‘ಎಂಟಿಬಿ ರಾಜೀನಾಮೆ ನೀಡಿದ್ದಕ್ಕೆ ಕಾರಣವೇ ಇದು’

By Kannadaprabha NewsFirst Published Nov 17, 2019, 12:06 PM IST
Highlights

ಅನರ್ಹರಾದ ಹೊಸಕೋಟೆ ಕ್ಷೇತ್ರದ ಎಂಟಿಬಿ ನಾಗರಾಜ್ ರಾಜೀನಾಮೆ ನೀಡಲು ಪ್ರಮುಖ ಕಾರಣವೇ ಇದು ಎಂದು ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಹೇಳಿದ್ದಾರೆ.

ಹೊಸಕೋಟೆ [ನ.17] :  ಐದು ವರ್ಷಕ್ಕಾಗಿ ಹೊಸಕೋಟೆ ಮತದಾರ ಮತಕೊಟ್ಟು ಗೆಲ್ಲಿಸಿದ ವ್ಯಕ್ತಿ ತನ್ನ ಆಸ್ತಿ ಉಳಿಸಿಕೊಳ್ಳಲು ಜನಮತ ಧಿಕ್ಕರಿಸಿ ಐಟಿ ದಾಳಿಗೆ ಹೆದರಿ ರಾಜೀನಾಮೆ ಕೊಟ್ಟು ಹೋಗಿ, ನಾವು ಕಟ್ಟಿದ ಪಕ್ಷದ ಹುತ್ತದಲ್ಲಿ ಬಂದು ಸೇರಿಕೊಂಡು ನಮಗೆ ಅಲ್ಲಿ ಜಾಗವಿಲ್ಲದಂತೆ ಮಾಡಿದ್ದಾರೆ. ಹಣ ಮತ್ತು ಜನ ಬಲದ ನಡುವೆ ನಡೆಯುವ ಈ ಹೋರಾಟದಲ್ಲಿ ಹೊಸಕೋಟೆಯ ಸ್ವಾಭಿಮಾನ ಮತ್ತು ಗೌರವವನ್ನು ಉಳಿಸುವ ಕೆಲಸ ಮತದಾರರು ಮಾಡಬೇಕು ಎಂದು ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಹೇಳಿದರು.

ಸೂಲಿಬೆಲೆ ಹೋಬಳಿಯಲ್ಲಿ ಶನಿವಾರ 22 ಗ್ರಾಮಗಳಲ್ಲಿ ಬಿರುಸಿನ ಮತಯಾಚಿಸಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಅನುಧಾನಕೊಟ್ಟಿಲ್ಲ ಅಂತೆಲ್ಲ ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸಿ ತನ್ನ ಆಸ್ತಿ ಉಳಿಸಿಕೊಳ್ಳಲು ಐಟಿ ದಾಳಿಗೆ ಹೆದರಿ ಬಿಜೆಪಿಗೆ ಬಂದು ಸೇರಿಕೊಂಡಿರುವ ಎಂಟಿಬಿ ನಾಗರಾಜ್‌ಗೆ ಈ ಬಾರಿ ಮತದಾರ ತಕ್ಕ ಪಾಠ ಕಲಿಸಬೇಕು.

ಹಣ ಕೊಟ್ರೆ ಏನಬೇಕಾದರೂ ಮಾಡಬಹುದು ಎನ್ನುವ ಅಹಂನಲ್ಲಿರುವ ವ್ಯಕ್ತಿಗಳಿಗೆ ತಕ್ಕ ಪಾಠಕಲಿಸಿ ಹೊಸಕೋಟೆಯ ಗೌರವ ಉಳಿಸಬೇಕು. ಪಕ್ಷೇತರ ಅಭ್ಯರ್ಥಿಯಾಗಿರುವ ಕಾರಣ ನನ್ನಗೆ ರಾಜ್ಯ, ರಾಷ್ಟ್ರ ಮಟ್ಟದ ನಾಯಕರು ಪ್ರಚಾರಕ್ಕೆ ಬರೋಲ್ಲ. ಮುಖಂಡರು, ಮತದಾರರೇ ನನಗೆ ಪ್ರಚಾರಕರು ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಂದೆ, ತಾಯಿ ದೇವರ ಸಮಾನ. ದೇವರು  ಎಲ್ಲಿದ್ರೂ ಆಶೀರ್ವಾದ ಮಾಡ್ತಾನೆ. ನನ್ನ ತಂದೆ ಬಚ್ಚೇಗೌಡ ಬಿಜೆಪಿ ಸಂಸದರಾಗಿರುವ ಕಾರಣ ನನ್ನ ಪರವಾಗಿ ಪ್ರಚಾರಕ್ಕೆ ಬರೋಲ್ಲ. ಅವರ ಆಶೀರ್ವಾದ ಹಾಗೂ ಕ್ಷೇತ್ರ ಜನರ ಆಶೀರ್ವಾದ ನನ್ನ ಮೇಲೆ ಇರುತ್ತದೆ. ಹೊಸಕೋಟೆಯ ತ್ರಿಕೋನ ಸ್ಪರ್ಧೆಯಲ್ಲಿ ಎರಡು ಪಕ್ಷಗಳು ತಮ್ಮ ಗೆಲುವಿಗೆ ಅವರದ್ದೇಆದ ರಣತಂತ್ರ ಹೆಣದಿದ್ದು, ಈ ಬಾರಿ ಕ್ಷೇತ್ರದ ಜನರು ನನ್ನನ್ನು ಆಶೀರ್ವಾದಿಸಿ ಸೇವೆ
ಮಾಡಲು ಅವಕಾಶ ಮಾಡಿಕೊಡಲಿದ್ದಾರೆ ಎಂಬ ವಿಶ್ವಾಸ ನಂಬಿಕೆಯಿದೆ. ನ.21 ಕ್ಕೆ ನಮ್ಮ ಪಕ್ಷದ ಚಿನ್ಹೆ ಸಿಗಲಿದ್ದು, ಕಾರ್ಯಕರ್ತರು ಮುಖಂಡರು ಮನೆ ಮನೆಗೆ ಹೋಗಿ ಗ್ರಾಪಂ ಚುನಾವಣೆ ಮಾದರಿಯಲ್ಲಿ ಕೆಲಸ ಮಾಡಿ ಮತದಾರರಿಗೆ ಮನವರಿಕೆ ಮಾಡಿಕೊಡಬೇಕು
ಎಂದರು.

