ಮೇಕೆದಾಟು ಸಂಬಂಧ ಸುಪ್ರಿಂ ಕೋರ್ಟ್‌ಗೆ ಕೂಡಲೇ ಅಫಿಡವಿಟ್‌ ಸಲ್ಲಿಸಿ

By Kannadaprabha NewsFirst Published Nov 30, 2022, 6:34 AM IST
Highlights

ಮೇಕೆದಾಟು ಅಣೆಕಟ್ಟು ನಿರ್ಮಾಣ ಸಂಬಂಧ ತಮಿಳುನಾಡು ಸರ್ಕಾರ ತಗಾದೆ ತೆಗೆದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೂಡಲೇ ಸುಪ್ರಿಂ ಕೋರ್ಚ್‌ಗೆ ಅಫಿಡವಿಟ್‌ ಸಲ್ಲಿಸದಿದ್ದರೆ ತಡೆಯಾಜ್ಞೆ ಸಿಗುವ ಸಾಧ್ಯತೆ ಹೆಚ್ಚಿದೆ. ರಾಜಕೀಯ ಬಿಟ್ಟು ಸರ್ವಪಕ್ಷ ಸಭೆ ಕರೆದು ಅಗತ್ಯ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ಮುಂದಾಗಬೇಕು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ಆಗ್ರಹಿಸಿದರು.

 ಮೈಸೂರು :  ಮೇಕೆದಾಟು ಅಣೆಕಟ್ಟು ನಿರ್ಮಾಣ ಸಂಬಂಧ ತಮಿಳುನಾಡು ಸರ್ಕಾರ ತಗಾದೆ ತೆಗೆದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೂಡಲೇ ಸುಪ್ರಿಂ ಕೋರ್ಚ್‌ಗೆ ಅಫಿಡವಿಟ್‌ ಸಲ್ಲಿಸದಿದ್ದರೆ ತಡೆಯಾಜ್ಞೆ ಸಿಗುವ ಸಾಧ್ಯತೆ ಹೆಚ್ಚಿದೆ. ರಾಜಕೀಯ ಬಿಟ್ಟು ಸರ್ವಪಕ್ಷ ಸಭೆ ಕರೆದು ಅಗತ್ಯ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ಮುಂದಾಗಬೇಕು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ಆಗ್ರಹಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, (Supreme court) ನೀರು ಹಂಚಿಕೆ ತೀರ್ಪಿನಂತೆ ಕುಡಿಯುವ ನೀರಿಗಾಗಿ ನಾವು ಯಾವುದೇ ಯೋಜನೆ ಬೇಕಾದರೂ ರಾಜ್ಯವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಬಹುದು. ಅದರಂತೆ ಬಿಳಿಗುಂಡ್ಲು ಬಳಿ ಅಣೆಕಟ್ಟೆಕಟ್ಟಲು ನಮಗೆ ಹಕ್ಕಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌. BS yediyurappa) ಅವರು ತಮಿಳುನಾಡು ಸರ್ಕಾರದ ಅನುಮತಿ ಕೇಳಿ ಪತ್ರ ಬರೆದಿದ್ದು ಸರಿಯಲ್ಲ ಎಂದರು.

ಈ ಪತ್ರದ ಆಧಾರದ ಮೇಲೆ ಸುಪ್ರಿಂ ಕೋರ್ಚ್‌ ಮೆಟ್ಟಿಲೇರಿರುವ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆ ನಿರಾಕರಿಸುವಂತೆ ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದೆ. ಇದಕ್ಕೆ ಉತ್ತರ ನೀಡಲು ಕರ್ನಾಟಕ ಸರ್ಕಾರಕ್ಕೆ ಗಡುವು ನೀಡಿದ್ದು, ಈಗಾಗಲೇ 7 ದಿನ ಮುಗಿದಿದೆ. ಇತ್ತ ಮುಖ್ಯಮಂತ್ರಿಗಳು ಸಂಕಲ್ಪ ಯಾತ್ರೆ ಹೆಸರಿನಲ್ಲಿ ರಾಹುಲ್‌ಗಾಂಧಿ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರನ್ನು ಬೈಯುವುದರಲ್ಲಿ ನಿರತರಾಗಿದ್ದಾರೆ ಎಂದು ಅವರು ಟೀಕಿಸಿದರು.

