ಹೊರನಾಡು ಅನ್ನಪೂರ್ಣೇಶ್ವರಿ; ಗರ್ಭಗುಡಿ ಬಿಟ್ಟು ಭಕ್ತರಿರುವಲ್ಲಿಗೆ ಬಂದು ದರ್ಶನ ನೀಡಿದ ಜಗನ್ಮಾತೆ!

Published : Feb 20, 2026, 12:37 PM IST
Chikkamagaluru Horanadu annapoorneshwari

ಸಾರಾಂಶ

ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಅನ್ನಪೂರ್ಣೇಶ್ವರಿ ಮೊದಲ ಬಾರಿಗೆ ಪವಾಡವೊಂದನ್ನು ತೋರಿದ್ದಾಳೆ. ಗರ್ಭಗುಡಿಯಲ್ಲಿ ಕೂತು ದರ್ಶನ ನೀಡುತ್ತಿದ್ದ ದೇವಿ, ರಥೋತ್ಸವದ ಅಂಗವಾಗಿ ಭಕ್ತರೇ ಇರುವ ಜಾಗಕ್ಕೆ ಹೊರಗೆ ಬಂದು ದರ್ಶನ ನೀಡಿದ್ದಾಳೆ.

ಚಿಕ್ಕಮಗಳೂರು (ಫೆ.20): ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಸನ್ನಿಧಾನದಲ್ಲಿ ಜಗನ್ಮಾತೆಯ ರಥೋತ್ಸವ ಸಂಭ್ರಮವು ಅತ್ಯಂತ ವಿಜೃಂಭಣೆಯಿಂದ ಜರುಗುತ್ತಿದೆ. ವರ್ಷವಿಡೀ ಗರ್ಭಗುಡಿಯಲ್ಲಿ ನೆಲೆನಿಂತು ಭಕ್ತರ ಹಸಿವು ನೀಗಿಸುವ ಅನ್ನಪೂರ್ಣೇಶ್ವರಿ ತಾಯಿಯು, ರಥೋತ್ಸವದ ಅಂಗವಾಗಿ ಹೊರಬಂದು ಭಕ್ತ ಸಮೂಹಕ್ಕೆ ದರ್ಶನ ನೀಡಿ ಆಶೀರ್ವದಿಸುತ್ತಿರುವುದು ವಿಶೇಷವಾಗಿದೆ.

ಕ್ಷೇತ್ರದಲ್ಲಿ ರಥೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ ನಡೆಯುತ್ತಿವೆ. ಗಣಪತಿ ಹೋಮ ಮತ್ತು ರಂಗಪೂಜೆಯೊಂದಿಗೆ ರಥೋತ್ಸವಕ್ಕೆ ಅಧಿಕೃತ ಚಾಲನೆ ದೊರೆಯಿತು. ಶುಭ ಮುಹೂರ್ತದಲ್ಲಿ ಧ್ವಜಾರೋಹಣ ನೆರವೇರಿಸಿ, ತಾಯಿಯ ಉತ್ಸವ ಮೂರ್ತಿಯನ್ನು ಪುಷ್ಪಕ ರಥಾರೋಹಣ ಸೇವೆಗೆ ಸಿದ್ಧಪಡಿಸಲಾಯಿತು. ಶುಭ ಲಗ್ನದಲ್ಲಿ ತಾಯಿಯ ಬ್ರಹ್ಮರಥೋತ್ಸವವು ಸಡಗರದಿಂದ ನಡೆಯಲಿದ್ದು, ಇಂದು ರಾತ್ರಿ ವೈಭವದ ಮಹಾರಥೋತ್ಸವ ಜರುಗಲಿದೆ. ಶನಿವಾರ ಭಕ್ತರ ಸಮ್ಮುಖದಲ್ಲಿ ತಾಯಿಯ ಅವಭೃತ ಸ್ನಾನದೊಂದಿಗೆ ಪುಣ್ಯಕ್ಷೇತ್ರದ ನದಿಯಲ್ಲಿ ಧಾರ್ಮಿಕ ಸ್ನಾನ ನೆರವೇರಲಿದ್ದು, ಉತ್ಸವಕ್ಕೆ ತೆರೆ ಬೀಳಲಿದೆ.

ಭಕ್ತರ ಸನಿಹಕ್ಕೆ ಹೋದ ಜಗನ್ಮಾತೆ

ರಥೋತ್ಸವದ ಮಹತ್ವದ ಕುರಿತು ಮಾಹಿತಿ ನೀಡಿದ ಕ್ಷೇತ್ರದ ಧರ್ಮದರ್ಶಿಗಳಾದ ಭೀಮೇಶ್ವರ ಜೋಶಿಯವರು, 'ವರ್ಷವಿಡೀ ಗರ್ಭಗುಡಿಯಲ್ಲಿ ದರ್ಶನ ನೀಡುವ ಜಗನ್ಮಾತೆಯು ರಥೋತ್ಸವದ ಸಮಯದಲ್ಲಿ ಭಕ್ತರ ಸನಿಹಕ್ಕೆ ಬರುವುದು ಅತ್ಯಂತ ಪುಣ್ಯದಾಯಕ ಸಂಗತಿ. ತಾಯಿಯು ರಥದಲ್ಲಿ ಹೇಗೆ ವಿಜೃಂಭಣೆಯಿಂದ ಎತ್ತರದಲ್ಲಿ ಕುಳಿತಿರುತ್ತಾಳೋ, ಅದೇ ರೀತಿ ತಾಯಿಯನ್ನು ನಂಬಿದ ಭಕ್ತರ ಜೀವನದ ರಥವೂ ಸಹ ಪ್ರಗತಿಯ ಪಥದಲ್ಲಿ ಸಾಗಿ ಜೀವನ ಸಮೃದ್ಧವಾಗಲಿ ಎಂಬುದು ಈ ಉತ್ಸವದ ಆಶಯವಾಗಿದೆ' ಎಂದು ಶುಭ ಹಾರೈಸಿದರು.

ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ತಾಯಿಯ ಕೃಪೆಗೆ ಪಾತ್ರರಾಗುತ್ತಿದ್ದು, ಇಡೀ ಹೊರನಾಡು ಕ್ಷೇತ್ರವು ಭಕ್ತಿ ಮತ್ತು ಸಂಭ್ರಮದ ಕಡಲಲ್ಲಿ ತೇಲುತ್ತಿದೆ.

PREV
Read more Articles on
click me!

Recommended Stories

ಬೆಂಗಳೂರು ಮಹಿಳಾ ಟೆಕ್ಕಿ ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್; ಹಂತಕನ ವಿಕೃತಿಗೆ ಪೊಲೀಸರೇ ಶಾಕ್!
ಬೇಕು ಅಂತ ಬಂದಿದ್ದಲ್ಲ, ದಾರಿ ತಪ್ಪಿ ಬಂದದ್ದು; 100 ಕೆಜಿ ಕಡಲ ಆಮೆ ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ!