
ಬಾಗಲಕೋಟೆ (ಮಾ.22): ಬಾಗಲಕೋಟೆ ಉಪಚುನಾವಣೆಯ ರಾಜಕೀಯ ಕಾವು ಏರುತ್ತಿದ್ದಂತೆ, ಜಿಲ್ಲೆಯ ಪ್ರಭಾವಿ ರಾಜಕೀಯ ಕುಟುಂಬವಾದ ಹೆಚ್.ವೈ. ಮೇಟಿ ಕುಟುಂಬದಲ್ಲಿನ ಆಂತರಿಕ ಅಸಮಾಧಾನ ಸ್ಫೋಟಗೊಂಡಿದೆ. ತಂದೆಯ ಹೆಸರಿನಲ್ಲಿ ಕಣ್ಣೀರಿಟ್ಟ ಹಿರಿಯ ಮಗಳು ಬಾಯಕ್ಕ ಮೇಟಿ ಅವರಿಗೆ, ಕಿರಿಯ ಮಗಳು ಮಹಾದೇವಿ ಮೇಟಿ ಫೇಸ್ಬುಕ್ ಪೋಸ್ಟ್ ಮೂಲಕ ಅತ್ಯಂತ ಕಠೋರವಾಗಿ ತಿರುಗೇಟು ನೀಡಿದ್ದಾರೆ. ಈ ಬೆಳವಣಿಗೆಯು ಬಾಗಲಕೋಟೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಕಳೆದ ದಿನವಷ್ಟೇ ಮಾಧ್ಯಮಗಳ ಮುಂದೆ ಬಂದಿದ್ದ ಹೆಚ್.ವೈ. ಮೇಟಿ ಅವರ ಹಿರಿಯ ಪುತ್ರಿ ಬಾಯಕ್ಕ ಮೇಟಿ, ತಮ್ಮ ತಂದೆಯನ್ನು ನೆನೆದು ಭಾವುಕರಾಗಿ ಕಣ್ಣೀರು ಹಾಕಿದ್ದರು. ಉಪಚುನಾವಣೆಯ ಈ ಸಂದರ್ಭದಲ್ಲಿ ತಂದೆಯ ಮಾರ್ಗದರ್ಶನ ಮತ್ತು ಅವರ ಪ್ರೀತಿಯನ್ನು ನೆನೆದು ಅವರು ಬಿಕ್ಕಳಿಸಿದ್ದರು. ಆದರೆ, ಈ ಕಣ್ಣೀರನ್ನು ಅಪ್ಪಟ 'ನಾಟಕ' ಎಂದು ಕರೆದಿರುವ ಅವರ ತಂಗಿ ಮಹಾದೇವಿ ಮೇಟಿ, ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಾಕುವ ಮೂಲಕ ಅಕ್ಕನ ವಿರುದ್ಧವೇ ಸಮರ ಸಾರಿದ್ದಾರೆ.
'ಸುಳ್ಳಿಗೆ ತಲೆಬಾಗದ ಹೆಣ್ಣೇ ನಿಜವಾದ ಶಕ್ತಿ' ಎಂಬ ಶೀರ್ಷಿಕೆಯಡಿ ಮಹಾದೇವಿ ಮೇಟಿ ಅವರು ಅಕ್ಕನ ನಡೆಯನ್ನು ಖಂಡಿಸಿದ್ದಾರೆ. 'ಅಪ್ಪನ ಪ್ರೀತಿಯನ್ನು ತೂಕ ಹಾಕಲಾಗುವುದಿಲ್ಲ, ಅದನ್ನು ಹಂಚಿಕೊಳ್ಳಬೇಕು. ಮನೆತನಕ್ಕೆ ಗೆಲುವು ತಂದುಕೊಡುವುದು ಪ್ರತಿಯೊಬ್ಬ ಹೆಣ್ಣಿನ ಜವಾಬ್ದಾರಿ. ಆದರೆ, ತನ್ನ ಆತ್ಮಗೌರವ ಮತ್ತು ಸತ್ಯವನ್ನು ಮಾರಿ, ಮೂರನೇ ವ್ಯಕ್ತಿಗೆ ಸಲಾಮು ಹೊಡೆದು ಮೊಸಳೆ ಕಣ್ಣೀರು ಸುರಿಸುವುದು ಹೆಣ್ಣಿನ ಜೀವನಕ್ಕೆ ಶೋಭೆಯಲ್ಲ' ಎಂದು ಪರೋಕ್ಷವಾಗಿ ಅಕ್ಕನಿಗೆ ಟಾಂಗ್ ನೀಡಿದ್ದಾರೆ.
