ಕಾರವಾರ: ಸೂಪಾ ಜಲಾಶಯಕ್ಕೆ ಹೆಚ್ಚಿದ ಒಳಹರಿವು

By Kannadaprabha NewsFirst Published Jul 28, 2021, 8:05 AM IST
Highlights

* ಯಾವುದೇ ಸಮಯದಲ್ಲಿ ನೀರು ಬಿಡುವ ಎಚ್ಚರಿಕೆ
* ಜಲಾಯಶದ ಕೆಳಭಾಗದಲ್ಲಿ ದೋಣಿ ಸಂಚಾರ, ಮೀನುಗಾರಿಕೆ ಮಾಡಬೇಡಿ
* ಸಧ್ಯ ನೆರೆಯ ಆತಂಕ ದೂರ 
 

ಕಾರವಾರ(ಜು.28): ಜಿಲ್ಲೆಯ ವಿವಿಧೆಡೆ ಮಳೆ ಕಡಿಮೆಯಾಗಿದ್ದು, ಸೂಪಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಸಾಧಾರಣ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಒಳ ಹರಿವು ಹೆಚ್ಚಾಗಿದ್ದು, ಇದೇ ರೀತಿ ಮುಂದುವರಿದರೆ ನೀರನ್ನು ಬಿಡುವ ಎಚ್ಚರಿಕೆ ನೀಡಲಾಗಿದೆ.

ಕಾರವಾರ, ಅಂಕೋಲಾ, ಭಟ್ಕಳ, ಹೊನ್ನಾವರ ತಾಲೂಕಿನಲ್ಲಿ ಮಳೆ ಕಡಿಮೆಯಾಗಿದ್ದು, ಬಹುತೇಕ ಕಡೆ ಬಿಸಿಲು ಮೂಡಿದೆ. ಕಾರವಾರ, ಅಂಕೋಲಾ, ಕುಮಟಾ ಭಾಗದಲ್ಲಿ ಕಳೆದ ಕೆಲವು ದಿನದ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹ ಸೃಷ್ಟಿಯಾಗಿತ್ತು. ಕಳೆದ ಎರಡು ದಿನದಿಂದ ಬಿಸಿಲು ಮೂಡಿರುವುದರಿಂದ ಮನೆ, ರಸ್ತೆಗಳಿಗೆ ನುಗ್ಗಿದ್ದ ನೀರು ಇಳಿಕೆಯಾಗಿದೆ. ನೆರೆಯ ಆತಂಕ ದೂರವಾಗಿದೆ.

ಯಲ್ಲಾಪುರ: ಪ್ರವಾಹ ಪೀಡಿತ ಸ್ಥಳಕ್ಕೆ ಸಚಿವ ಹೆಬ್ಬಾರ ಭೇಟಿ

ಶಿರಸಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಅಲ್ಲಲ್ಲಿ ತುಂತುರು ಮಳೆಯಾಗಿದೆ. ದಾಂಡೇಲಿ, ಜೋಯಿಡಾ, ಹಳಿಯಾಳ ಭಾಗದಲ್ಲಿ ಮಳೆ ಇಳಿಕೆಯಾಗಿದೆ. ಯಲ್ಲಾಪುರ, ಮುಂಡಗೋಡ, ಸಿದ್ದಾಪುರ ಭಾಗದ ಬಹುತೇಕ ಕಡೆ ಬಿಸಿಲು ಮೂಡಿದ್ದು, ಕೆಲವೆಡೆ ತುಂತುರು ಮಳೆಯಾಗಿದೆ. ಸೂಪಾ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದ್ದು, ನೀರಿನ ಮಟ್ಟಏರಿಕೆಯಾಗುತ್ತಿದೆ. ಒಳ ಹರಿವು ಹೆಚ್ಚಾದಲ್ಲಿ ಗೇಟ್‌ ಮೂಲಕ ನೀರನ್ನು ಹೊರಕ್ಕೆ ಬಿಡಲಾಗುವುದು ಎಂದು ಕೆಪಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಮಳೆಯಿಂದಾಗಿ ಸೂಪಾ ಜಲಾಶಯಕ್ಕೆ ಹೇರಳ ಪ್ರಮಾಣದ ನೀರು ಹರಿದು ಬರುತ್ತಿದ್ದು, ಸೂಪಾ ಜಲಾಶಯದ ಗರಿಷ್ಠ ಮಟ್ಟ 564.00 ಮೀ. ಆಗಿದ್ದು, ಮಂಗಳವಾರ 550.75 ಮೀ. ತುಂಬಿದೆ. ಹೀಗೆ ನೀರಿನ ಒಳ ಹರಿವು ಮುಂದುವರಿದರೆ ಆಣೆಕಟ್ಟಿನ ಸುರಕ್ಷತಾ ಹಿತದೃಷ್ಟಿಯಿಂದ ಹೆಚ್ಚುವರಿ ನೀರನ್ನು ಯಾವುದೇ ಸಮಯದಲ್ಲಿ ಹೊರ ಬಿಡಲಾಗುವುದು ಎಂದಿದೆ. ಸೂಪಾ ಆಣೆಕಟ್ಟೆಯ ಕೆಳಭಾಗದಲ್ಲಿ ದೋಣಿ ಸಂಚಾರ, ಮೀನುಗಾರಿಗೆ ಮತ್ತು ಇತರೆ ಚಟುವಟಿಕೆಗಳನ್ನು ನಡೆಸಬಾರದರು ಹಾಗೂ ಆಣೆಕಟ್ಟು ಕೆಳದಂಡೆಯಲ್ಲಿ ಹಾಗೂ ನದಿಯ ದಡದ ವಾಸಿಗಳು ಸುರಕ್ಷಿತ ಪ್ರದೇಶಕ್ಕೆ ತೆರಳಬೇಕು ಎಂದು ಹೇಳಲಾಗಿದೆ.
 

click me!