ಕಾಂಗ್ರೆಸ್‌ನ ಪಾದಯಾತ್ರೆ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಬಜೆಟ್‌ನಲ್ಲಿ 1 ಸಾವಿರ ಕೋಟಿ ರುಗಳನ್ನು ಮೇಕೆದಾಟು ಯೋಜನೆಗೆ ನೀಡುವುದಾಗಿ ಘೋಷಿಸಿದರು. ಆದರೆ ಈವರೆಗೂ ಕಾಮಗಾರಿ ಆರಂಭದ ಕುರಿತು ಯಾವುದೇ ಮಾತುಗಳನ್ನಾಡಿಲ್ಲ. ಇನ್ನು ಕಾವೇರಿ ನೀರು ವ್ಯವಸ್ಥಾಪನಾ ಮಂಡಳಿ ಸಭೆಯಲ್ಲಿ 17 ಬಾರಿ ಈ ವಿಷಯ ಬಂದಿದ್ದರೂ ಮುಂದೂಡಲಾಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ 70 ಬಾರಿ ವಿಷಯ ಬಂದಿದ್ದರೂ ಚರ್ಚಿಸಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಈ ಡ್ಯಾಂ ನಿರ್ಮಾಣವಾದರೆ ತಮಿಳುನಾಡಿಗೆ ನೀಡಬೇಕಿರುವ 177.25 ಟಿಎಂಸಿ ನೀರನ್ನು ಬಿಟ್ಟುಕೊಡು ಉಳಿಕೆ ನೀರನ್ನು ನಾವು ಬಳಸಿಕೊಳ್ಳಬಹುದು. ಈ ಡ್ಯಾಂ ನಿರ್ಮಾಣವಾಗದೇ ಈಗಾಗಲೇ ನಾವು ಹೆಚ್ಚುವರಿಯಾಗಿ 450 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಟ್ಟಿದ್ದೇವೆ. ಇದನ್ನು ಅವರು ಬಳಸಿಕೊಳ್ಳಲು, ಸಂಗ್ರಹಿಸಲು ಸಾಧ್ಯವಾಗದೆ ಸಮುದ್ರಕ್ಕೆ ಬಿಡುತ್ತಿದ್ದಾರೆ ಎಂದರು.

ಬಿಜೆಪಿಯಲ್ಲಿ ಸೈಲೆಂಟ್‌ ಸುನಿಲ್‌:

ಬೆಂಗಳೂರು ಡಿಸಿಪಿ ನಾಪತ್ತೆಯಾದ ರೌಡಿಗಳ ಪಟ್ಟಿಬಿಡುಗಡೆಗೊಳಿಸಿದ್ದು, ಇದರಲ್ಲಿ ಸೈಲೆಂಟ್‌ ಸುನಿಲ್‌ ಹೆಸರು ಮೊದಲನೆಯದು. ಆದರೆ ಆತ ಬಿಜೆಪಿಯವರ ಬಳಿ ಇದ್ದಾನೆ. ಆತನನ್ನು ಸಂಸದರು, ಸಚಿವರು ಹಾಡಿ ಹೊಗಳಿದ್ದಾರೆ. ಆತನೊಂದಿಗೆ ವೇದಿಕೆ ಹಂಚಿಕೊಂಡು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಸಚಿವ ಅಶ್ವಥ್‌ನಾರಾಯಣ್‌ ಅವರಂತು ಆತನನ್ನು ವಹಿಸಿಕೊಂಡು ಮಾತನಾಡಿದ್ದೆ ಮಾತನಾಡಿದ್ದು ಎಂದು ಎಂ. ಲಕ್ಷ್ಮಣ್‌ ಕಟುವಾಗಿ ಟೀಕಿಸಿದರು.

ಸಿ.ಟಿ. ರವಿ ಅವರು ಸಿದ್ದರಾಮಯ್ಯ ಅವರನ್ನು ಸಿದ್ದರಾಮುಲ್ಲಾ ಖಾನ್‌ ಎಂದು ಟೀಕಿಸಿದ್ದಾರೆ. ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಅವರಿಗಿಲ್ಲ. ಸಿ.ಟಿ. ರವಿ ಎಂದರೆ ಸೈತಾನ್‌ ತಾರಿಕ್‌ ರವಿದುಲ್ಲಾ ಖಾನ್‌ ಎಂದರ್ಥ. ಅವರು ಗಳಿಕೆ ಮೀರಿ ಆಸ್ತಿ ಸಂಪಾದಿಸಿದ ಆರೋಪದ ಮೇಲೆ ಮೊಕದ್ದಮೆ ಎದುರಿಸುತ್ತಿದ್ದಾರೆ. ಸುಮಾರು 850 ಕೋಟಿ ಬೇನಾಮಿ ಆಸ್ತಿಗಳಿಸಿರುವ ಆರೋಪ ಅವರ ಮೇಲಿದೆ. ಹಿಂದೂ ಕಾರ್ಯಕರ್ತರ ಹತ್ಯೆಯ ಬಗ್ಗೆ ಅಷ್ಟುಮಾತನಾಡುತ್ತೀರಿ. ಆದರೆ ಕಳೆದ 4 ತಿಂಗಳಲ್ಲಿ 18 ಮಂದಿ ಹಿಂದೂ ಕಾರ್ಯಕರ್ತರ ಸಾವಾಗಿದೆ. ಹಿಂದೂಗಳನ್ನು ಸಾಯಿಸಿದ್ದು ನೀವೇ ಅಲ್ಲವೇ ಎಂದು ಅವರು ಪ್ರಶ್ನಿಸಿದರು.

