
ಬೆಂಗಳೂರು(ಏ.01): ಬಿಜೆಪಿಯ ಯಡಿಯೂರು ವಾರ್ಡ್ ಬಿಬಿಎಂಪಿ ಮಾಜಿ ಸದಸ್ಯ ಎನ್.ಆರ್.ರಮೇಶ್ ಒಂದೇ ವಾರ್ಡ್ನ 250 ಕೋಟಿಗೂ ಅಧಿಕ ಮೊತ್ತದ ಟೆಂಡರ್ಗಳನ್ನು 3 ಬೇನಾಮಿ ವ್ಯಕ್ತಿಗಳಿಗೆ ನೀಡಿದ್ದಾರೆ. ಕಳದೆ ಕಳೆದ 8-10 ವರ್ಷಗಳಲ್ಲಿ 200 ಕೋಟಿ ಅಕ್ರಮ ಆಸ್ತಿ ಗಳಿಸಿದ್ದಾರೆ. ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ್ದು, ಎರಡು ತಿಂಗಳಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸುವ ಕೆಲಸ ಮಾಡುತ್ತೇವೆ ಎಂದು ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಹೇಳಿದ್ದಾರೆ.
ಶುಕ್ರವಾರ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಪಾಲಿಕೆ ಮಾಜಿ ಸದಸ್ಯ ಎನ್.ಆರ್.ರಮೇಶ್ ಅವರು ಸತೀಶ್, ಎಚ್.ಎಸ್.ನಂದಿನಿ, ಎಸ್.ಮಂಜುನಾಥ್ ಅವರ ಹೆಸರಲ್ಲಿ 250 ಕೋಟಿ ಮೊತ್ತದ ಕಾಮಗಾರಿಗಳನ್ನು ಬೇನಾಮಿಯಾಗಿ ಪಡೆದಿದ್ದಾರೆ. ಜತೆಗೆ ಒಂದು ಕಾಮಗಾರಿಗೆ 2-3 ಬಿಲ್ ಪಡೆದಿದ್ದಾರೆ. ಈ ಬಗ್ಗೆ ಲೋಕಾಯುಕ್ತದಲ್ಲಿ ದೂರು ನೀಡಿದ್ದು, 2 ತಿಂಗಳ ಬಳಿಕ ವಿವಿಧ ಅಕ್ರಮಗಳಲ್ಲಿ ಭಾಗಿಯಾಗಿರುವ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಮತದಾರರಿಗೆ ಭರವಸೆ ನೀಡುತ್ತಿದ್ದೇನೆ ಎಂದು ಹೇಳಿದರು.
ಕ್ಷೇತ್ರ ಹುಡುಕಾಟ ಸಿದ್ದುಗೆ ಅನಿವಾರ್ಯವೇ?: ಮಾಜಿ ಎಂಎಲ್ಸಿ ರಮೇಶ್ ಬಾಬು
ಸುಳ್ಳು ದೂರುದಾರ:
ಎನ್.ಆರ್.ರಮೇಶ್ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿ ತಮ್ಮ ವಾರ್ಡ್ನಲ್ಲಿ 10 ಸಾವಿರ ನಕಲಿ ಮತದಾರರು ಇದ್ದಾರೆ ಎಂದು ಹೇಳಿದ್ದರು. ಇದರ ಆಧಾರದ ಮೇಲೆ ಆಯೋಗ ತನಿಖೆ ಮಾಡಿ ಆರೋಪ ಸುಳ್ಳು ಎಂದು ಸ್ಪಷ್ಟಪಡಿಸಿದೆ. ಇನ್ನು ಕಾಂಗ್ರೆಸ್ ನಾಯಕರ ಮೇಲೆ ಇವರು ಸಾಲು-ಸಾಲು ಆರೋಪ ಮಾಡಿ ಲೋಕಾಯುಕ್ತರಿಗೆ ದೂರುಗಳನ್ನು ನೀಡಿದ್ದಾರೆ. ಒಂದು ದೂರಿನ ಆಧಾರದ ಮೇಲೆಯೂ ಕಾಂಗ್ರೆಸ್ ನಾಯಕರಿಗೆ ಲೋಕಾಯುಕ್ತ ನೋಟಿಸ್ ನೀಡಿಲ್ಲ. ತನ್ಮೂಲಕ ಅವರೊಬ್ಬ ಸುಳ್ಳು ದೂರುದಾರ ಎಂಬುದು ಸಾಬೀತಾಗಿದೆ ಎಂದರು.
ಟೋಲ್ ದರ ಏರಿಕೆಗೆ ಖಂಡನೆ
ಪೂರ್ಣವಾಗದ ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ವೇಗೆ ದುಬಾರಿ ಟೋಲ್ ಸಂಗ್ರಹ ಮಾಡುತ್ತಿದ್ದರು. ಇನ್ನೂ 21 ಕಿ.ಮೀ.ನಷ್ಟುಮಾರ್ಗ ಅಭಿವೃದ್ದಿಯಾಗಿಲ್ಲ. ಹೀಗಿದ್ದರೂ ಇದೀಗ ಶನಿವಾರದಿಂದ 135 ರು. ಇದ್ದ ಟೋಲ… 165 ರು. ಮಾಡುತ್ತಿದ್ದಾರೆ. ಮಿನಿ ಬಸ್ಗಳಿಗೆ 210ರಿಂದ 270, ಟ್ರಕ್ ಮತ್ತು ಬಸ್ಸುಗಳಿಗೆ 440 ರು.ಗಳಿಂದ ರಿಂದ 565 ರು. ಆಗಲಿದೆ ಎಂದು ರಮೇಶ್ ಬಾಬು ಕಿಡಿ ಕಾರಿದ್ದಾರೆ.
ಟೋಲ್ ಒಪ್ಪಂದದ ಪ್ರಕಾರ ಪ್ರತಿ ವರ್ಷ ಶೇ.48 ರಷ್ಟು ಟೋಲ್ ಹೆಚ್ಚಳಕ್ಕೆ ಒಪ್ಪಿಗೆ ನೀಡಲಾಗಿದೆ. ತನ್ಮೂಲಕ ಸಾರ್ವಜನಿಕರ ಲೂಟಿಗೆ ಅನುಮತಿ ನೀಡಿದ್ದು, ಜನರ ಬದುಕಿಗೆ ಬರೆ ಎಳೆಯಲು ಸರ್ಕಾರ ಎಲ್ಲಾ ಅವಕಾಶಗಳನ್ನೂ ಬಳಸಿಕೊಳ್ಳುತ್ತಿದೆ ಎಂದು ದೂರಿದರು.