ಎಳನೀರು ಮಾರುಕಟ್ಟೆಗೆ ಹೊರ ರಾಜ್ಯದ ಲಾರಿ, ಕೊರೋನಾ ಆತಂಕ

By Kannadaprabha NewsFirst Published May 16, 2020, 1:37 PM IST
Highlights

ಲಾಕ್‌ಡೌನ್‌ ಸಡಿಲಿಕೆ ಬಳಿಕ ಹೊರ ರಾಜ್ಯಗಳಿಂದ ಎಳನೀರು ಸಾಗಿಸುವ ಲಾರಿಗಳು ಎಳನೀರು ಮಾರುಕಟ್ಟೆಗೆ ಬರುತ್ತಿರುವುದರಿಂದ ಕೊರೋನಾ ಹರಡುವ ಆತಂಕಕ್ಕೆ ಒಳಗಾಗಿರುವ ವರ್ತಕರುಗಳು ಮತ್ತು ಹಮಾಲಿಗಳು ಲಾರಿಗಳ ಪ್ರವೇಶಕ್ಕೆ ಅವಕಾಶ ನೀಡದಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಮಂಡ್ಯ(ಮೇ 16): ಲಾಕ್‌ಡೌನ್‌ ಸಡಿಲಿಕೆ ಬಳಿಕ ಹೊರ ರಾಜ್ಯಗಳಿಂದ ಎಳನೀರು ಸಾಗಿಸುವ ಲಾರಿಗಳು ಎಳನೀರು ಮಾರುಕಟ್ಟೆಗೆ ಬರುತ್ತಿರುವುದರಿಂದ ಕೊರೋನಾ ಹರಡುವ ಆತಂಕಕ್ಕೆ ಒಳಗಾಗಿರುವ ವರ್ತಕರುಗಳು ಮತ್ತು ಹಮಾಲಿಗಳು ಲಾರಿಗಳ ಪ್ರವೇಶಕ್ಕೆ ಅವಕಾಶ ನೀಡದಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ, ಕ್ಷೇತ್ರದ ಶಾಸಕ ಡಿ.ಸಿ. ತಮ್ಮಣ್ಣ , ರೈತರ ಒತ್ತಾಯದ ಮೇರೆಗೆ ಮಾರುಕಟ್ಟೆತೆರೆದು ಎಳನೀರು ಮಾರುಕಟ್ಟೆಗೆ ಅವಕಾಶ ಕಲ್ಪಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರು. ಅದರಂತೆ ಕಳೆದ 2 ದಿನಗಳಿಂದ ಮಾರುಕಟ್ಟೆತೆರೆಯಲಾಗಿದೆ. ರೈತರೂ ಸಹ ಮಾರುಕಟ್ಟೆಗೆ ಎಳನೀರು ಪೂರೈಸುತ್ತಿದ್ದು, ವರ್ತಕರು ಸಹ ಖರೀದಿಯಲ್ಲಿ ತೊಡಗಿದ್ದಾರೆ.

ಕೊರೋನಾತಂಕ: ಮಹಾರಾಷ್ಟ್ರದಿಂದ ವಿಜಯಪುರಕ್ಕೆ ಬಂದ 1348 ಮಂದಿ..!

ಹೊರ ರಾಜ್ಯಗಳಾದ ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ, ಪಂಜಾಬ್, ಹರಿಯಾಣ ಮತ್ತು ರಾಜಸ್ತಾನಗಳಿಂದ ಪ್ರತಿನಿತ್ಯ 25 ರಿಂದ 30 ಲಾರಿಗಳು ಮಾರುಕಟ್ಟೆಗೆ ಎಳನೀರು ಸಾಗಿಸಲು ಆಗಮಿಸುತ್ತಿವೆ. ಈ ರಾಜ್ಯಗಳಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿದೆ. ಎಳನೀರು ಸಾಗಿಸುವ ಲಾರಿ ಚಾಲಕರು ಮತ್ತು ಕ್ಲೀನರ್‌ ಗಳಿಗೆ ಕೊರೋನಾ ಸೋಂಕು ಇರುವ ಆತಂಕ ಸೃಷ್ಟಿಯಾಗಿದೆ.

