Hijab controversy : ಹೈಸ್ಕೂಲು-ಕಾಲೇಜಿಗೆ 3  ದಿನ ರಜೆ ಘೋಷಿಸಿದ ಸಿಎಂ, ಪ್ರಾಥಮಿಕ ಶಾಲೆ ತೆರೆದಿರಲಿದೆ

By Contributor AsianetFirst Published Feb 8, 2022, 4:53 PM IST
Highlights

* ಮೂರು ದಿನಗಳ ಕಾಲ ಹೈಸ್ಕೂಲು-ಕಾಲೇಜುಗಳಿಗೆ ರಜೆ
* ದೆಹಲಿಯಿಂದಲೇ ಆದೇಶ ಹೊರಡಿಸಿದ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
*  ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ ಸಿಎಂ ಬೊಮ್ಮಾಯಿ
* ಪ್ರಾಥಮಿಕ ಶಾಲೆಗಳಿಗೆ ರಜಾ ಇಲ್ಲ

ನವದೆಹಲಿ(ಫೆ. 08) ದೆಹಲಿ (Newdelhi) ಪ್ರವಾಸದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ  (Basavaraj Bommai) ಮೂರು ದಿನಗಳ ಕಾಲ ಹೈಸ್ಕೂಲು-ಕಾಲೇಜುಗಳಿಗೆ (School) ರಜೆ ಘೋಷಿಸಿದ್ದಾರೆ. ಪ್ರಾಥಮಿಕ ಶಾಲೆಗಳು ಎಂದಿನಂತೆ  ತೆರೆದಿರಲಿದೆ.

ನವದೆಹಲಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ರಜೆ ಘೋಷಣೆ ಆದೇಶ ನೀಡಿದ್ದಾರೆ. ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳು(Students), ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ರಾಜ್ಯದ ಸಮಸ್ತ ಜನತೆಗೆ ಸಿಎಂ ಮನವಿ ಮಾಡಿಕೊಂಡಿದ್ದಾರೆ.

Latest Videos

ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿ

ಹಿಜಾಬ್ ವಿವಾದ ಹಲವು ಜಿಲ್ಲೆಗಳಿಗೆ ವ್ಯಾಪಿಸಿದ್ದು ಕರ್ನಾಟಕ ಹೈಕೋರ್ಟ್ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ. ಈ ನಡುವೆ ಶಾಲಾ ಕಾಲೇಜು, ಇಂಜಿನಿಯರಿಂಗ್ ಕಾಲೇಜುಗಳಿಗೂ ರಜೆ ಘೋಷಣೆ ಮಾಡಲಾಗಿದೆ. 

ಶಿಕ್ಷಣ ಸಚಿವರ ಹೇಳಿಕೆ: ಕರ್ನಾಟಕದಲ್ಲಿ ಐದು ಸಾವಿರ ಪಿಯು ಕಾಲೇಜುಗಳಿವೆ. ಹತ್ತನ್ನೆರಡು ಕಾಲೇಜುಗಳಲ್ಲಿ ಸಂಘರ್ಷ ಶುರುವಾಗಿದೆ ಕೆಲ ಡಿಗ್ರಿ ಕಾಲೇಜಿನಲ್ಲೂ ಹಿಜಾಬ್, ಕೇಸರಿ ಸಂಘರ್ಷ ಶುರುವಾಗಿದೆ. ಎಲ್ಲೆಲ್ಲಿ ಲಾ ಆಂರ್ಡರ್ ತೊಂದರೆ ಆಗಲಿದೆ. ಅಲ್ಲಿನ ಡಿಡಿಪಿಯು ಪರಿಸ್ಥಿತಿ ನೋಡಿಕೊಂಡು ರಜೆ ಘೋಷಿಸಲು ಅಧಿಕಾರ ನೀಡಿದ್ದೇನೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದರು.

ಅನೇಕ ವಿದ್ಯಾರ್ಥಿಗಳು ಕಾಲೇಜು, ಕಾಲೇಜು ಯೂನಿಫಾರ್‌ಮ್ ಧರಿಸಿ ತರಗತಿಗೆ ಬರ್ತಿದ್ದಾರೆ. ತರಗತಿಗಳು ಉತ್ತಮವಾಗಿ ನಡೆಯುತ್ತಿದೆ. ಬಹುತೇಕ ವಿದ್ಯಾರ್ಥಿಗಳು ತರಗತಿ ನಡೆಯಬೇಕು ಅಂತಿದ್ದಾರೆ. ಶಾಲಾ ಸಮವಸ್ತ್ರ ಬೇಕು ಅಂತ ಹೇಳ್ತಿದ್ದಾರೆ. ಬಾಗಲಕೋಟೆ ಸೇರಿದಂತೆ ಕೆಲವೆಡೆ ಬೇಡ ಅಂತಿದ್ದಾರೆ. ಡಿಡಿಪಿಯು ಪರಿಸ್ಥಿತಿ ನೋಡಿಕೊಂಡು  ತೀರ್ಮಾನ ಮಾಡುತ್ತಾರೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದರು.

