ಪ್ರಧಾನಿ ಮೋದಿ ಹಾಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಚುನಾವಣೆ ಗೆಲ್ಲೋಕೆ ಒಳೊಪ್ಪಂದ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ರಮನಾಥ ರೈ ಆರೋಪಿಸಿದ್ದಾರೆ. ಇಬ್ಬರು ಪರಸ್ಪರ ಆರೋಪ ಮಾಡಿಕೊಳ್ಳುತ್ತಿದ್ದಾರೆ. ಇದರ ಹಿಂದಿನ ಉದ್ದೇಶ ಚುನಾವಣೆ ಗೆಲ್ಲುವುದೇ ಹೊರತು ಬೇರೇನೂ ಅಲ್ಲ ಎಂದಿದ್ದಾರೆ.
ಮಂಗಳೂರು(ಸೆ.09): ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಚುನಾವಣೆ ಗೆಲ್ಲುವುದರಲ್ಲೇ ಆಸಕ್ತಿ ವಿನಃ ದೇಶದ ಅಭಿವೃದ್ಧಿಯ ಚಿಂತೆ ಇಲ್ಲ ಎಂದು ಮಾಜಿ ಸಚಿವ ರಮನಾಥ ರೈ ಹೇಳಿದ್ದಾರೆ.
ಪ್ರಧಾನಿ ಮೋದಿ ಹಾಗೂ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಇಬ್ಬರೂ ಒಂದೇ ತಾಯಿಯ ಮಕ್ಕಳಂತೆ. ಇಬ್ಬರಿಗೂ ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಒಳಒಪ್ಪಂದ ಮಾಡಿಕೊಂಡಿದ್ದಾರೆ. ಅದಕ್ಕಾಗಿಯೇ ಇಬ್ಬರು ಪರಸ್ಪರ ಆರೋಪ ಮಾಡಿಕೊಳ್ಳುತ್ತಿದ್ದಾರೆ. ಇದರ ಹಿಂದಿನ ಉದ್ದೇಶ ಚುನಾವಣೆ ಗೆಲ್ಲುವುದೇ ಹೊರತು ಬೇರೇನಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ.
ಉದ್ದಿಮೆಗಳು ಮುಚ್ಚುವ ಭೀತಿಯಲ್ಲಿದೆ:
ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕ ವ್ಯವಸ್ಥೆ ಕುಸಿಯುತ್ತಲೇ ಇದೆ. ಆಟೋಮೊಬೈಲ್, ಗಾರ್ಮೆಂಟ್ ಉದ್ದಿಮೆಗಳು ಮುಚ್ಚುವ ಭೀತಿಯಲ್ಲಿದೆ. ಬ್ಯಾಂಕ್ಗಳು ದಿವಾಳಿ ಅಂಚಿಗೆ ತಲುಪುವ ಹಂತದಲ್ಲಿವೆ. ಆದರೂ ತನ್ನ ಆರ್ಥಿಕತೆಯ ಸುಧಾರಣೆಗೆ ಕೇಂದ್ರ ಸರ್ಕಾರ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ದೂರಿದ್ದಾರೆ.
ಮೋದಿ - ಇಮ್ರಾನ್ ಖಾನ್ ಒಂದೇ ತಾಯಿ ಮಕ್ಕಳಿದ್ದಂತೆ..!
ಆರ್ಥಿಕ ಪರಿಸ್ಥಿತಿ ಅಧೋಗತಿಗಿಳಿದಿದೆ:
ಹಿಂದೆ ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ಜಾಗತಿಕದಲ್ಲಿ ಬ್ಯಾಂಕಿಂಗ್ ಕ್ಷೇತ್ರ ನೆಲಕಚ್ಚುವ ಸ್ಥಿತಿಗೆ ತಲುಪಿದರೂ ಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಸದೃಢವಾಗಿತ್ತು. ಇದಕ್ಕೆ ಮನಮೋಹನ ಸಿಂಗ್ ಅವರ ಆರ್ಥಿಕ ನೀತಿಯೇ ಕಾರಣವಾಗಿತ್ತು. ಆದರೆ ಈಗ ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರವಾಹ ಸಂತ್ರಸ್ತರಿಗೆ ಕೇಂದ್ರ ನೆರವಿಲ್ಲ:
ಕರ್ನಾಟಕದಲ್ಲಿ ಪ್ರವಾಹ ಪೀಡಿತರ ಪ್ರದೇಶಗಳ ಸಮೀಕ್ಷೆಗೆ ಮನಸ್ಸು ಮಾಡದ ಪ್ರಧಾನಿ, ಕೇಂದ್ರದಿಂದ ಕನಿಷ್ಠ ನೆರವನ್ನೂ ಬಿಡುಗಡೆ ಮಾಡಿಲ್ಲ. ಶನಿವಾರ ಪ್ರಧಾನಿ ಬೆಂಗಳೂರು ಭೇಟಿ ವೇಳೆ ನೆರೆ ಸಂತ್ರಸ್ತರಿಗೆ ಅನುದಾನ ಕೋರುವುದಾಗಿ ಸಿಎಂ ಯಡಿಯೂರಪ್ಪ ಹೇಳಿದರೂ ಅದು ಕೂಡ ಸಾಧ್ಯವಾಗಿಲ್ಲ. ಕರ್ನಾಟಕ ನೆರೆಪೀಡಿತವಾಗಿ ಸಂಕಷ್ಟದಲ್ಲಿರುವಾಗ ನೆರವು ನೀಡದ ಪ್ರಧಾನಿ ಈಗ ಹರಿಯಾಣದಲ್ಲಿ ಚುನಾವಣಾ ಸಿದ್ಧತಾ ರಾರಯಲಿಗೆ ತೆರಳಿದ್ದಾರೆ. ಇದು ಪ್ರಧಾನಿಗೆ ಚುನಾವಣೆ ಗೆಲ್ಲುವುದೇ ಲೆಕ್ಕಾಚಾರ ಎಂಬುದನ್ನು ತೋರಿಸಿಕೊಡುತ್ತದೆ ಎಂದು ರಮಾನಾಥ ರೈ ಲೇವಡಿ ಮಾಡಿದರು.
'ಮೋದಿ ಭೂತಾನ್ಗೆ ಹೋಗಿ ಮಕ್ಕಳ ಬೆನ್ನು ತಟ್ಟುವ ಬದಲು ಸಂತ್ರಸ್ತರ ಕಣ್ಣೀರೊರೆಸಲಿ'