. ಬರುವ ಅನುದಾನ ಸರಿಯಾಗಿ ಬಳಸದೇ ಇದ್ದರೆ ಹೀಗೆ ಆಗೋದು, ಪ್ರತಿ ಜಿಲ್ಲೆಗೂ ಅನುದಾನ ಇದ್ದೇ ಇರುತ್ತೆ. ಅದನ್ನು ಸರಿಯಾಗಿ ಬಳಕೆ ಮಾಡಬೇಕು. ಅಧಿಕಾರಿಗಳು, ರಾಜಕಾರಣಿಗಳು ಇದನ್ನು ಸಾರ್ವಜನಿಕರ ಬಳಕೆಗೆ ಸರಿಯಾಗಿ ಹಾಕಬೇಕು. ವೀಕ್ಷಣೆ ಮಾಡಬೇಕು, ಅದನ್ನು ಬಿಟ್ಟು ಕುಳಿತ ಜಾಗದಲ್ಲೆ ಎಲ್ಲವನೂ ಮಾಡಿದ್ರೆ ಹೀಗೇ ಆಗೋದು ಎಂದು ಹೇಳಿದರು.
ಜನಾರ್ದನ ರೆಡ್ಡಿ ಹೊಸ ಪಕ್ಷದ ವಿಚಾರಕ್ಕೆ ಸಂಬಂಧಿಸಿದ್ದಂತೆ ಮಾತನಾಡಿದ ಸಚಿವರು, ಜನಾರ್ದನ ರೆಡ್ಡಿ ಅವರು ಗಂಗಾವತಿಗೆ ಮಾತ್ರ ಅಭ್ಯರ್ಥಿ ಆಗುತ್ತೇನೆ ಎಂದು ಹೇಳಿಕೊಂಡು ಬಂದಿದ್ದು, ಈವಾಗ ಪಕ್ಷ ಕಟ್ಟುತ್ತೇನೆ ಎನ್ನುತ್ತಾರೆ. ಎಷ್ಟುಮಂದಿ ಜನಾರ್ದನ ಬಂದರು ಬಿಜೆಪಿಗೆ ಒಂದು ಸಣ್ಣ ತೊಂದರೆಯೂ ಆಗೋಲ್ಲ. ರೆಡ್ಡಿ ಯವರು ಆತುರದ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದರು.
ಕಾಂಗ್ರೆಸ್ನಲ್ಲಿ ನಾಕಕರು ಇದ್ದಾರೆಯೇ?
ಬಿಜೆಪಿಯಲ್ಲಿ ರಾಜ್ಯ ನಾಯಕರೇ ಇಲ್ಲ ಎನ್ನುವ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಮುನಿರತ್ನ, ಕಾಂಗ್ರೆಸ್ನಲ್ಲಿ ನಾಯಕರಿದ್ದಾರೆಯೇ ಎಂದು ಪ್ರಶ್ನಿಸಿದರು. ಅವರ ಬೆನ್ನು ಅವರಿಗೆ ಕಾಣೋಲ್ಲ. ಬೇರೆಯವರ ಬಗ್ಗೆ ನಾತಾಡುತ್ತಾರೆ. ಮೊದಲು ಅವರ ಪಕ್ಷದಲ್ಲಿ ಏನಾಗಿದೆ ಎಂದು ಹುಡುಕಿಕೊಳ್ಳಲಿ, ನಮ್ಮಲ್ಲಿ ನಾಯಕರ ಕೊರತೆ ಏನೂ ಇಲ್ಲ ಎಂದು ಹೇಳಿದರು.
ನಂದಿನಿಯನ್ನು ಅಮುಲ್ಗೆ ಸೇರ್ಪಡೆ ವಿಚಾರ ಕಾಂಗ್ರೆಸ್ ಸೃಷ್ಟಿಯಾಗಿದ್ದು, ಕಾಂಗ್ರೆಸ್ನವರಿಗೆ ಮಾಡಲು ಕೆಲಸ ಇಲ್ಲ. ಅದರ ಬಗ್ಗೆ ಇದುವರೆಗೂ ಯಾವುದೇ ಚರ್ಚೆ ಆಗಿಲ್ಲ, ಇದು ಕಾಂಗ್ರೆಸ್ ನವರ ಪಿತೂರಿ ಎಂದು ಎಂದು ಸಚಿವರು ಹೇಳಿದರು.