ನಾನೂ ಕೂಡ ಟ್ರಯಲ್ ಬ್ಲಾಸ್ಟ್ ವಿರೋಧಿ, ಕೆಆರ್‌ಎಸ್‌ ಡ್ಯಾಂ ಕಾಪಾಡೋದೆ ನನಗೆ ಮುಖ್ಯ: ದರ್ಶನ್‌ ಪುಟ್ಟಣ್ಣಯ್ಯ

By Kannadaprabha NewsFirst Published Feb 26, 2024, 2:00 AM IST
Highlights

ಟ್ರಯಲ್ ಬ್ಲಾಸ್ಟ್ ಮುಖಾಂತರ ಕೆಆರ್‌ಎಸ್ ವ್ಯಾಪ್ತಿಯಲ್ಲಿ ಭಾರೀ ಸ್ಫೋಟ ನಡೆಸಿ ಗಣಿಗಾರಿಕೆ ನಡೆಸುವ ಹುನ್ನಾರವೇನಾದರೂ ಇದ್ದರೆ ನಾನೇ ಮುಂದೆ ಬಂದು ನಿಂತುಕೊಳ್ಳುತ್ತೇನೆ. ನಾನು ಯಾರಿಗೂ ಹೆದರುವವನಲ್ಲ. ನನ್ನ ಮೇಲೆ ಯಾರ ಒತ್ತಡವೂ ಇಲ್ಲ. ಒತ್ತಡಕ್ಕೆ ಒಳಗಾಗುವವನೂ ನಾನಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ನೇರವಾಗಿ ಹೇಳಿದ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್‌ ಪುಟ್ಟಣ್ಣಯ್ಯ 

ಮಂಡ್ಯ(ಫೆ.26):  ನಾನೂ ಕೂಡ ಟ್ರಯಲ್ ಬ್ಲಾಸ್ಟ್ ವಿರೋಧಿ. ನನಗೆ ಕೃಷ್ಣರಾಜಸಾಗರ ಅಣೆಕಟ್ಟು ಕಾಪಾಡುವುದೇ ಮುಖ್ಯ. ಕಾವೇರಿಪುರದ ಜನರಿಗೆ ಕೈಕುಳಿಯಲ್ಲಿ ಕೆಲಸ ಮಾಡುವುದಕ್ಕೆ ಅವಕಾಶ ಮಾಡಿಕೊಡುವುದಕ್ಕಷ್ಟೇ ನನ್ನ ಆದ್ಯತೆ ಎಂದು ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಹೇಳಿದರು.

ಟ್ರಯಲ್ ಬ್ಲಾಸ್ಟ್ ಮುಖಾಂತರ ಕೆಆರ್‌ಎಸ್ ವ್ಯಾಪ್ತಿಯಲ್ಲಿ ಭಾರೀ ಸ್ಫೋಟ ನಡೆಸಿ ಗಣಿಗಾರಿಕೆ ನಡೆಸುವ ಹುನ್ನಾರವೇನಾದರೂ ಇದ್ದರೆ ನಾನೇ ಮುಂದೆ ಬಂದು ನಿಂತುಕೊಳ್ಳುತ್ತೇನೆ. ನಾನು ಯಾರಿಗೂ ಹೆದರುವವನಲ್ಲ. ನನ್ನ ಮೇಲೆ ಯಾರ ಒತ್ತಡವೂ ಇಲ್ಲ. ಒತ್ತಡಕ್ಕೆ ಒಳಗಾಗುವವನೂ ನಾನಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ನೇರವಾಗಿ ಹೇಳಿದರು.

ಕೆಆರ್‌ಎಸ್‌ ಡ್ಯಾಂ ಬಳಿಯ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ಟ್ರಯಲ್‌ ಬ್ಲಾಸ್ಟ್‌ಗೆ ಹೈಕೋರ್ಟ್‌ ಅನುಮತಿ; ರೈತರಲ್ಲಿ ಆತಂಕ

ಕೃಷ್ಣರಾಜಸಾಗರ ಅಣೆಕಟ್ಟು ನಿರ್ಮಾಣಕ್ಕೆ ಬಂದಂತಹ ಕಾವೇರಿಪುರ ಸೇರಿದಂತೆ ಎಂಟು ಪಂಚಾಯಿತಿ ಜನರ ಬದುಕು ಗಣಿಗಾರಿಕೆ ಸ್ಥಗಿತದಿಂದ ಅತಂತ್ರವಾಗಿದೆ. ಆ ಜನರ ಬದುಕು ಕೂಡ ಬದಲಾಗಬೇಕು. ಅವರು ಶಾಶ್ವತವಾಗಿ ಗಣಿಗಾರಿಕೆಯನ್ನೇ ಮಾಡಿಕೊಂಡಿರಬಾರದು. ಅದಕ್ಕೆ ಪೂರಕವಾಗಿ ಅವಕಾಶಗಳನ್ನು ತೆರೆದಿಟ್ಟು ಮನವರಿಕೆ ಮಾಡುತ್ತಿದ್ದೇವೆ ಎಂದರು.

