ಶಹಾಪುರ ತಾಲೂಕಿನಾದ್ಯಂತ ಭಾರೀ ಮಳೆ: ಸಿಡಿಲು ಬಡಿದು 19 ಕುರಿಗಳು ಬಲಿ!

By Kannadaprabha NewsFirst Published Jun 25, 2023, 4:38 AM IST
Highlights

ತಾಲೂಕಿನಾದ್ಯಂತೆ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಸಿಡಿಲು ಬಡಿದು 19 ಕುರಿಗಳು ಮೃತಪಟ್ಟಿರುವ ಘಟನೆ ಶಹಾಪುರ ನಗರದ ಹಳೆಪೇಟೆಯ ಹಿಂದಿನ ಬೆಟ್ಟದಲ್ಲಿ ಶನಿ​ವಾರ ನಡೆದಿದೆ.

ಶಹಾಪುರ (ಜೂ.25) ತಾಲೂಕಿನಾದ್ಯಂತೆ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಸಿಡಿಲು ಬಡಿದು 19 ಕುರಿಗಳು ಮೃತಪಟ್ಟಿರುವ ಘಟನೆ ಶಹಾಪುರ ನಗರದ ಹಳೆಪೇಟೆಯ ಹಿಂದಿನ ಬೆಟ್ಟದಲ್ಲಿ ಶನಿ​ವಾರ ನಡೆದಿದೆ.

ಎಂದಿನಂತೆ ಕುರಿ ಮೇಯಿಸಿಕೊಂಡು ಬೆಟ್ಟದಿಂದ ಮನೆ ಕಡೆ ಹೊರಟಿದ್ದ ಕುರಿಗಳಿಗೆ ಸಿಡಿಲು ಬಡಿದು 120ಕ್ಕೂ ಹೆಚ್ಚು ಕುರಿ ಹಿಂಡಿನಲ್ಲಿ, ಒಟ್ಟು 19 ಕುರಿಗಳು ಬೆಟ್ಟದಲ್ಲಿ ಮೃತಪಟ್ಟಿದ್ದು, ಮಳೆಯು ಕುರಿಗಾಹಿಗಳ ಬದುಕಿಗೆ ಬರೆ ಕೊಟ್ಟಂತಾಗಿದೆ.

ಸುಮಾರು 4.50 ಲಕ್ಷ ರು.ಗಳ ಮೌಲ್ಯದ ಕುರಿಗಳು ಸಿಡಿಲಿಗೆ ಬಲಿಯಾಗಿದೆ. ಕುರಿಗಾಹಿಗಳಾದ ಸಂಗಪ್ಪ ತಂದೆ ಮಲ್ಲಪ್ಪ ಜಂಗಳಿ, ದೇವಪ್ಪ ತಂದೆ ನಾಗಪ್ಪ ವಗ್ಗನವರ ಅವರಿಗೆ ಸೇರಿದ್ದು, ಸಂಜೆ ಸುಮಾರಿಗೆ ಸಿಡಿಲಿನ ಪ್ರಖರತೆಗೆ ಬೆಚ್ಚಿ ಬೀಳುವಂತಾಗಿತ್ತು. ಅದೃಷ್ಟವಶಾತ್‌ ಕುರಿಗಾಹಿಗಳು ಕಲ್ಲು ಬಂಡೆಗೆ ನಿಂತ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಳೆದ ಬಾರಿ ಅತಿ​ವೃಷ್ಟಿ, ಈ ಬಾರಿ ಅನಾ​ವೃಷ್ಟಿ, ಆತಂಕದಲ್ಲಿ ರೈತರು!

ಪ್ರಕೃತಿ ವಿಕೋಪಕ್ಕೆ ಬಲಿಯಾದರೆ ಪ್ರತಿ ಕುರಿಗೆ 3200 ರು.ಗಳು ಮಾತ್ರ ಪರಿಹಾರ ನೀಡಲಾಗುತ್ತಿದೆ. ಈ ಅತ್ಯಲ್ಪ ಹಣದಿಂದ ಅವರು ಬದುಕು ಸುಧಾರಿಸಲು ಸಾಧ್ಯವಾಗುವುದಿಲ್ಲ. ಕುರಿಗಾಹಿಗೆ ವಿಮಾ ಸೌಲಭ್ಯ ಹಾಗೂ ಪ್ರಕೃತಿ ವಿಕೋಪಕ್ಕೆ ಬಲಿಯಾದ ಪ್ರತಿ ಕುರಿಗೆ 10 ಸಾವಿರ ರು.ಗಳು ಪರಿಹಾರ ನೀಡಬೇಕೆಂದು ರೈತ ಮುಖಂಡ ನಿಂಗಣ್ಣ ನಾಟೇಕಾರ್‌ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಮೇವಿಗಾಗಿ ಕುರಿಗಳನ್ನು ಮೇಯಿಸಲು ಬೆಟ್ಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಪ್ರಕತಿ ಇಂತದ್ದೊಂದು ಸಂಕಷ್ಟತಂದಿದ್ದಕ್ಕೆ ಇಡೀ ಕುಟುಂಬದವರ ಬದುಕಿಗೆ ಆತಂಕವಾಗಿದೆ. ತಕ್ಷಣವೇ ತಹಸೀಲ್ದಾರರು, ಸಂಬಂಧಿಸಿದ ಪಶು ಚಿಕಿತ್ಸಾಲಯ, ಬಡ ಕುರಿಗಾಹಿಗಳ ಸಂಕಷ್ಟಕ್ಕೆ ಸ್ಪಂದಿಸಿ ಸೂಕ್ತ ಪರಿಹಾರ ಕಲ್ಪಿಸುವುದು ಪ್ರಸ್ತುತ ಅಗತ್ಯತೆಯಾಗಿದೆ.

ಇನ್ನು 4-5 ವರ್ಷ ಕರ್ನಾಟಕದಲ್ಲಿ ಮಳೆ ಕೊರತೆ?

ಪ್ರಕೃತಿ ವಿಕೋಪಕ್ಕೆ ಬಲಿಯಾದ ಪ್ರತಿ ಕುರಿಗೆ 3200 ರು.ಗಳು ಪರಿಹಾರ ನೀಡಲಾಗುತ್ತಿದೆ. ಪರಿಷ್ಕೃತ ಪರಿಹಾರ ಇದ್ದರೆ ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರವನ್ನು ನೀಡಲಾಗುವುದು.

ಉಮಾಕಾಂತ ಹಳ್ಳೆ, ತಹಸೀಲ್ದಾರ್‌ ಶಹಾಪುರ.

 

click me!