ವೀರಶೈವ ಸಮಾಜದ ಒಳಪಂಗಡಗಳು ಒಂದಾಗಬೇಕಿದೆ : ಎಸ್.ಕೆ. ರಾಜಶೇಖರ್

By Kannadaprabha NewsFirst Published Jan 11, 2024, 10:43 AM IST
Highlights

ವೀರಶೈವ ಸಮಾಜದಲ್ಲಿರುವ ಎಲ್ಲಾ ಒಳ ಪಂಗಡಗಳು ಒಂದಾಗಿ ಒಗ್ಗಟ್ಟಾದರೆ ಮಾತ್ರ ಸಮಾಜದ ಅಭಿವೃದ್ಧಿಯಾಗಲಿದ್ದು ಈ ಬಗ್ಗೆ ಸಮಾಜದ ಬಂಧುಗಳು ಚಿಂತಿಸಿ ಉತ್ತಮ ಸಮಾಜ ಕಟ್ಟುವಲ್ಲಿ ಕಾರ್ಯೋನ್ಮುಖರಾಗಬೇಕೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಕೆ. ರಾಜಶೇಖರ್ ತಿಳಿಸಿದರು.

  ತಿಪಟೂರು :  ವೀರಶೈವ ಸಮಾಜದಲ್ಲಿರುವ ಎಲ್ಲಾ ಒಳ ಪಂಗಡಗಳು ಒಂದಾಗಿ ಒಗ್ಗಟ್ಟಾದರೆ ಮಾತ್ರ ಸಮಾಜದ ಅಭಿವೃದ್ಧಿಯಾಗಲಿದ್ದು ಈ ಬಗ್ಗೆ ಸಮಾಜದ ಬಂಧುಗಳು ಚಿಂತಿಸಿ ಉತ್ತಮ ಸಮಾಜ ಕಟ್ಟುವಲ್ಲಿ ಕಾರ್ಯೋನ್ಮುಖರಾಗಬೇಕೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಕೆ. ರಾಜಶೇಖರ್ ತಿಳಿಸಿದರು.

ನಗರದ ಎಸ್‌ವಿಪಿ ಯಲ್ಲಿ ನಡೆದ ನೂತನ ತಾಲೂಕು ವೀರಶೈವ ಲಿಂಗಾಯತ ಸಂಘಟನೆಯ ಉದ್ಘಾಟನಾ ಸಮಾರಂಭದ ಮೊದಲ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಸಂಘಟನೆಗಳನ್ನು ರಚಿಸುವುದು ಸುಲಭ. ಆದರೆ ಅದನ್ನು ಸರಿಯಾಗಿ ನಡೆಸಿಕೊಂಡು ಹೋಗುವುದು ಮುಖ್ಯ. ಹಾಗಾಗಿ ನಾನು ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಅಖಿಲ ಭಾರತ ಮಹಾಸಭೆಯ ಎಲ್ಲಾ ಜವಾಬ್ದಾರಿಯನ್ನು ಈಗಿನ ಯುವಪೀಳಿಗೆಗೆ ವಹಿಸುತ್ತಿದ್ದೇನೆ ಎಂದರು.

ತಾಲೂಕು ವೀರಶೈವ ಲಿಂಗಾಯತ ಸಂಘಟನೆಯ ಅಧ್ಯಕ್ಷ ರೇಣುಕಾರಾಧ್ಯ ಮಾತನಾಡಿ, ನಮ್ಮ ತಾಲೂಕಿನಲ್ಲಿ ಒಂದು ಬಲಿಷ್ಠವಾದ ನಿಷ್ಪಕ್ಷಪಾತವಾದ ಎಲ್ಲಾ ಲಿಂಗವಂತರು ಸೇರಿ ಈ ತಾಲೂಕಿನ ಏಳಿಗೆಗೋಸ್ಕರ ಸಮುದಾಯದ ಪರ ಕೆಲಸ ಮಾಡುವಂತಹ ಒಂದು ಸಂಘಟನೆಯ ಅವಶ್ಯಕತೆ ಇದೆ. ಅದಕ್ಕಾಗಿ ನಾವು ಹಗಲಿರುಳು ಶ್ರಮಿಸುತ್ತಿದ್ದು ನಿಮ್ಮ ಸಹಕಾರ ಅತ್ಯಗತ್ಯ ಎಂದು ಕಾರ್ಯಕರ್ತರಿಗೆ ತಿಳಿಸಿದರು.

