ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿಲ್ಲ : ಶಾಸಕ

By Kannadaprabha NewsFirst Published Jul 30, 2021, 9:43 AM IST
Highlights
  • ಸಚಿವ ಸ್ಥಾನಕ್ಕಾಗಿ ನಾನು ಯಾವುದೇ ಲಾಬಿ ಮಾಡಿಲ್ಲ
  • ಪಕ್ಷದವರು ಗುರುತಿಸಿ ಅವಕಾಶ ಮಾಡಿಕೊಟ್ಟರೆ ಅದನ್ನು ನಿರ್ವಹಿಸಲು ಸಿದ್ಧ

 ಮೈಸೂರು (ಜು.30):  ಸಚಿವ ಸ್ಥಾನಕ್ಕಾಗಿ ನಾನು ಯಾವುದೇ ಲಾಬಿ ಮಾಡಿಲ್ಲ, ಪಕ್ಷದವರು ಗುರುತಿಸಿ ಅವಕಾಶ ಮಾಡಿಕೊಟ್ಟರೆ ಅದನ್ನು ನಿರ್ವಹಿಸಲು ಸಿದ್ಧನಿದ್ದೇನೆ ಎಂದು ಮೈಸೂರಿನ ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ಎಲ್‌. ನಾಗೇಂದ್ರ ತಿಳಿಸಿದರು.

ಮೈಸೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಚಿವ ಸ್ಥಾನದ ಆಕಾಂಕ್ಷಿ ಅಂತ ಅಲ್ಲ. ನಮ್ಮ ಜಿಲ್ಲೆಗೆ ಯಾರಿಗಾದರೂ ಕೊಡಬೇಕು ಅಂತ ಒತ್ತಾಯ ಮಾಡುತ್ತಿದ್ದೇವೆ. ಎಸ್‌.ಎ. ರಾಮದಾಸ್‌, ಬಿ. ಹರ್ಷವರ್ಧನ್‌ ಅವರ ಜೊತೆಗೆ ನನಗೂ ಅವಕಾಶ ಮಾಡಿಕೊಡಿ ಎಂದು ಕೇಳುತ್ತಿದ್ದೇನೆ ಎಂದರು.

ಹೊಸ ಸಂಪುಟಕ್ಕೆ ವಲಸಿಗರು : ಈ ಬಗ್ಗೆ ಬಿಎಸ್‌ವೈರಿಂದಲೇ ಅಂತಿಮ ನಿರ್ಣಯ

ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಎಚ್‌.ಎಸ್‌. ಶಂಕರಲಿಂಗೇಗೌಡ ಅವರು ನಾಲ್ಕು ಬಾರಿ ಶಾಸಕರಾದರು. ಬೇರೆ ಪಕ್ಷದವರು ಶಾಸಕರಾಗಿದ್ದಾರೆ. ಆದರೆ, ಅವರಿಗೆ ಸಚಿವರಾಗುವ ಅವಕಾಶ ಸಿಕ್ಕಿಲ್ಲ. ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೆ ಒಂದು ಶಾಪ ಇದೆ. ಆ ಶಾಪ ನಮ್ಮ ಸರ್ಕಾರದಲ್ಲಿ ಆದರೂ ವಿಮೋಚನೆ ಆಗಲಿ ಎಂದು ಅವರು ಆಶಿಸಿದರು.

ನಮ್ಮ ಪಕ್ಷದಲ್ಲಿ ಒಂದು ಪದ್ಧತಿ ಇದೆ. ನಮ್ಮ ಪದ್ಧತಿಯಲ್ಲಿ ಲಾಬಿ ಯಾವುದೂ ನಡೆಯಲ್ಲ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗುತ್ತಾರೆಂದು ಎರಡು ದಿನದ ಹಿಂದೆ ಯಾರಿಗಾದರೂ ಗೊತ್ತಿತ್ತಾ? ಯಾರಿಗೂ ಗೊತ್ತಿರಲಿಲ್ಲ. ಮುಖ್ಯಮಂತ್ರಿ ಇಂತಹವರಾಗಬೇಕೆಂದು ಹೈಕಮಾಂಡ್‌ ನಿರ್ಧಾರ ಮಾಡಿತ್ತು. ವೀಕ್ಷಕರು ಬಂದು ಘೋಷಣೆ ಮಾಡಿದರು. ಈಗಲೂ ಅಷ್ಟೇ ಅವರು ಯಾರ್ಯಾರ ಪಟ್ಟಿಬಿಡುಗಡೆ ಮಾಡುತ್ತಾರೋ ಅವರು ಮಂತ್ರಿಯಾಗುತ್ತಾರೆ ಅಷ್ಟೇ ನನಗೆ ಗೊತ್ತಿರೋದು ಎಂದು ಅವರು ಹೇಳಿದರು.

click me!