ಎಪಿಎಂಸಿ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಮಾರುಕಟ್ಟೆಪ್ರವೇಶ ದ್ವಾರದಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸುತ್ತಿದ್ದಾರೆ. ಆದರೆ, ತಪಾಸಣೆ ಕೇಂದ್ರ ಕೇವಲ ನೆಪಮಾತ್ರದ ಕೇಂದ್ರವಾಗಿದೆ. ಹೊರ ರಾಜ್ಯದಿಂದ ಬಂದ ವ್ಯಕ್ತಿಗಳಿಗೆ ಗಂಟಲದ್ರವ ಪರೀಕ್ಷೆ ನಡೆಸಿರಬೇಕು ಎಂಬ ನಿಯಮವಿದ್ದರೂ ಸಹ ಎಲ್ಲಾ ನಿಯಮಗಳನ್ನೂ ಎಪಿಎಂಸಿ ಅಧಿಕಾರಿಗಳು ಗಾಳಿಗೆ ತೂರಿದ್ದಾರೆ. ಮಾರುಕಟ್ಟೆಯಲ್ಲಿ ವರ್ತಕರು ಮತ್ತು ಹಮಾಲಿಗಳು ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದ್ದರೂ ಸಹ ಇದು ಕಾರ್ಯರೂಪಕ್ಕೆ ಬಂದಿಲ್ಲ. ವರ್ತಕರುಗಳು ಗುಂಪುಗುಂಪಾಗಿ ಲಾರಿ ಚಾಲಕರೊಂದಿಗೆ ಸೇರಿಕೊಂಡು ಲಾರಿಗಳಿಗೆ ಎಳನೀರು ತುಂಬಿಸುವ ಕೆಲಸ ನಡೆಸುತ್ತಿದೆ. ಎಪಿಎಂಸಿ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಸಮುದಾಯ ಭವನ ಕೀ ಕೇಳಿದ ಪೊಲೀಸಪ್ಪನ ಕಿವಿ ಕಚ್ಚಿದ ಶಿಕ್ಷಕ!

ಈ ಬಗ್ಗೆ ತಹಸೀಲ್ದಾರ್‌ ಎಚ್‌.ಜಿ. ವಿಜಯಕುಮಾರ್‌ ಶುಕ್ರವಾರ ಎಪಿಎಂಸಿ ಕಾರ್ಯದರ್ಶಿ ತಹಸೀಂ ನಿಖತ್‌ ಖಾನ್‌ ಹಾಗೂ ಸಹ ಕಾರ್ಯದರ್ಶಿ ಶಿವಕುಮಾರ್‌ ಅವರೊಂದಿಗೆ ಚರ್ಚೆ ನಡೆಸಿ ಕೊರೋನಾ ಸೋಂಕು ಹರಡದಂತೆ ಮಾರುಕಟ್ಟೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದ್ದಾರೆ.

ಅಧಿಕಾರಿಗಳ ಮಾತಿಗೆ ಕಿಂಚಿತ್ತೂ ಬೆಲೆ ಕೊಡದ ವರ್ತಕರು, ಸಾಮಾಜಿಕ ಅಂತರ ಮತ್ತು ಮಾಸ್ಕ್‌ ಧರಿಸದೆ ಹೊರ ರಾಜ್ಯಗಳ ಲಾರಿ ಚಾಲಕರು ಮತ್ತು ವರ್ತಕರೊಂದಿಗೆ ಬೆರೆತು ವ್ಯಾಪಾರ ವಹಿವಾಟು ನಡೆಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ತಹಸೀಲ್ದಾರ್‌ ವಿಜಯಕುಮಾರ್‌ ಮಾರುಕಟ್ಟೆವ್ಯವಸ್ಥೆ ಕುರಿತಂತೆ ಜಿಲ್ಲಾ ಡಳಿತಕ್ಕೆ ವರದಿ ನೀಡಿದ್ದಾರೆ.

click me!