'ಕುಮಾ​ರ​ಸ್ವಾಮಿ ಮತ್ತೆಂದು ಸಿಎಂ ಆಗಲ್ಲ '

By Kannadaprabha NewsFirst Published Dec 9, 2020, 11:17 AM IST
Highlights

ಮಾಜಿ ಸಿಎಂ ಜೆಡಿಎಸ್ ಮುಖಂಡ ಎಚ್ ಡಿ ಕುಮಾರಸ್ವಾಮಿ ರಾಜ್ಯದಲ್ಲಿ ಮತ್ತೆಂದು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲ್ಲ ಎಂದು ಭವಿಷ್ಯ ನುಡಿಯಲಾಗಿದೆ

ಕುದೂರು (ಡಿ.09):  ಎಚ್‌.ಡಿ.ಕುಮಾರಸ್ವಾಮಿಯವರು ಮತ್ತೆಂದೂ ಮುಖ್ಯಮಂತ್ರಿ ಆಗುವುದಿಲ್ಲ. ಹತ್ತು ಇಪ್ಪತ್ತು ಸ್ಥಾನ ಗೆದ್ದು ಇತರೆ ಪಕ್ಷಗಳನ್ನು ಬ್ಲಾಕ್‌ ಮೇಲ್ ಮಾಡುವುದು. ಅಧಿಕಾರಕ್ಕೆ ತಂದವರನ್ನು ದೂ​ರು​ವುದು ಅವರ ಹುಟ್ಟುಗುಣ. ಇಂತಹ ಉಸಿರು ಗಟ್ಟುವ ವಾತಾವರಣದಲ್ಲಿ ಕೆಲಸ ಮಾಡಲಾರದೆ ನಾನು ಜೆಡಿಎಸ್‌ ಪಕ್ಷದಿಂದ ಹೊರಬಂದು ಕಾಂಗ್ರೆಸ್‌ ಸೇರಿದೆ ಎಂದು ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ ಹೇಳಿದರು.

ಕುದೂರು ಗ್ರಾಮದ ಶ್ರೀ ಲಕ್ಷ್ಮೇ ಮದನಂತ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾನು ಮೊದಲ ಬಾರಿ ಬಿಜೆಪಿಯಲ್ಲಿ ಗೆದ್ದಿದ್ದೆ. ಕಾಂಗ್ರೆಸ್‌ ಪಕ್ಷದವರು ನನ್ನನ್ನು ಕೆರೆದರು. ಆದರೆ, ನಾನು ದೇವೇಗೌಡರು, ಕುಮಾರಸ್ವಾಮಿಯವರ ಬಲಪಡಿಸಬೇಕು ಎಂದು ಜೆಡಿಎಸ್‌ಗೆ ಬಂದು ಶಾಸಕನಾದೆ. 20 ತಿಂಗಳ ಸಮ್ಮಿಶ್ರ ಸರ್ಕಾರವೂ ಇತ್ತು. ಆದರೂ ನಾನು ಮಂತ್ರಿಯಾಗಲಿಲ್ಲ. ಬಿಜೆಪಿಯಲ್ಲೊ ಅಥವಾ ಕಾಂಗ್ರೆಸ್‌ನಲ್ಲೊ ಇಷ್ಟುಬಾರಿ ಗೆದ್ದು ಶಾಸಕನಾಗಿದ್ದರೆ ಮಂತ್ರಿಯಾಗಿರುತ್ತಿದ್ದೆ ಎಂದು ತಮ್ಮ ಹಣೆಬರಹ ಹೀಗಿದೆ ಎಂದು ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ ಜನರ ಮುಂದೆ ತಮ್ಮ ಅಳಲನ್ನು ತೋರಿಕೊಂಡರು.

'ದೇವೇಗೌಡ್ರು ತಮ್ಮ ಮಗನ ಮಾತು ಸರಿಯಿದೆಂದರೆ ನಾನೂ ಒಪ್ಪುತ್ತೇನೆ' .

ತ್ಯಾಗ ಮಾಡಿದವರಿಗೆ ಉನ್ನತಾಧಿಕಾರ: ಕುದೂರು ಪಟ್ಟಣವನ್ನು ಮಾದರಿಯಾಗಿ ರೂಪಿಸಬಹುದಿತ್ತು. ಆದರೆ ನಾನು ಗೆದ್ದಾಗಲೆಲ್ಲಾ ವಿರೋಧ ಪಕ್ಷದಲ್ಲೇ ಇದ್ದೇನೆ. ಆದರೆ ಮುಂದಿನ ಬಾರಿ ಕಾಂಗ್ರೆಸ್‌ ಪಕ್ಷ ಸರ್ಕಾರವನ್ನು ರಚಿಸುತ್ತದೆ. ಮಾಗಡಿ ತಾಲೂಕನ್ನು ಮಾದರಿಯನ್ನಾಗಿ ಮಾಡಲು ಪಂಚಾಯಿತಿ ಚುನಾವಣೆ ಮುನ್ನುಡಿಯನ್ನು ಬರೆಯಬೇಕಾಗಿದೆ. ತ್ಯಾಗದ ಮನೋಭಾವ ಇರುವ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ವಿವಿಧ ಸ್ಥಾನಗಳಲ್ಲಿ ಅಲಂಕರಿಸುತ್ತೀರಿ. ಆದ್ದರಿಂದ ಎಲ್ಲರೂ ಒಗ್ಗಟ್ಟಿನ ಮಂತ್ರ ಜಪಿಸಿ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.

ಸಭೆ ಉದ್ಘಾಟಿಸಿದ ಸಂಸದ ಡಿ.ಕೆ.ಸುರೇಶ್‌ ಮಾತನಾಡಿ, ಬಿಜೆಪಿ ಸರ್ಕಾರದ ದುರಾಡಳಿತವನ್ನು ಜನರು ನೋಡಿದ್ದಾರೆ. ಜೆಡಿಎಸ್‌ ಪಕ್ಷದ ಕುರಿತು ನಾನು ಮಾತನಾಡುವುದೇನೂ ಇಲ್ಲ. ಜನರ ಕಷ್ಟಕಟ್ಟಲೆಗಳನ್ನು ಹತ್ತಿರದಿಂದ ನೋಡಿ ಪರಿಹರಿಸುವ ಶಕ್ತಿಯನ್ನು ಕಾಂಗ್ರೆಸ್‌ ಪಕ್ಷ ಹೊಂದಿದೆ. ಪಂಚಾಯಿತಿ ಚುನಾವಣೆ ಎಂಪಿ ಚುನಾವಣೆಗಿಂತಲೂ ಕಷ್ಟಕರವಾದದ್ದು. ಜನರ ಒಲವನ್ನು ಸಂಪಾದಿಸಿಕೊಂಡಿದ್ದವ ಮಾತ್ರ ಗೆಲ್ಲಲು ಸಾಧ್ಯ. ಅದಕ್ಕಾಗಿ ಜನರ ಒಡನಾಟದಲ್ಲಿ ಇದ್ದು ಜನಸ್ನೇಹಿ ನಾಯಕರಾಗಿ ಬೆಳೆಯಿರಿ ಎಂದು ತಿಳಿಸಿದರು.

click me!