ಸಂವಿಧಾನದ ಆಶಯದಂತೆ ನಡೆಯುತ್ತೇವೆ:  ಹಿಜಾಬ್ ಗೊಂದಲವನ್ನು ಮಂಗಳವಾರ ವಿಚಾರಣೆ ನಡೆಸಿದ ಕರ್ನಾಟ ಹೈಕೋರ್ಟ್, ಭಾವೋದ್ರೇಕ ಅಥವಾ ಭಾವನಾತ್ಮಕವಾಗಿ ನಾವು ಈ ಪ್ರಕರಣದ ಬಗ್ಗೆ ಮಾತನಾಡುವುದಿಲ್ಲ. ಕಾನೂನಿನ ರೀತಿಯಲ್ಲಿಯೇ ಹೋಗುತ್ತೇವೆ ಎಂದು ಹೇಳಿದೆ. ಸಂವಿಧಾನವು ನಮಗೆ ಏನು ಹೇಳುತ್ತದೆಯೋ ಅದರಂತೆಯೇ ನಾವು ಹೋಗುತ್ತೇವೆ. ಸಂವಿಧಾನವೇ ನನಗೆ ಭಗವದ್ಗೀತೆ ಎಂದು ತಿಳಿಸಿದ್ದು  ಬೂಧವಾರಕ್ಕೆ ವಿಚಾರಣೆ ಮುಂದೂಡಿದೆ.

ಸಮವಸ್ತ್ರವನ್ನು ನಿರ್ಧರಿಸಲು ಕಾಲೇಜುಗಳಿಗೆ ಸ್ವಾಯತ್ತತೆ ನೀಡಲಾಗಿದೆ ಎಂದು ಅಡ್ವೊಕೇಟ್ ಜನರಲ್ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದರು. ಹಾಗೇನಾದರೂ ಹಿಜಾಬ್ ಧರಿಸಲೇಬೇಕು ಎಂದು ಬಯಸುವ ವಿದ್ಯಾರ್ಥಿಗಳು ಕಾಲೇಜು ಅಭಿವೃದ್ಧಿ ಸಮಿತಿಯನ್ನು ಸಂಪರ್ಕಿಸಬೇಕು ಎಂದು ಅಡ್ವೊಕೇಟ್ ಜನರಲ್ ಹೇಳಿದ್ದಾರೆ.  ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದೇವದತ್ ಕಾಮತ್, ‘ನಮ್ಮ ಜಾತ್ಯತೀತತೆ ಗೌರವದ ಮೇಲೆ ನಿಂತಿದೆ... ರಾಜ್ಯವು ಎಲ್ಲಾ ಧರ್ಮವನ್ನು ಗೌರವಿಸುತ್ತದೆ. "ಭಾರತದಲ್ಲಿ ಜಾತ್ಯತೀತತೆ ವಿಭಿನ್ನವಾಗಿದೆ ಎಂಬುದನ್ನು ಮನಗಾಣಬೇಕು ಎಂದು ತಿಳಿಸಿದರು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದೇವದತ್ತ್ ಕಾಮತ್, ಮುಸ್ಲಿಮ್ ಸಂಪ್ರದಾಯದ ಪ್ರಮುಖ ಭಾಗವೆಂದರೆ ಸ್ಕಾರ್ಫ್ ಧರಿಸುವುದಾಗಿದೆ ಎಂದು ಹೇಳಿದರು. ಕೆಲವು ದೇಶಗಳಲ್ಲಿ ಋಣಾತ್ಮಕ ಜಾತ್ಯತೀತತೆಯನ್ನು ಅಭ್ಯಸಿಸುತ್ತಾರೆ. ಅವರಲ್ಲಿ ಧಾರ್ಮಿಕ ಐಡೆಂಟಿಟಿಯನ್ನು ಸಾರ್ವಜನಿಕವಾಗಿ ತೋರಿಸುವ ಹಾಗಿಲ್ಲ. ಆದರೆ, ಭಾರತ ಈ ರೀತಿಯ ದೇಶವಲ್ಲ ಎಂಬುದನ್ನು ತೆರೆದಿಟ್ಟು. ಬೆಳಗ್ಗೆಯಿಂದ ಆರಂಭವಾದ ವಿಚಾರಣೆ ಮುಂದುವರಿದಿತ್ತು. ಈ ನಡುವೆ ಸರ್ಕಾರ ರಜೆ ಘೋಷಣೆ ತೀರ್ಮಾನ ಮಾಡಿದೆ.

