ಈ ಬಾರಿ ಎಚ್ಡಿಕೆ ಸಿಎಂ ಆಗುವುದನ್ನು ಖಚಿತ : ಸಾ.ರಾ. ಮಹೇಶ್‌

By Kannadaprabha NewsFirst Published Mar 26, 2023, 6:46 AM IST
Highlights

ಈ ಬಾರಿ ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಶಾಸಕ ಸಾ.ರಾ. ಮಹೇಶ್‌ ವಿಶ್ವಾಸ ವ್ಯಕ್ತಪಡಿಸಿದರು.

  ಕೆ.ಆರ್‌.ನಗರ :  ಈ ಬಾರಿ ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಶಾಸಕ ಸಾ.ರಾ. ಮಹೇಶ್‌ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ವಿಜಯನಗರ ಬಡಾವಣೆ ಬಳಿಯ ನೂತನ ಬಡಾವಣೆಯಲ್ಲಿ ನಿರ್ಮಾಣ ಮಾಡಲಾಗುವ ವಿಶ್ವಕರ್ಮ ಸಮುದಾಯ ಭವನದ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಈ ಹಿಂದೆ ಕುಮಾರಸ್ವಾಮಿಯವರು ಅದೃಷ್ಟದಿಂದ ಮುಖ್ಯಮಂತ್ರಿಯಾಗಿದ್ದರು, ಆದರೆ ಈ ಬಾರಿ ರಾಜ್ಯದ ಜನರೇ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ತೀರ್ಮಾನಿಸಿದ್ದು, ರಾಜ್ಯದ ಸಮಗ್ರ ಅಭಿವೃದ್ದಿ ಸ್ಥಳೀಯ ರಾಜಕೀಯ ಪಕ್ಷದಿಂದ ಮಾತ್ರ ಸಾಧ್ಯ ಎಂಬುದನ್ನು ಅರಿತಿರುವ ಜನತೆ ಈ ಬಾರಿ ಜೆಡಿಎಸ್‌ಗೆ ಬಹುಮತ ನೀಡಲಿದ್ದಾರೆ ಎಂದರು.

ತಾಲೂಕಿನಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿರುವವರು ಮುಖ್ಯವೋ ನಮ್ಮ ಕುಟುಂಬ ಉಳಿಸಿ ಎಂದು ಜನತೆಯ ಮನೆ ಬಾಗಿಲಿಗೆ ಹೋಗುತ್ತಿರುವವರು ಮುಖ್ಯವೋ ಎಂಬುದನ್ನು ತೀರ್ಮಾನಿಸಿ ಆಯ್ಕೆ ಮಾಡುವಂತೆ ಮನವಿ ಮಾಡಿದ ಅವರು ತಾಲೂಕಿನ ಸೂಕ್ಷ್ಮತೀತ ಸೂಕ್ಷ್ಮ ಸಮಾಜಗಳಿಗೆ ಏನಾದರೂ ಕೆಲಸ ಮಾಡುಕೊಡುವುದಾಗಿ ನಾನು ಮಾತು ಕೊಟ್ಟರೆ ಸ್ವಲ್ಪ ದಿನ ತಡವಾದರೂ ಸರಿ ತಪ್ಪದೇ ನೆರವೇರಿಸುತ್ತೇನೆ. ಅಂತೆಯೆ ವಿಶ್ವಕರ್ಮ ಸಮಾಜದ ಸಮುದಾಯಭವನಕ್ಕೆ ನೇರ ಸರ್ಕಾರದಿಂದ ಈ ಜಾಗವನ್ನು ಮಂಜೂರಾತಿ ಮಾಡಿಸಿ ಇದಕ್ಕೆ ತಗಲುವ 5 ಲಕ್ಷ ರು. ಗಳನ್ನು ಈಗಾಗಲೆ ಪಾವತಿಸಿರುವುದಾಗಿ ಹೇಳಿದರು.

