ಕಾಫಿನಾಡು ಜಿಲ್ಲೆಯಾದ್ಯಂತ ವರುಣನಬ್ಬರ: ಮಲೆನಾಡಿನಲ್ಲಿ ಅಪಾರ ಹಾನಿ

By Govindaraj SFirst Published Sep 3, 2022, 12:58 AM IST
Highlights

ಗೌರಿ ಗಣೇಶ ಹಬ್ಬದ ಹಿಂದಿನ ಎರಡು ದಿನ ರಾಜ್ಯದ 20 ಜಿಲ್ಲೆಗಳನ್ನು ನಡುಗಿಸಿದ್ದ ವರುಣನ ಆರ್ಭಟ ಕಾಫಿನಾಡು ಪ್ರವೇಶ ಮಾಡಿರಲಿಲ್ಲ. ಆದರೆ, ಗಣೇಶ ಹಬ್ಬದಂದು ಮಳೆ ಮತ್ತೆ ರೀ ಎಂಟ್ರಿ ಕೊಟ್ಟಿದೆ. 

ಚಿಕ್ಕಮಗಳೂರು (ಸೆ.03): ಗೌರಿ ಗಣೇಶ ಹಬ್ಬದ ಹಿಂದಿನ ಎರಡು ದಿನ ರಾಜ್ಯದ 20 ಜಿಲ್ಲೆಗಳನ್ನು ನಡುಗಿಸಿದ್ದ ವರುಣನ ಆರ್ಭಟ ಕಾಫಿನಾಡು ಪ್ರವೇಶ ಮಾಡಿರಲಿಲ್ಲ. ಆದರೆ, ಗಣೇಶ ಹಬ್ಬದಂದು ಮಳೆ ಮತ್ತೆ ರೀ ಎಂಟ್ರಿ ಕೊಟ್ಟಿದೆ. ಈ ಬಾರಿಯ ಮುಂಗಾರಿನಲ್ಲಿ ಸುರಿದ ಭಾರಿ ಮಳೆಗೆ ಸುಮಾರು 282 ಕೋಟಿ ರುಪಾಯಿ ಹಾನಿ ಸಂಭವಿಸಿದೆ. ಈ ನಷ್ಟದ ನಂತರ ಮಳೆ ಬಿಡುವು ನೀಡಿತ್ತು. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ. ಮಳೆಯ ಜತೆಗೆ ಗುಡುಗಿನ ಆರ್ಭಟವೂ ಕೂಡ ಜೋರಾಗಿತ್ತು. ನಗರದಲ್ಲಿ ಮಧ್ಯಾಹ್ನ 4 ಗಂಟೆಗೆ ಆರಂಭವಾದ ಮಳೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಜೋರಾಗಿ ಸುರಿಯಿತು. 

ಮೂಡಿಗೆರೆ, ಶೃಂಗೇರಿ ತಾಲೂಕುಗಳಲ್ಲೂ ಇದೇ ಪರಿಸ್ಥಿತಿ ಇತ್ತು. ಅತ್ತ ಬಯಲುಸೀಮೆಯ ತರೀಕೆರೆಯಲ್ಲೂ ಮಳೆ ನಿರಂತರವಾಗಿ ಸುರಿದಿದ್ದರಿಂದ ಗುಂಡೇನಹಳ್ಳಿ ಹಾಗೂ ತರೀಕೆರೆ ಪಟ್ಟಣದಲ್ಲಿ ಒಟ್ಟು ಎರಡು ಮನೆಗಳು ಬಿದ್ದಿವೆ. ಕೊಪ್ಪ ತಾಲೂಕಿನಲ್ಲಿ ಭಾರಿ ಮಳೆಯಾಗಿದ್ದು, ಇಲ್ಲಿನ ಕೋಳೂರು ನೈಬಿಗೆ ಹೋಗುವ ಸೇತುವೆ ಮೇಲೆ ನೀರು ಹರಿದು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಬೈಲುಕೊಪ್ಪ, ಕೊರಗೋಡು ಇಳಿಮನೆ, ಮಕ್ಕಿಮನೆ ಮಡಿವಿನಕೆರೆ ಗ್ರಾಮಗಳಲ್ಲಿ ಇತ್ತೀಚೆಗೆ ನಾಟಿ ಮಾಡಲಾಗಿದ್ದ ಭತ್ತದ ಗದ್ದೆಯ ಮೇಲೆ ಮಳೆ ನೀರು ನಿಂತಿದ್ದು, ಗುರುವಾರ ನೀರು ಇಳಿಮುಖವಾಗಿತ್ತಾದರೂ ನಾಟಿಯ ಮೇಲೆ ಅಪಾರ ಪ್ರಮಾಣದಲ್ಲಿ ಮರಳು ನಿಂತಿದ್ದು, ಹಲವು ರೈತರಿಗೆ ಭಾರಿ ನಷ್ಟವಾಗಿದೆ.