ಹಿಜಾಬ್ ವಿವಾದ: ಪ್ರೌಢಶಾಲೆ, ಕಾಲೇಜುಗಳಿಗೆ 3 ದಿನ ರಜೆ; ಪರೀಕ್ಷೆಗಳು ಅಬಾಧಿತ :  ರಾಜ್ಯದ ನಾನಾ ಭಾಗಗಳ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ವಿವಾದ ಭುಗಿಲೆದ್ದಿರುವ  ಹಿನ್ನೆಲೆಯಲ್ಲಿ ಬುಧವಾರದಿಂದ ಶುಕ್ರವಾರದವರೆಗೆ ರಾಜ್ಯಾದ್ಯಂತ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಮತ್ತು ಪದವಿ ಕಾಲೇಜುಗಳಿಗೆ ಇದೇ 9ರಿಂದ 11ವರೆಗೆ ರಜೆ ಘೋಷಿಸಲಾಗಿದೆ. ಆದರೆ, ಈಗಾಗಲೇ ನಡೆಯುತ್ತಿರುವ ಎಂಜಿನಿಯರಿಂಗ್, ಸ್ನಾತಕೋತ್ತರ ಮತ್ತಿತರ ಪರೀಕ್ಷೆಗಳು ಎಂದಿನಂತೆ ನಡೆಯುತ್ತವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಅನುದಾನಿತ ಮತ್ತು ಅನುದಾನ ರಹಿತ‌ ಶಾಲಾ ಕಾಲೇಜುಗಳಿಗೂ ರಜೆ ಆದೇಶ ಅನ್ವಯವಾಗಲಿದೆ. ಡಿಪ್ಲೊಮಾ ತರಗತಿಗಳು ಕೂಡ ಇರುವುದಿಲ್ಲ. ಮಂಗಳವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, 'ಹಿಜಾಬ್ ವಿವಾದ ಸದ್ಯಕ್ಕೆ ನ್ಯಾಯಾಲಯದ ಮುಂದಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಶಾಂತಿಯುತವಾಗಿ ವರ್ತಿಸಬೇಕು' ಎಂದು ಮನವಿ ಮಾಡಿದರು.

ಕಾಲೇಜುಗಳಲ್ಲಿ ಹಿಜಾಬ್ ಗಾಗಲಿ, ಕೇಸರಿ ಶಾಲುವಿಗಾಗಲಿ ಅವಕಾಶವಿಲ್ಲ. ಆದರೆ ಎರಡೂ ಕಡೆಯವರು ಹಠ ಹಿಡಿದಿರುವುದರಿಂದ ಪರಿಸ್ಥಿತಿ ಬಿಗಡಾಯಿಸಿದೆ. ಅಂತಿಮವಾಗಿ ಎಲ್ಲರೂ ನ್ಯಾಯಾಲಯದ ತೀರ್ಪನ್ನು ಪಾಲಿಸಬೇಕಾಗುತ್ತದೆ ಎಂದು ಅವರು ಹೇಳಿದರು. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಎಲ್ಲರೂ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಬೇಕು ಎಂದು ಅವರು ಮನವಿ ಮಾಡಿದರು.

 

"ರಾಜ್ಯದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಶಾಲೆ, ಕಾಲೇಜುಗಳ ಆಡಳಿತ ಮಂಡಳಿಗಳು ಹಾಗೂ ನಾಡಿನ ಸಮಸ್ತ ಜನತೆ ಶಾಂತಿ ಸೌಹಾರ್ದತೆ ಕಾಪಾಡುವಂತೆ ಮನವಿ ಮಾಡುತ್ತೇನೆ. ಮುಂದಿನ ಮೂರು ದಿನಗಳ ಅವಧಿಗೆ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸುವಂತೆ ಆದೇಶಿಸಲಾಗಿದೆ. ಸಂಬಂಧಿಸಿದ ಎಲ್ಲರೂ ಸಹಕರಿಸಲು ಕೋರಿದೆ" : ಮುಖ್ಯಮಂತ್ರಿ

— CM of Karnataka (@CMofKarnataka)
click me!