ಸಂಘದ ಉಪಾಧ್ಯಕ್ಷ ರಘುನಂದನ್ ಮಾತನಾಡಿ, ಎಲ್ಲಾ ಒಳಪಂಗಡಗಳು ಭೇದ ಭಾವವಿಲ್ಲದೆ ಒಂದಾಗಬೇಕು. ಇಲ್ಲವಾದಲ್ಲಿ ಮುಂದಿನ ಪೀಳಿಗೆ ಅಪಾಯದಲ್ಲಿ ಸಿಲುಕುಬಹುದು. ಸಮಾಜವನ್ನು ಔದ್ಯೋಗಿಕ ಶೈಕ್ಷಣಿಕ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಬದಲಾವಣೆ ತರುವುದೇ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.

ಗುಡಿಗೊಂಡನಹಳ್ಳಿ ಗ್ರಾ.ಪಂ ಅಧ್ಯಕ್ಷ ವಿಠಲಾಪುರದ ಪರಮೇಶ್ವರಪ್ಪ ಮಾತನಾಡಿ, ನಮ್ಮೆಲ್ಲ ಒಳಪಂಗಡಗಳು ಒಂದಾಗಿ ನಮ್ಮ ತಾಲೂಕಿನಲ್ಲಿ ವೀರಶೈವ ಲಿಂಗಾಯತ ಸಂಘಟನೆ ಮಾಡುತ್ತಿರುವುದು ತುಂಬಾ ಸಂತೋಷವಾಗಿದ್ದು ನಾವೆಲ್ಲ ಸೇರಿ ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲಿ ಮುಂದುವರೆಯೋಣ ಎಂದರು.

ಸಂಘದ ನಿರ್ದೇಶಕ ನವಿಲೆ ಪರಮೇಶ್ ಮಾತನಾಡಿ, ಬಹುಸಂಖ್ಯಾತ ವೀರಶೈವ ಲಿಂಗಾಯಿತಯರು ಇರುವ ಕಡೆ ಸಂಘಟನೆ ಮಾಡುವುದು ತುಂಬಾ ಕಷ್ಟ ಆದರೂ ಇದನ್ನು ನಿಭಾಯಿಸುವಲ್ಲಿ ಈ ಸಂಘಟನೆ ಯಶಸ್ವಿಯಾಗಿದೆ. ಅದಕ್ಕಾಗಿ ತನುಮನ ಅರ್ಪಿಸಲು ಸಿದ್ದ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

ನಿವೃತ್ತ ಶಿಕ್ಷಕ, ಶರಣ ಸಾಹಿತಿ ದಿಬ್ಬದಹಳ್ಳಿ ಶಾಮಸುಂದರ್ ಮಾತನಾಡಿ, ಮುಂದಿನ ಪೀಳಿಗೆಗೆ ಒಳ್ಳೆಯ ಸಮಾಜವನ್ನು ನಿರ್ಮಿಸುವುದರ ಜೊತೆಗೆ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುವುದು ಕೂಡ ಮುಖ್ಯ ಉದ್ದೇಶವಾಗಿರಬೇಕು ಎಂದರು.,

ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಆಲದಹಳ್ಳಿ ವಿಶ್ವನಾಥ್, ಹೊಸೂರು ರಾಜಶೇಖರ್, ನಿವೃತ್ತ ಬ್ಯಾಂಕ್ ಮ್ಯಾನೇಜರ್ ಕುಮಾರಸ್ವಾಮಿ, ಅನಗೊಂಡನಹಳ್ಳಿ ಲಿಂಗಮೂರ್ತಿ, ಖಜಾಂಚಿ ಅರುಣ್‌ಕುಮಾರ್, ಕಾರ್ಯದರ್ಶಿ ಲ್ಯಾಬ್ ಬಸವರಾಜು, ಲಿಂಗದೇವರಹಳ್ಳಿ ಕಾಂತರಾಜು, ಈಡೇನಹಳ್ಳಿ ಗುರುಸ್ವಾಮಿ, ಕಲ್ಲೇಗೌಡನಪಾಳ್ಯದ ಮೋಹನ್, ಹುಚ್ಚಗೊಂಡನಹಳ್ಳಿ ಗ್ರಾ.ಪಂ ಅಧ್ಯಕ್ಷ ಬಸವರಾಜು, ಕೆರೆಗೋಡಿ ಸುಧಾ, ಸೂಗೂರು ಶಿವಪ್ರಕಾಶ್, ಜಾಬಘಟ್ಟದ ಗಿರೀಶ್, ಹರಚನಹಳ್ಳಿ ಹೆಮೇಶ್ ಸೇರಿದಂತೆ ಸುಮಾರು ೩೦೦ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿ ಮುಂದೆ ನಡೆಯುವ ಬೃಹತ್ ಸಮಾವೇಶಕ್ಕೆ ಸಾಕ್ಷಿಯಾದರು.

click me!