ಚಿಕ್ಕಮಗಳೂರು: ಗುಡ್ಡ ಹತ್ತಿ ಆಯುಷ್ಮಾನ್ ಕಾರ್ಡ್ ನೋಂದಣಿ: ಇದೇನಾ ಡಿಜಿಟಲ್‌ ಇಂಡಿಯಾ?

By Girish GoudarFirst Published Nov 9, 2022, 9:00 PM IST
Highlights

ವಿದ್ಯುತ್ ಹಾಗೂ ನೆಟ್ವರ್ಕ್ ಇಲ್ಲದೆ ಬೆಟ್ಟದಲ್ಲಿ ಹರಸಾಹಸ, ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಂಸೆ ಸಮೀಪದ ಕಾರ್ಲೆ-ಕಳಕೋಡು ಗ್ರಾಮದಲ್ಲಿ ನಡೆದ ಘಟನೆ

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ನ.09): ಸ್ವಾತಂತ್ರ್ಯದ ಅಮೃತ ಮಹೋತ್ಸವವೇ ಕಳೆದರೂ ಮಲೆನಾಡಿನ ಅನೇಕ ಭಾಗಗಳ ಜನರಿಗೆ ಮೂಲಭೂತ ಸೌಕರ್ಯವಾದ ರಸ್ತೆ ಹಾಗೂ ಆಸ್ಪತ್ರೆಯ ಗಂಭೀರ ಸಮಸ್ಯೆಯಿದೆ. ಈ ಮಧ್ಯೆ ಮಕ್ಕಳು, ವಯಸ್ಕರು, ವಯಸ್ಸಾದವರು ಸರ್ಕಾರದ ಆಯುಷ್ಮಾನ್ ಕಾರ್ಡ್ ಸೌಲಭ್ಯವನ್ನು ಪಡೆಯುವ ಸಲುವಾಗಿ ಗುಡ್ಡ ಹತ್ತಿ, ನಿರ್ಧಿಷ್ಟ ಪ್ರದೇಶದಲ್ಲಿ ನೆಟ್ವರ್ಕ್ ದೊರೆತ ನಂತರ ಆಯುಷ್ಮಾನ್ ಕಾರ್ಡ್‌ನ ಫಲಾನುಭವಿಗಳಾಗುತ್ತಿರುವ ದೃಶ್ಯ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ಕಂಡುಬಂದಿದೆ.

Latest Videos

ವಿದ್ಯುತ್ ಹಾಗೂ ನೆಟ್ವರ್ಕ್ ಇಲ್ಲದೆ ಬೆಟ್ಟದಲ್ಲಿ ಹರಸಾಹಸ

ಸರ್ಕಾರದ ಸೌಲಭ್ಯವನ್ನು ಪಡೆಯಲು ಕಳಸ ತಾಲೂಕಿನ ಸಂಸೆ ಸಮೀಪದ ಕಾರ್ಲೆ ಕಳಕೋಡು ಗ್ರಾಮದ ಕಾಡಂಚಿನ ಜನರು ಒದ್ದಾಟ ನಡೆಸುತ್ತಿರುವ ಸ್ಥಿತಿಯನ್ನು ಒಮ್ಮೆ ಕಂಡರೆ ಎಂಥವರೂ ಸರ್ಕಾರ ಹಾಗೂ ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಧರ್ಮಸ್ಥಳ ಸಂಘದ ವತಿಯಿಂದ ಈ ಭಾಗದ ಜನರಿಗೆ ಆಯುಷ್ಮಾನ್ ಕಾರ್ಡ್ ಮಾಡಿ ಕೊಡುವ ನೋಂದಣಿ ಕಾರ್ಯಕ್ರಮವನ್ನು ಸಂಘದವರು ಆಯೋಜನೆ ಮಾಡಿದ್ದರು. ಆದರೆ ಈ ಗ್ರಾಮದಲ್ಲಿ ಬಹುತೇಕ ಸಮಯ ವಿದ್ಯುತ್ ಹಾಗೂ ನೆಟ್ವರ್ಕ್ ಇರುವುದಿಲ್ಲ. ನೆಟ್ವರ್ಕ್ ಸಿಗದೇ ಇದ್ದುದರಿಂದ ಕಾರ್ಡ್ ನೋಂದಣಿಗೆ ಸಂಘಟಕರು ಮತ್ತು ಸ್ಥಳೀಯರು ಪಕ್ಕದ ಬೆಟ್ಟ ಹತ್ತಿ, ಅಲ್ಲೇ ಕಾರ್ಡ್ ನೋಂದಣಿ ಮಾಡಿಸಿಕೊಂಡರು. ಧರ್ಮಸ್ಥಳ ಸಂಘದ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಚಿಕ್ಕಮಗಳೂರು: ನ.11ರಂದು ಹರಿಹರಪುರ ಮಠದಲ್ಲಿ ಸಮಾನ ಸಂಸ್ಕಾರ ಸಮಾವೇಶ

ಆದರೆ ವಯಸ್ಸಾದವರು, ಮಕ್ಕಳು, ಅನಾರೋಗ್ಯ ಪೀಡಿತರು ಈ ಗುಡ್ಡವನ್ನು ಹತ್ತುವಲ್ಲಿ ಸಮಸ್ಯೆಗೆ ತುತ್ತಾಗುತ್ತಾರೆ.ಅನೇಕ ವರ್ಷಗಳಿಂದ ಈ ಭಾಗದ ಜನರಿಗೆ ವಿದ್ಯುತ್ ಹಾಗೂ ನೆಟ್ವರ್ಕ್ ಕುರಿತಾದ ಸಮಸ್ಯೆಯಿದ್ದು ಸಂಬಂಧಿಸಿದ ಅಧಿಕಾರಿಗಳು ಈ ಗ್ರಾಮದ ಜನರಿಗೆ ವಿದ್ಯುತ್ ಹಾಗೂ ನೆಟ್ವರ್ಕ್ ಸಮಸ್ಯೆ ಕುರಿತು ಉಂಟಾಗಿರುವ ಸಮಸ್ಯೆಯನ್ನು ಪರಿಹರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.  ಇನ್ನಾದರೂ ಈ ಗ್ರಾಮದ ಜನರಿಗೆ ಅತ್ಯಾವಶ್ಯಕವಾದ ಸಮರ್ಪಕ ವಿದ್ಯುತ್ ಹಾಗೂ  ನೆಟ್ವರ್ಕ್ ಸಮಸ್ಯೆಯನ್ನು ನೀಡುವಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಗಮನಹರಿಸಬೇಕಿದೆ.
 

click me!