
ಗಂಗಾವತಿ (ಮೇ.18): ಸನಾತನ ಹಿಂದೂ ಧರ್ಮಕ್ಕೆ ತಮಿಳುನಾಡಿನ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವಮಾನ ಮಾಡಿರುವದಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಶ್ರೀನಾಥ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಈ ಹಿಂದೆ 2023ರಲ್ಲಿ ಸನಾತನ ಧರ್ಮವನ್ನು ನಿರ್ಮೂಲನೆ ಮಾಡ ಬೇಕೆಂದು ಹೇಳಿಕೆ ನೀಡಿದ್ದರು.
ಈಗ ಮತ್ತೇ ಹಿಂದು ಧರ್ಮವನ್ನು ನಿರ್ಮೂಲನೆ ಮಾಡಬೇಕೆಂದು ಹೇಳಿಕೆ ನೀಡಿರುವುದನ್ನು ಗಮನಿಸಿದರೆ ಇವರಿಗೆ ಧರ್ಮದ ಪ್ರಜ್ಞೆ ಇಲ್ಲಾ, ಕೇವಲ ಒಂದೇ ಜಾತಿಗೆ ಸೀಮಿತರಾಗಿದ್ದಂತೆ ಕಾಣುತ್ತದೆ ಎಂದರು. ಕಾಂಗ್ರೆಸ್ ಪಕ್ಷ ಜಾತ್ಯಾತೀತವಾಗಿರುವ ಪಕ್ಷವಾಗಿದೆ. ಕಾಂಗ್ರೆಸ್ ನಲ್ಲಿ ಶೇ.70 ರಷ್ಟು ಹಿಂದು ಧರ್ಮದವರಿದ್ದಾರೆ. ಚುನಾವಣೆ ಸಂದ್ರಭದಲ್ಲಿ ಹಿಂದೂಗಳು ಬೇಕು. ನಂತರ ಧರ್ಮವನ್ನು ದ್ವೇಷ ಮಾಡುವಂತ ಇತಹ ವ್ಯಕ್ತಿಗಳನ್ನು ಕಾಂಗ್ರೆಸ್ ನಾಯಕರುಗಳು ದೂರ ಇಡಬೇಕೆಂದರು.
ಸನಾತನ ಹಿಂದು ಧರ್ಮ ಕಾಲಕಾಲದಿಂದ ಬಂದಿದೆ. ಎಲ್ಲಾ ಪಕ್ಷಗಳಲ್ಲಿ ಹಿಂದೂ ಧರ್ಮಿಯರು ಇದ್ದಾರೆ. ಕೇವಲ ಬಿಜೆಪಿ ಪಕ್ಷ ಅಥಾವ ಜೆಡಿಎಸ್ ಪಕ್ಷ ಸೇರಿದಂತೆ ಇತರ ಪಕ್ಷಗಳಿಗೆ ಹಿಂದೂಗಳು ಮೀಸಲಾಗಿಲ್ಲ. ಎಲ್ಲಾ ಪಕ್ಷಗಳಿಗಿಂತಲೂ ಕಾಂಗ್ರೆಸ್ ಪಕ್ಷದಲ್ಲಿ ಅಧಿಕವಾಗಿ ಹಿಂದೂಗಳು ಇದ್ದಾರೆ ಎಂದರು. ಅನ್ಯ ಧರ್ಮೀಯರನ್ನು ಪ್ರೀತಿಸಲಿ ಅದಕ್ಕೆ ನಾವು ಯಾವುದೇ ತಕರಾರು ಮಾಡುವುದಿಲ್ಲ. ಆದರೆ ಸನಾತನ ಹಿಂದೂ ಧರ್ಮವನ್ನು ನಿರ್ಮೂಲನೆ ಮಾಡಬೇಕೆಂದು ಹೇಳಿಕೆ ನೀಡಿರುವ ಉದಯನಿಧಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದರು.
ಈ ಹಿಂದೆ ಹಿಂದೂ ಧರ್ಮದ ಬಗ್ಗೆ ಅವಮಾನ ಮಾಡಿದಾಗ ಉಚ್ಚ ನ್ಯಾಯಲಯ ದ್ವೇಷ ಭಾಷಣ ಎಂದು ಹೇಳಿತ್ತು. ಈಗ ಮತ್ತೆ ವಿವಾದ ಎಬ್ಬಿಸಿ ಹಿಂದೂಗಳನ್ನು ಕೆರಳಿಸುವುದಕ್ಕೆ ಮುಂದಾಗಿದ್ದಾರೆ ಎಂದು ಎಚ್ಚರಿಸಿದರು. ಕೂಡಲೆ ಕಾಂಗ್ರೆಸ್ ಪಕ್ಷ ಇಂತಹ ದ್ವೇಷ ಹುಟ್ಟಿಸುವ ಉದಯ ನಿಧಿ ಅವರ ಪಕ್ಷದ ಜೊತೆಗೆ ಹೊಂದಾಣಿಕೆಯಾಗಬಾರದು, ಸನಾತನ ಹಿಂದೂ ಧರ್ಮದ ಉಳಿವಿಗೆ ಎಲ್ಲರು ಹೋರಾಟ ನಡೆಸಬೇಕಾಗಿದೆ ಎಂದು ಎಚ್.ಆರ್.ಶ್ರೀನಾಥ ಹೇಳಿದರು. ಈ ವೇಳೆ ಮುಖಂಡರಾದ ಗೌಳಿ ರಮೇಶ, ಮೂಸ್ಟೂರು ರಾಜಶೇಖರಪ್ಪ, ಸುರೇಶ ಗೌರಪ್ಪ ಇದ್ದರು.