ಒಂದು ಕಡೆ ಹಸುವನ್ನು ಉಳಿಸಿದ ಗ್ರಾಮಸ್ಥರು; ಇನ್ನೊಂದಡೆ ಮಾಂಸಕ್ಕಾಗಿ ಹಸು ಹತ್ಯೆ ಮಾಡಿದ ಪಾಪಿಗಳು!

ಗುರುವಾರ ಮಧ್ಯಾಹ್ನದ ನಂತರ ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಧಾರಾಕಾರವಾಗಿ ಮಳೆ ಸುರಿದು ನಂತರದಲ್ಲಿ ಬಿಡುವು ನೀಡಿತಾದರೂ ಸಂಜೆ ವೇಳೆಗೆ ಪುನಃ ಆರಂಭಗೊಂಡಿತು. ಶೃಂಗೇರಿ ತಾಲೂಕಿನಲ್ಲಿ ಸಾಧಾರಣವಾಗಿ ಮಳೆಯಾಗಿದೆ. ಎನ್‌.ಆರ್‌.ಪುರ, ಕಡೂರು ತಾಲೂಕಿನಲ್ಲಿ ತುಂತುರು ಮಳೆ ಮುಂದುವರೆದಿತ್ತು. ಚಿಕ್ಕಮಗಳೂರು ನಗರ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಮಧ್ಯಾಹ್ನ 12 ಗಂಟೆಗೆ ಆರಂಭವಾದ ಮಳೆ 2 ಗಂಟೆಗೆ ಬಿಡುವು ನೀಡಿತಾದರೂ, ನಂತರ 4 ಗಂಟೆಗೆ ಆರಂಭಗೊಂಡು ಬಿಡುವಿಲ್ಲದೆ ಸುರಿಯುತ್ತಿತ್ತು. ಒಟ್ಟಾರೆ ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ.

ಮೊದಲ ಪತಿಯ ಹತ್ಯೆಗೆ 2ನೇ ಗಂಡನಿಂದ ಕಿಡ್ನಾಪ್ ಮಾಡಿಸಿದ ಪತ್ನಿ, ಕಾರು ಕೈಕೊಟ್ಟು ಲಾಕ್ !

ಮಳೆಯ ವಿವರ: ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದಿರುವ ಮಳೆಯ ವಿವರ (ಮಿ.ಮೀ.ಗಳಲ್ಲಿ) ಈ ಕೆಳಕಂಡಂತೆ ಇದೆ. ಮೂಡಿಗೆರೆ- 36, ಕೊಟ್ಟಿಗೆಹಾರ- 13.6, ಗೋಣಿಬೀಡು- 15.2, ಜಾವಳಿ- 24.3, ಕಳಸ- 10, ಹೊಸಕೆರೆ- 52.2, ಕೊಪ್ಪ-11, ಜಯಪುರ- 91.2, ಕಮ್ಮರಡಿ- 13.4, ತರೀಕೆರೆ- 26, ಲಕ್ಕವಳ್ಳಿ- 11.1, ಲಿಂಗದಹಳ್ಳಿ- 27.6, ತ್ಯಾಗದಬಾಗಿ- 34.6, ಉಡೇವಾ- 30.3, ಹುಣಸಘಟ್ಟ- 22. ಚಿಕ್ಕಮಗಳೂರು- 23.1, ವಸ್ತಾರೆ- 12, ಜೋಳ್ದಾಳ್‌- 20, ಆಲ್ದೂರು- 45, ಕೆ.ಆರ್‌.ಪೇಟೆ- 24, ಅಜ್ಜಂಪುರ- 29, ಶಿವನಿ- 23.1, ಬುಕ್ಕಾಂಬೂದಿ- 9, ಕಡೂರು- 14, ಬೀರೂರು- 12.2, ಎಮ್ಮೆದೊಡ್ಡಿ- 34.2, ಯಗಟಿ- 24.6, ಶೃಂಗೇರಿ- 51.2, ಕಿಗ್ಗಾ- 41.2 ಮಿ.ಮೀ. ಮಳೆಯಾಗಿದೆ.

click me!