ಸಚಿವ ಸ್ಥಾನಕ್ಕೆ ಲಾಬಿ ಮಾಡಲ್ಲ ಎಂದ್ರು ಶಾಸಕ ರಾಮದಾಸ್‌

By Kannadaprabha NewsFirst Published Dec 8, 2019, 8:51 AM IST
Highlights

ಸಚಿವ ಸ್ಥಾನಕ್ಕಾಗಿ ಹಿಂದೆಯೂ ಲಾಬಿ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ಪಕ್ಷದಲ್ಲಿ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ. ಉಪಚುನಾವಣೆಯಲ್ಲಿ ಬಿಜೆಪಿ ಕನಿಷ್ಠ ಹತ್ತು ಸ್ಥಾನ ಗೆಲ್ಲುವುದರಲ್ಲಿ ಸಂಶಯವಿಲ್ಲ ಎಂದು ಎಸ್‌.ಎ. ರಾಮದಾಸ್‌ ತಿಳಿಸಿದ್ದಾರೆ.

ಮೈಸೂರು(ಡಿ.08): ಪಕ್ಷದ ಆದೇಶ ಹಾಗೂ ಹೈಕಮಾಂಡ್‌ ತೀರ್ಮಾನದಂತೆ ನಡೆದುಕೊಳ್ಳುತ್ತೇನೆಯೇ ಹೊರತು, ಸಚಿವ ಸ್ಥಾನಕ್ಕೆ ಲಾಬಿ ಮಾಡುವುದಿಲ್ಲ ಎಂದು ಮೈಸೂರು ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್‌.ಎ. ರಾಮದಾಸ್‌ ತಿಳಿಸಿದ್ದಾರೆ.

ಸಚಿವ ಸ್ಥಾನಕ್ಕಾಗಿ ಹಿಂದೆಯೂ ಲಾಬಿ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ಪಕ್ಷದಲ್ಲಿ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ. ಉಪಚುನಾವಣೆಯಲ್ಲಿ ಬಿಜೆಪಿ ಕನಿಷ್ಠ ಹತ್ತು ಸ್ಥಾನ ಗೆಲ್ಲುವುದರಲ್ಲಿ ಸಂಶಯವಿಲ್ಲ. ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರ ಸರ್ಕಾರ ಮುಂದುವರಿಯುತ್ತದೆ. ಮತದಾರರು ಬಿಜೆಪಿ ಪರವಾಗಿದ್ದಾರೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಅಕ್ರಮವಾಗಿ ಸಾಗಿಸುತ್ತಿದ್ದ 50ಕ್ಕೂ ಹೆಚ್ಚು ಕರುಗಳ ರಕ್ಷಣೆ

ಹುಣಸೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಚ್‌. ವಿಶ್ವನಾಥ್‌ ಗೆಲ್ಲುವ ವಿಶ್ವಾಸವಿದೆ. ನಾನು 1994ರಲ್ಲಿ ಮೈಸೂರು ನಗರ ಬಿಜೆಪಿ ಅಧ್ಯಕ್ಷನಾಗಿದ್ದಾಗ ಗ್ರಾಮಾಂತರದಲ್ಲೂ ಸಂಘಟನೆ ಮಾಡಿದ್ದೆವು. ಆಗ ಹುಣಸೂರು ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿತು. ವಿ. ಪಾಪಣ್ಣ ಅವರು ಗೆದ್ದ ಮೇಲೆ ಹೊರ ಹೋದರು. ನಂತರ ಜಿ.ಟಿ. ದೇವೇಗೌಡರು ಪಕ್ಷಕ್ಕೆ ಬಂದು ಮತ್ತೆ ಹೋದರು. ಹೋಗುವಾಗ ಒಂದಷ್ಟುಜನರನ್ನು ಕರೆದೊಯ್ದ ಕಾರಣ ಸಂಘಟನೆ ಮೇಲೆ ಹೊಡೆತ ಬಿದ್ದಿದೆ. ಆದರೆ, ಈ ಉಪಚುನಾವಣೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಶ್ರಮಿಸಿರುವ ಕಾರಣ ಗೆಲ್ಲುವುದು ಖಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮತ ಎಣಿಕೆ ಹಿನ್ನೆಲೆ ಸಂಚಾರಿ ವಾಹನಗಳ ಮಾರ್ಗ ಬದಲಾವಣೆ

ಬಿಹಾರದಲ್ಲಿ ತುಂಬಾ ಜಾತಿರಾಜಕಾರಣ ನಡೆಯುತ್ತಿತ್ತು. ಈಗ ಕರ್ನಾಟಕದಲ್ಲೂ ಅದೇ ಆಗಿದೆ. ಬದಲಾದ ಕಾಲಕ್ಕೆ ತಕ್ಕಂತೆ ಅದು ಬಳಕೆಯಾಗುತ್ತಿದೆ. ರಾಜ್ಯದಲ್ಲಿ ಜಾತಿ ರಾಜಕಾರಣ ಹೆಚ್ಚಾಗಿರುವುದು ನೋವಿನ ಸಂಗತಿ. ನಾನು ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಶೋಭಾ ಕರಂದ್ಲಾಜೆ ಅವರನ್ನು ಮಂತ್ರಿ ಮಾಡಿದಾಗಲೂ ವಿರೋಧಿಸಲಿಲ್ಲ. ಈಗಲೂ ವಿ. ಸೋಮಣ್ಣ ಅವರಿಗೆ ಉಸ್ತುವಾರಿ ಸಚಿವರನ್ನಾಗಿ ನಿಯೋಜಿಸಿದಾಗಲೂ ವಿರೋಧಿಸಿಲ್ಲ, ನಾನು ಪಕ್ಷದ ಆದೇಶಕ್ಕೆ ತಲೆ ಬಾಗುತ್ತೇನೆ. ಸಚಿವಗಿರಿಗೆ ಎಂದಿಗೂ ಲಾಬಿ ಮಾಡಿದವನಲ್ಲ. ಮುಂದೆಯೂ ಮಾಡುವುದಿಲ್ಲ. ನಾನು ಕಷ್ಟಕಾಲದಲ್ಲಿ ಇದ್ದಾಗ ಕ್ಷೇತ್ರದ ಜನರು ನನ್ನ ಕೈಹಿಡಿದು ಗೆಲ್ಲಿಸಿದ್ದಾರೆ. ಅವರ ಸೇವೆ ಮಾಡಿಕೊಂಡು ಮುಂದುವರಿದರೆ ಸಾಕು ಎಂದಿದ್ದಾರೆ.

ರುಚಿಯೂ ಇಲ್ಲ, ರೇಟೂ ಜಾಸ್ತಿ: ಈಜಿಪ್ಟ್‌ ಈರುಳ್ಳಿ ಕೇಳೋರಿಲ್ಲ!

click me!