ಮುಂದುವರಿದು, ‘ನಿಷ್ಠೆ ಮತ್ತು ಸತ್ಯವೇ ಹೆಣ್ಣಿನ ನಿಜವಾದ ಆಭರಣಗಳು. ಇವುಗಳನ್ನು ಬಿಟ್ಟು ವಂಚನೆ ಮತ್ತು ನಾಟಕಕ್ಕೆ ತಲೆಬಾಗುವುದು ಹೆಣ್ಣಿನ ಗೌರವವನ್ನೇ ಕುಗ್ಗಿಸುತ್ತದೆ. ನಿಜವಾದ ಹೆಣ್ಣು ಸತ್ಯದ ಮೂಲಕ ಗೆಲುವು ಸಾಧಿಸುತ್ತಾಳೆಯೇ ಹೊರತು, ಬೇರೆಯವರ ಮುಂದೆ ತಲೆಬಾಗುವುದರಿಂದಲ್ಲ’ ಎಂದು ಬರೆಯುವ ಮೂಲಕ ಕುಟುಂಬದ ಮರ್ಯಾದೆಯನ್ನು ಮೂರನೇ ವ್ಯಕ್ತಿಗಳ ಮುಂದೆ ಹರಾಜು ಹಾಕಬೇಡಿ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
ಬಾಗಲಕೋಟೆ ಉಪಚುನಾವಣೆಯ ಟಿಕೆಟ್ ಹಂಚಿಕೆ ಅಥವಾ ರಾಜಕೀಯ ಪ್ರಾಬಲ್ಯದ ವಿಚಾರದಲ್ಲಿ ಮೇಟಿ ಕುಟುಂಬದೊಳಗೆ ಭಿನ್ನಮತವಿದ್ದದ್ದು ಈ ಹಿಂದೆಯೇ ಚರ್ಚೆಯಾಗುತ್ತಿತ್ತು. ಈಗ ಅಕ್ಕ-ತಂಗಿಯರ ಈ ಬಹಿರಂಗ ಕಿತ್ತಾಟವು ಚುನಾವಣಾ ಕಣದಲ್ಲಿ ವಿರೋಧ ಪಕ್ಷಗಳಿಗೆ ಹೊಸ ಅಸ್ತ್ರವಾಗಿ ಸಿಕ್ಕಂತಾಗಿದೆ. ತಂದೆಯ ಪರಂಪರೆಯನ್ನು ಮುಂದುವರಿಸುವ ವಿಚಾರದಲ್ಲಿ ಇಬ್ಬರ ನಡುವೆ ಒಮ್ಮತವಿಲ್ಲ ಎಂಬುದು ಈ ಪೋಸ್ಟ್ನಿಂದ ಸ್ಪಷ್ಟವಾಗುತ್ತಿದೆ.
ಬಾಯಕ್ಕ ಮೇಟಿ ಅವರು ಯಾರನ್ನು ಬೆಂಬಲಿಸುತ್ತಿದ್ದಾರೆ ಮತ್ತು ಮಹಾದೇವಿ ಮೇಟಿ ಅವರು 'ಮೂರನೇ ವ್ಯಕ್ತಿ' ಎಂದು ಯಾರನ್ನು ಉದ್ದೇಶಿಸಿ ಮಾತನಾಡಿದ್ದಾರೆ ಎಂಬುದು ಈಗ ಬಾಗಲಕೋಟೆಯ ಪ್ರತಿ ಗಲ್ಲಿಯಲ್ಲೂ ಚರ್ಚೆಯಾಗುತ್ತಿರುವ ವಿಷಯ. ಒಟ್ಟಿನಲ್ಲಿ, ಹೆಚ್.ವೈ. ಮೇಟಿ ಅವರ ರಾಜಕೀಯ ಉತ್ತರಾಧಿಕಾರತ್ವದ ಜಟಾಪಟಿ ಈಗ ಕಣ್ಣೀರು ಮತ್ತು ಫೇಸ್ಬುಕ್ ಪೋಸ್ಟ್ಗಳ ಮೂಲಕ ಬೀದಿಗೆ ಬಂದಿರುವುದು ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.