ಮಂಡ್ಯ: ಜಿಲ್ಲೆಯಾದ್ಯಂತ ಭಾರೀ ಮಳೆ, ಹಲವು ಪ್ರದೇಶ ಜಲಾವೃತ

By Kannadaprabha NewsFirst Published Aug 23, 2019, 8:23 AM IST
Highlights

ಉತ್ತರ ಕರ್ನಾಟಕ, ಕರಾವಳಿ, ಮಲೆನಾಡಿನಲ್ಲಿ ಮಳೆ ಬಿಡುವು ಕೊಟ್ಟಿದ್ದು, ಇದೀಗ ಮಂಡ್ಯದಲ್ಲಿ ಭಾರೀ ಮಳೆಯಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತವಾಗಿದೆ. ಇನ್ನು ಕೆಲವೆಡೆ ಮಳೆ ನೀರು ಚರಂಡಿಯಲ್ಲಿ ಹರಿಯದೆ ರಸ್ತೆಯ ಮೇಲೆ ಹರಿಯುತ್ತಿದ್ದು, ಜನ ಪರದಾಡುವಂತಾಗಿದೆ.

ಮಂಡ್ಯ(ಆ.23): ಕಳೆದ ಎರಡು- ಮೂರು ದಿನಗಳಿಂದಲೂ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಳವಳ್ಳಿ ಪಟ್ಟಣದಲ್ಲಿ ಜನ ಸಾಮಾನ್ಯರಿಗೆ ತೀವ್ರ ತೊಂದರೆಯಾಗಿದೆ. ಗುರುವಾರ ರಾತ್ರಿಸುರಿದ ಮಳೆಯಿಂದಾಗಿ ಪಟ್ಟಣದಲ್ಲಿ ರಸ್ತೆ ಮೇಲೆ ಮಳೆ ನೀರು ಹರಿದು ಅವಾಂತರಗಳು ಸಂಭವಿಸಿವೆ. ಅನಂತರಾಂ ವೃತ್ತದಲ್ಲಿ ಸಮರ್ಪಕವಾಗಿ ಚರಂಡಿಯಲ್ಲಿ ನೀರು ಹರಿಯದ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡುವಂತಾಗಿತ್ತು.

ಮನೆಯೊಳಗೆ ನುಗ್ಗಿದ ನೀರು:

ನಿರಂತರವಾಗಿ ಸುರಿದ ಮಳೆಯಿಂದಾಗಿ ಮನೆಯೊಳಗೆ ನೀರು ನುಗ್ಗಿದ ಘಟನೆ ತಾಲೂಕಿನ ಬುಗತಗಹಳ್ಳಿಯಲ್ಲಿ ಜರುಗಿದೆ. ಈ ಗ್ರಾಮದ ಕೆಲವು ಮನೆಗಳಲ್ಲಿ ಭಾರಿ ಮಳೆಯಿಂದಾಗಿ ಮಂಡಿಯುದ್ದ ನೀರು ನಿಂತಿದೆ. ಒಳ ಚರಂಡಿ ವ್ಯವಸ್ಥೆ ಸರಿ ಇಲ್ಲದ ಕಾರಣ ಮನೆಯೊಳಗೆ ನೀರು ನುಗ್ಗಿದೆ. ನಾಗರಾಜು ಎಂಬುವರಿಗೆ ಸೇರಿದ ಮನೆಯಲ್ಲಿನ ಸಾಮಾಗ್ರಿಗಳು ಜಲಾವೃತಗೊಂಡಿವೆ. ಒಳಚರಂಡಿ ವ್ಯವಸ್ಥೆಯನ್ನೂ ಮಾಡದ ಗ್ರಾಮ ಪಂಚಾಯತಿಯವರು, ಈಗ ಮನೆ ಜಲಾವೃತವಾಗಿರುವ ಕುಟಂಬದವರಿಗೂ ಯಾವುದೇ ರೀತಿಯಲ್ಲಿ ನೆರವಾಗಿಲ್ಲ.