ಹೊಸ ಬ್ಯಾಲೆಟ್‌ ಯೂನಿಟ್ಸ್‌ ತೋರಿಸಿ

ಮೈಸೂರು ಜಿಲ್ಲೆಗೆ ಹೊಸದಾಗಿ ಇವಿಎಂ ಯಂತ್ರಗಳು ಬಂದಿದ್ದು, ನೂತನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಗ್ರಹಿಸಿಡಲಾಗಿದೆ. ಒಟ್ಟಾರೆ 5,635 ಬ್ಯಾಲೆಟ್‌ ಯೂನಿಟ್ಸ್‌ ಮತ್ತು 3,958 ಕಂಟ್ರೋಲ್‌ ಯೂನಿಟ್ಸ್‌ ಇತ್ತೀಚೆಗಷ್ಟೇ ಉತ್ಪಾದನೆ ಆಗಿದೆ. ಅವುಗಳನ್ನು ಇಲ್ಲಿಗೆ ಕಳುಹಿಸಿದ್ದು, ಇವುಗಳ ನಿರ್ವಹಣೆಯನ್ನು ಖಾಸಗಿ ಎಂಜಿನಿಯರ್‌ಗಳ ಸಂಸ್ಥೆ ನೀಡಿದ್ದಾರೆ. ಆದ್ದರಿಂದ ಎಲ್ಲಾ ಪಕ್ಷದ ಮುಖಂಡರನ್ನು ಕರೆದು ಅವರ ಸಮ್ಮುಖದಲ್ಲಿ ಅವುಗಳ ಕಾರ್ಯವಿಧಾನವನ್ನು ತೋರಿಸಬೇಕು ಎಂದು ಅವರು ಆಗ್ರಹಿಸಿದರು.

ಎಂಡಿಎ ಸಭೆ ನಡೆಸಿಲ್ಲ:

ಎಂಡಿಎ ಅಧ್ಯಕ್ಷ ಸ್ಥಾನದಿಂದ ಎಚ್‌.ವಿ. ರಾಜೀವ್‌ ತೆರವಾದ ಬಳಿಕ ಈವರೆಗೂ ಒಂದು ಸಭೆಯನ್ನು ನಡೆಸಿಲ್ಲ. ಜಿಲ್ಲಾಧಿಕಾರಿಗೆ ಅದರ ಅಧಿಕಾರ ನೀಡದೆ ಆಯುಕ್ತರನ್ನು ಇಟ್ಟುಕೊಂಡು ಸಚಿವರು, ಶಾಸಕರು ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದಾರೆ. ದಸರಾ ಮುಗಿದ ಮೇಲೆ ಸಚಿವರು ನಾಪತ್ತೆಯಾಗಿದ್ದು, ಇದರ ವಿರುದ್ಧ ಕಾಂಗ್ರೆಸ್‌ ಚಳವಳಿ ನಡೆಸಲಿದೆ ಎಂದರು.

ನಗರದ ಕೆ.ಆರ್‌. ಕ್ಷೇತ್ರ ವ್ಯಾಪ್ತಿಯ 16 ಕಡೆ ಗುಂಬಜ್‌ ಮಾದರಿಯ ಬಸ್‌ ನಿಲ್ದಾಣ ನಿರ್ಮಿಸಿ, ಈಗ ಗುಂಬಜ್‌ ತೆಗೆಯುತ್ತಿದ್ದಾರೆ. ಈ ಹಣವನ್ನು ಯಾರಿಂದ ಭರಿಸುತ್ತೀರಿ ಎಂಬುದನ್ನು ಜಿಲ್ಲಾಡಳಿತ ಸ್ಪಷ್ಟಪಡಿಸಬೇಕು. ಯಾರು ತೆಗೆಸಿದ್ದಾರೆ ಅವರಿಂದ ಭರಿಸುತ್ತೀರೋ, ಅಥವಾ ತೆಗೆದವರಿಂದ ಭರಿಸುತ್ತೀರೋ ಹೇಳಿ. ಹಾಗೆ ತೆಗೆಯುವುದಾದರೆ ಅರಮನೆ, ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಅನೇಕ ಕಡೆ ಇದೆ. ಅವುಗಳನ್ನು ತೆರವುಗೊಳಿಸುತ್ತೀರಾ ಎಂದು ಅವರು ಪ್ರಶ್ನಿಸಿದರು.

ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್‌. ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್‌, ವಕ್ತಾರ ಮಹೇಶ್‌ ಮೊದಲಾದವರು ಇದ್ದರು.

click me!