ಈ ಜನರನ್ನು ಮುಂದಿಟ್ಟುಕೊಂಡು ಗಣಿ ಮಾಲೀಕರು ದೊಡ್ಡ ಪ್ರಮಾಣದ ಗಣಿಗಾರಿಕೆಗೆ ಕುತಂತ್ರ ನಡೆಸಿದ್ದರೆ ಅಥವಾ ಎಂಟು ಪಂಚಾಯಿತಿಯ ಜನರು ಸ್ಫೋಟ ಮಾಡಿಯೇ ಗಣಿಗಾರಿಕೆ ನಡೆಸುತ್ತೇವೆಂದರೆ ಅದಕ್ಕೆ ನಾವು ಅವಕಾಶವನ್ನು ನೀಡುವುದಿಲ್ಲ. ಅವರ ಪರವಾಗಿಯೂ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನನ್ನನ್ನು ಭೇಟಿಯಾಗಿರುವುದು ಸತ್ಯ: 

ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿರುವವರು ಮತ ಕೇಳುವುದಕ್ಕೆ ನನ್ನನ್ನು ಭೇಟಿಯಾಗಿರುವುದು ಸತ್ಯ. ಆದರೆ, ನನಗೆ ಬೆದರಿಕೆಯನ್ನಾಗಲೀ, ಹಣದ ಆಮಿಷವನ್ನಾಗಲಿ ಒಡ್ಡಿಲ್ಲ. ಚುನಾವಣೆಗೆ ಸ್ಪರ್ಧಿಸಿರುವವರು ಓಟು ಕೇಳುವುದು ಸಹಜ. ಅದನ್ನು ತಪ್ಪು ಎನ್ನಲಾಗುವುದಿಲ್ಲ ಎಂದು ದರ್ಶನ್ ಹೇಳಿದರು.

ನಾನೂ ಸೇರಿದಂತೆ ಇತರೆ ಕಾಂಗ್ರೆಸ್ ಶಾಸಕರನ್ನೂ ಅಭ್ಯರ್ಥಿಗಳು ಭೇಟಿಯಾಗಿದ್ದಾರೆ. ಅವರೊಂದಿಗೆ ಏನೇನು ಚರ್ಚೆ ಮಾಡಿದ್ದಾರೆ ಎಂಬ ವಿಚಾರ ನನಗೆ ಗೊತ್ತಿಲ್ಲ. ಅದನ್ನು ಆಧರಿಸಿ ಶಾಸಕ ಪಿ.ರವಿಕುಮಾರ್ ದೂರು ಕೊಟ್ಟಿರಬಹುದು ಎಂದು ಸಮರ್ಥಿಸಿಕೊಂಡರು.

ನನ್ನ ತಂದೆಯ ಕಾಲದಿಂದಲೂ ಕಾಂಗ್ರೆಸ್ ರೈತಸಂಘವನ್ನು ಬೆಂಬಲಿಸುತ್ತಾ ಬಂದಿದೆ. ೨೦೧೮ ಮತ್ತು ೨೦೨೩ರ ಚುನಾವಣೆಯಲ್ಲೂ ಕಾಂಗ್ರೆಸ್ ನನ್ನ ಬೆನ್ನಿಗೆ ನಿಂತಿದೆ. ಆ ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ. ರಾಜ್ಯಸಭೆ ಚುನಾವಣೆಯಲ್ಲಿ ನನ್ನ ಮತ ಕಾಂಗ್ರೆಸ್‌ಗೆ ನಿಶ್ಚಿತ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹಲ್ಲೆ ಪ್ರಯತ್ನ ನಡೆದಿತ್ತು, ಪ್ರಾಣ ಭಯವಿದ್ರೂ ಅಕ್ರಮ ಗಣಿ ವಿರುದ್ಧ ಹೋರಾಟ ನಿಲ್ಲದು: ಸುಮಲತಾ

ಪಕ್ಷದವರೊಂದಿಗೆ ಚರ್ಚಿಸುವೆ: 

ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಸಂಸದೆ ಸುಮಲತಾ ಅವರ ಬೆಂಬಲಕ್ಕೆ ರೈತಸಂಘ ನಿಂತಿತ್ತು. ಈ ಬಾರಿ ಯಾರನ್ನು ಬೆಂಬಲಿಸಬೇಕೆಂಬ ವಿಚಾರವಾಗಿ ಸರ್ವೋದಯ ಕರ್ನಾಟಕ ಪಕ್ಷ ಹಾಗೂ ರೈತ ಪ್ರತಿನಿಧಿಗಳೊಂದಿಗೆ ಚರ್ಚಿಸಿ ನಿರ್ಧಾರ ಮಾಡಲಾಗುವುದು ಎಂದು ಹೇಳಿದರು.

ಇದು ನನ್ನೊಬ್ಬನ ನಿರ್ಧಾರವಲ್ಲ. ಪಕ್ಷದ ನಾಯಕರು ಮತ್ತು ರೈತಸಂಘದ ಮುಖಂಡರೆಲ್ಲರ ಜೊತೆ ಮಾತುಕತೆ ನಡೆಸಿ ಒಮ್ಮತದ ನಿರ್ಧಾರಕ್ಕೆ ಬರಬೇಕಿದೆ. ಅವರೆಲ್ಲರ ನಿರ್ಧಾರದಂತೆ ನಾನೂ ನಡೆಯುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಚಂದ್ರಣ್ಣ, ದಯಾನಂದ, ವಿಜಯಕುಮಾರ್, ನಾಗರಾಜು ಮತ್ತಿತರರಿದ್ದರು.

click me!