ಈಗಾಗಲೇ ಭವನ ನಿರ್ಮಾಣಕ್ಕೆ ನನ್ನ ವೈಯಕ್ತಿಕವಾಗಿ 5 ಲಕ್ಷ ನೀಡಿದ್ದು, 10 ಲಕ್ಷ ರು. ಗಳ ಅನುದಾನವನ್ನು ಬಿಡುಗಡೆ ಮಾಡಿರುವುದಾಗಿ ಹೇಳಿದರು. ತಾಲೂಕಿನಲ್ಲಿ 324 ದೇವಾಲಯಗಳನ್ನು ನಿರ್ಮಾಣ ಮಾಡಲಾಗಿದ್ದು, ಸಮುದಾಯ ಭವನಗಳ ನಿರ್ಮಾಣಕ್ಕೆ ನನ್ನ ವೈಯಕ್ತಿಕ ನೆರವಿನೊಂದಿಗೆ ಅನುದಾನವನ್ನು ನೀಡಲಾಗಿದೆ ಎಂದರು.

ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಕೆ.ಎಸ್‌.ರೇವಣ್ಣ ಮಾತನಾಡಿದರು. ದಾವಣಗೆರೆ ಜಿಲ್ಲೆ ವಡ್ಡನಾಳಿನ ಸಾವಿತ್ರಿ ಪೀಠದ ಶ್ರೀ ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ನವನಗರ ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌. ಬಸಂತ್‌, ಪುರಸಭಾ ಸದಸ್ಯ ಕೆ.ಎಲ್‌. ಜಗದೀಶ್‌, ಉಮೇಶ್‌, ಸಂತೋಷ್‌, ಕಾಳಿಕಾಂಬ ದೇವಾಲಯದ ಅಧ್ಯಕ್ಷ ವೀರಭದ್ರಾಚಾರ್‌, ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವೇಣುಗೋಪಾಲ್‌, ಪುರಸಭೆ ಮಾಜಿ ಸದಸ್ಯ ಕೆ.ಬಿ. ಸುಬ್ರಹ್ಮಣ್ಯ, ಜಿಲ್ಲಾ ವಿಶ್ವಕರ್ಮ ಮಹಾ ಒಕ್ಕೂಟದ ಅಧ್ಯಕ್ಷ ಸಿ. ಹುಚ್ಚಪ್ಪಾಚಾರ್‌, ಎ.ಎನ್‌. ಸ್ವಾಮಿ, ತಾಲೂಕು ವಿಶ್ವಕರ್ಮ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಲಕ್ಷ್ಮೀಶ, ಸಮಾಜದ ಮುಖಂಡರಾದ ರೇಣುಕಾಪ್ರಸನ್ನ, ಸಿ.ವಿ.ಮೋಹನ್‌ಕುಮಾರ್‌, ಪ್ರಕಾಶಚಾರ್‌, ರಾಜಣ್ಣಾಚಾರ್‌, ಕ್ಷೇತ್ರಪಾಲಾಚಾರ್‌, ಎಂ.ಸಿ.ರಾಜು, ವೇದಾಂತಾಚಾರ್‌, ಎಂ.ವಿ.ಅರುಣ್‌ಕುಮಾರ್‌, ರವಿಆಚಾರ್‌, ಚಂದ್ರಾಚಾರ್‌, ಜಯರಾಮಾಚಾರ್‌, ರಮೇಶ್‌, ವಿ.ದಿನೇಶ್‌, ಪುಟ್ಟಸ್ವಾಮಾಚಾರ್‌ ಹಾಗೂ ಸಮಾಜದ ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಬೆಳಗ್ಗೆ ಶ್ರೀ ಕಾಳಿಕಾಂಬ ಕಮಠೇಶ್ವರಿ ದೇವಾಲಯದಿಂದ ಬೆಳ್ಳಿರಥದಲ್ಲಿ ಅಮ್ಮನವರ ಉತ್ಸವಮೂರ್ತಿಯನ್ನು ಅಲಂಕರಿಸಿ ಮಂಗಳವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಚಂದ್ರಮೌಳೇಶ್ವರ ರಸ್ತೆಯ ಮೊದಲ ತಿರುವಿನ ವೃತ್ತಕ್ಕೆ ಶ್ರೀ ಅಮರಶಿಲ್ಪಿ ಜಕಣಾಚಾರ‍್ಯ ವೃತ್ತ ಎಂದು ನಾಮಫಲಕ ಅನಾವರಣಗೊಳಿಸಿ ವೇದಿಕೆಯವರೆವಿಗೆ ಮೆರವಣಿಗೆಯಲ್ಲಿ ಬರಲಾಯಿತು.

click me!