ಕಾಲೇಜು ಮೖದಾನದಲ್ಲಿ ತುಂಬಿದ ನೀರು:

ಪಟ್ಟಣದ ಮೈಸೂರು ರಸ್ತೆ, ಮದ್ದೂರು ರಸ್ತೆಯಲ್ಲಿ ಹರಿದು ಬರುವ ನೀರು ಸಮರ್ಪಕವಾಗಿ ಚರಂಡಿಗೆ ಹೋಗದ ಹಿನ್ನೆಲೆಯಲ್ಲಿ ಶಾಲೆ, ಕಾಲೇಜು ಮೈದಾನದಲ್ಲಿ ನೀರು ನಿಂತ ಪರಿಣಾಮವಾಗಿ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಪರದಾಡಬೇಕಾಯಿತು.

ಶ್ರೀರಂಗಪಟ್ಟಣ ಸೇರಿ ಇನ್ನಷ್ಟು ಸ್ಮಾರಕಕ್ಕೆ ಯುನೆಸ್ಕೋ ಮಾನ್ಯತೆಗೆ ಅರ್ಜಿ

ಮೈಸೂರು ರಸ್ತೆಯಲ್ಲಿ ಹರಿಯುವ ನೀರು ಅನಂತರಾಂ ವೃತ್ತದಲ್ಲಿ ಭಾರಿ ಪ್ರಮಾಣದಲ್ಲಿ ನಿಂತಿದೆ. ರಸ್ತೆ ಬದಿ ಇರುವ ಭಾರತ್‌ ಸಂಚಾರ್‌ ನಿಗಮ ಕಚೇರಿಯೊಳಗೆ ಹಾಗೂ ಅಂಚೆ ಕಚೇರಿ ಆವರಣಕ್ಕೆ ನೀರು ನುಗ್ಗಿತ್ತು. ಸಿಬ್ಬಂದಿ ರಟ್ಟುಗಳನ್ನು ಹಿಡಿದು ನೀರನ್ನು ಹೊರತಳ್ಳಲು ಪ್ರಯತ್ನಿಸಿದರು. ಅಂಚೆ ಕಚೇರಿ ಮುಂದಿನ ರಸ್ತೆ ಬದಿ ನೀರು ನಿಂತು ಕೆಸರುಮಯವಾಗಿದ್ದು, ಪಾದಾಚಾರಿಗಳು ಪರದಾಡುವಂತಾಗಿತ್ತು. ಅನಂತರಾಂ ವೃತ್ತದ ಬಳಿ ಚರಂಡಿಗೆ ಸ್ಲ್ಯಾಬ್ ಅಳವಡಿಸಿಲ್ಲ, ಆಕಸ್ಮಿಕವಾಗಿ ಸಾರ್ವಜನಿಕರು ಬಿದ್ದರೆ ಕಾಪಾಡುವವರು ಯಾರು ಎಂಬುದು ಜನರ ಪ್ರಶ್ನೆಯಾಗಿದೆ.

ಮಂಡ್ಯ: ಬದುಕಿರುವ ಮಗು ಸತ್ತಿದೆ ಎಂದ ವೈದ್ಯ..!

ಮದ್ದೂರು ರಸ್ತೆಯ ಪಾದಾಚಾರಿ ಮಾರ್ಗದಲ್ಲಿ ಅಳವಡಿಸಿರುವ ಟೈಲ್ಸ್‌ ಅಲ್ಲಲ್ಲಿ ಕಿತ್ತುಬಂದಿವೆ, ಜೊತೆಗೆ ಮಾರ್ಗದಲ್ಲಿ ನೀರು ನಿಂತಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸಂಬಂಧಿಸಿದವರು ಗಮನ ಹರಿಸಿಲ್ಲ. ಪುರಸಭೆ ಮುಖ್ಯಾಧಿಕಾರಿ ಗಂಗಾಧರ್‌ ಪ್ರತಿಕ್ರಿಯಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಯನ್ನು ಲೋಕೊಪಯೋಗಿ ಮತ್ತು ಕೆಶಿಫ್‌ ನವರು ಸಮರ್ಪಕವಾಗಿ ಮುಗಿಸದ ಕಾರಣ ಸಮಸ್ಯೆ ಎದುರಾಗಿದೆ. ಪುರಸಭೆವತಿಯಿಂದ ಸ್ವಚ್ಛತಾ ಕಾರ್ಯ ಮಾಡಲಾಗುತ್ತಿದೆ ಎಂದರು.

KRS ಜಲಾಶಯದ ಸುತ್ತ ಮುತ್ತ ನಿಷೇಧಾಜ್ಞೆ ಜಾರಿ

click me!