ಬಚ್ಚೇಗೌಡ ಸಹೋದರ ಬಿ.ಎನ್. ಗೋಪಾಲಗೌಡ ಮಾತನಾಡಿ, ಕ್ಷೇತ್ರದ ಭವಿಷ್ಯವನ್ನು ಅನರ್ಹರ ಕೈಗೆ ಇಡಬೇಡಿ. ವಿದ್ಯಾವಂತ, ಬುದ್ದಿವಂತ ಯುವಕ ಶರತ್ ಬಚ್ಚೇಗೌಡ ಜನಪರ ಕಾಳಜಿಯುಳ್ಳ ವ್ಯಕ್ತಿಯಾಗಿದ್ದು, ಹೊರಗಿನ ವ್ಯಕ್ತಿಗಳಿಗಿಂತ ಈ ಕ್ಷೇತ್ರ ಮಣ್ಣಿನ ಮಗ ಶರತ್‌ಗೆ ಬೆಂಬಲ ಕೊಡಿ ಎಂದು ಮನವಿ ಮಾಡಿದರು. 

ಯುವ ಮುಖಂಡ ಬಿ.ಜಿ ನಾರಾಯಣಗೌಡ ಮಾತನಾಡಿ, ಶರತ್ ಈ ಬಾರಿ ಗೆಲುವಿಗೆ ಅರ್ಹ ವ್ಯಕ್ತಿಯಾಗಿದ್ದೇನೆ. ಹಣ ಬಲಕ್ಕೆ ಜೋತು ಬಿದ್ದು ಮೋಸ ಹೋಗಬೇಡಿ ಎಂದು ಕೋರಿದರು.

ಎಚ್.ಡಿ.ಕುಮಾರಸ್ವಾಮಿ ಚಿರಋಣಿ:  ಸ್ವಾಭಿಮಾನಕ್ಕಾಗಿ ಪಕ್ಷೇತರ ಅಭ್ಯರ್ಥಿಯಾಗಿರುವ ನನಗೆ ಸಂಘ-ಸಂಸ್ಥೆಗಳು ಸೇರಿದಂತೆ ಹಲವರು ಬೆಂಬಲ ಸೂಚಿಸಿದ್ದಾರೆ. ಜೆಡಿಎಸ್ ಪಕ್ಷದ ಕುಮಾರಸ್ವಾಮಿ ನನಗೆ ಬೆಂಬಲ ವ್ಯಕ್ತಪಡಿಸಿರುವುದರಿಂದ ನಾನು ಅವರಿಗೆ ಚಿರಋಣಿಯಾಗಿದ್ದೇನೆ ಎಂದರು. ಜಿಪಂ ಮಾಜಿ ಅಧ್ಯಕ್ಷ ಬಿ.ಎಂ ನಾರಾಯಣಸ್ವಾಮಿ, ತಮ್ಮೇಗೌಡ, ಬಿ.ವಿ.ಸತೀಶ್‌ಗೌಡ, ತಾಪಂ ವಿಪಕ್ಷ ನಾಯಕರ ಡಾ.ಡಿ.ಟಿ ವೆಂಕಟೇಶ್ ಸೇರಿದಂತೆ ಹಲವಾರು ಮುಖಂಡರು ಶರತ್ ಮತಯಾಚನೆಯಲ್ಲಿ ಸಾಥ್ ನೀಡಿದರು. 

click me!