'ಮಾತು ಕೇಳದೆ ಬಾಂಬೇವಾಲಗೆ ಟಿಕೆಟ್‌ ಕೊಟ್ಟ ನನ್ನ ಮಗ ಪಶ್ಚಾತ್ತಾಪ ಪಡುತ್ತಿದ್ದಾನೆ '

By Kannadaprabha NewsFirst Published Sep 13, 2019, 1:12 PM IST
Highlights

ಬಾಂಬೆವಾಲನಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿದ್ದಕ್ಕೆ ಈಗ ನನ್ನ ಮಗ ಪಶ್ಚಾತ್ತಾಪ ಪಡುತ್ತಿದ್ದಾನೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ. 

ಮಂಡ್ಯ [ಸೆ.13]:  ನನ್ನಿಂದ ಮಾಜಿ ಸ್ಪೀಕರ್‌ ಕೃಷ್ಣ , ಮಾಜಿ ಶಾಸಕ ಪ್ರಕಾಶ್‌ ಮತ್ತು ಮುಖಂಡ ಬಿ.ಎಲ್‌.ದೇವರಾಜುಗೆ ಸಾಕಷ್ಟುಅನ್ಯಾಯವಾಗಿದೆ. ಒಂದು ಭಾರಿ ಟಿಕೆಟ್‌ ಕೊಟ್ಟು ಗೆಲ್ಲಿಸಿದ್ದಾಗಿದೆ. ಅಷ್ಟೇ ಸಾಕು ಎಂದು ಎಷ್ಟೇ ಹೇಳಿದರೂ ನನ್ನ ಮಾತನ್ನು ಕೇಳದೇ ಈ ಕುಮಾರಸ್ವಾಮಿ ಮುಂಬೈವಾಲ ನಾರಾಯಣಗೌಡನನ್ನು 2018ರಲ್ಲೂ ಮತ್ತೆ ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದ. ಗೆಲ್ಲಿಸಿದ ತಪ್ಪಿಗೆ ಈಗ ಪಶ್ಚಾತ್ತಾಪ ಪಡುತ್ತಿದ್ದಾನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿಷಾದದಿಂದ ಹೇಳಿದರು.

ಮಂಡ್ಯದಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಮಾತನಾಡಿದ ಅವರು ಈ ದೇವೇಗೌಡ ಕೆ.ಆರ್‌.ಪೇಟೆಗೆ ಮತ್ತೆ ಬರುತ್ತಾನೆ. ನನ್ನ ಶಕ್ತಿ ಏನೆಂಬುದನ್ನು ತೋರಿಸುತ್ತೇನೆ ಎಂದರು. 

ಪಕ್ಷಕ್ಕೆ ಕೈಕೊಟ್ಟು ಹೋದ ಅನರ್ಹ ಶಾಸಕ ನಾರಾಯಣಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಕ್ಷಕ್ಕೆ ದ್ರೋಹಮಾಡಿ ಹೋಗಿರುವ ನಾರಾಯಣಗೌಡನಿಗೆ ತಕ್ಕಪಾಠ ಕಲಿಸಬೇಕು ಎಂದು ಮನವಿ ಮಾಡಿದರು.

ಕುಮಾರಸ್ವಾಮಿ ಸಾಲಮನ್ನಾ ಮಾಡಿದ್ದು ತಪ್ಪೇ?

ವಚನ ಭ್ರಷ್ಟನಾಗಲು ಇಚ್ಛೆಪಡದ ಕುಮಾರಸ್ವಾಮಿ ರಾಜ್ಯದ ಆರ್ಥಿಕ ಪರಿಸ್ಥಿತಿಯು ಸಂಕಷ್ಟದಲ್ಲಿದ್ದರೂ ರೈತರ ಸಾಲಮನ್ನಾ ಮಾಡುವ ದಿಟ್ಟನಿರ್ಧಾರ ಕೈಗೊಂಡು ನುಡಿದಂತೆ ನಡೆದು ರೈತರ 40 ಸಾವಿರ ಕೋಟಿಗೂ ಹೆಚ್ಚು ಸಾಲದ ಹಣವನ್ನು ಮನ್ನಾ ಮಾಡಿದರು. ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲಿಯೇ ಹೊಸ ಇತಿಹಾಸವನ್ನು ನಿರ್ಮಿಸಿದರು. ಜಿಲ್ಲೆಯ ಕೆ.ಆರ್‌.ಪೇಟೆ ತಾಲೂಕಿನಲ್ಲಿ 22 ಸಾವಿರ ರೈತ ಕುಟುಂಬಗಳ 98 ಕೋಟಿ ರು. ಸಾಲಮನ್ನಾ ಆಗಿದೆ. ಇದು ಸಾಮಾನ್ಯ ವಿಷಯವಲ್ಲ. ರೈತರ ಹಿತಕ್ಕಾಗಿ ಕೈಗೊಂಡ ತೀರ್ಮಾನ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಭೆಯಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ, ಶಾಸಕರಾದ ಡಾ.ಕೆ.ಅನ್ನದಾನಿ, ಸಿ.ಎನ್‌.ಬಾಲಕೃಷ್ಣ, ಜಿಲಲಾ ಜೆಡಿಎಸ್‌ ಅಧ್ಯಕ್ಷ ಡಿ.ರಮೇಶ್‌, ಜಿಪಂ ಉಪಾಧ್ಯಕ್ಷೆ ಗಾಯತ್ರಿ, ಸದಸ್ಯರಾದ ರಾಮದಾಸು, ಬಿ.ಎಲ….ದೇವರಾಜು, ಜೆ.ಪ್ರೇಮಕುಮಾರಿ, ತಾಪಂ ಸದಸ್ಯ ವಿಜಯಕುಮಾರ್‌, ಎಪಿಎಂಸಿ ಅಧ್ಯಕ್ಷ ನಾಗರಾಜು, ಮಾಜಿ ಅಧ್ಯಕ್ಷ ಲೋಕೇಶ್‌, ಪುರಸಭೆ ಮಾಜಿ ಅಧ್ಯಕ್ಷ ಕೆ.ಟಿ.ಗಂಗಾಧರ್‌, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಜಾನಕಿರಾಂ, ಮುಖಂಡರಾದ ಬಸ್‌ ಕೃಷ್ಣೇಗೌಡ, ರಮೇಶ್‌, ನಾಗೇಶ್‌, ರಾಜೇನಹಳ್ಳಿ ಕುಮಾರಸ್ವಾಮಿ, ವಿ.ಮಂಜೇಗೌಡ, ಕೆ.ಎಸ್‌.ಸಂತೋಷ್‌ ಕುಮಾರ್‌ ಉಪಸ್ಥಿತರಿದ್ದರು.

click me!