
ಹಾಸನ (ಜು.9): ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆ ದೂರವಿದ್ದರಿಂದ ಅದೇ ರೈಲಿನಲ್ಲಿದ್ದ ಹಾಸನದ ಶ್ರೀ ಧರ್ಮಸ್ಥಳ ಆಯುರ್ವೇದ ವೈದ್ಯಕೀಯ ಕಾಲೇಜಿನ 3 ಸ್ನಾತಕೋತ್ತರ ವಿದ್ಯಾರ್ಥಿನಿಯರು ತಮ್ಮ ಸಮಯಪ್ರಜ್ಞೆ ಮತ್ತು ಸೇವಾ ಮನೋಭಾವದ ಮೂಲಕ ಸುರಕ್ಷಿತವಾಗಿ ಹೆರಿಗೆ ಮಾಡಿಸಿ ತಾಯಿ ಹಾಗೂ ನವಜಾತ ಶಿಶುವಿನ ಜೀವ ಉಳಿಸಿದ್ದಾರೆ.
ನಗರದ ತಣ್ಣೀರುಹಳ್ಳದಲ್ಲಿರುವ ಎಸ್ಡಿಎಂ ವಿದ್ಯಾರ್ಥಿನಿಯರಾದ ಡಾ.ರಶ್ಮಿ ಬಿಳಗಿ, ಡಾ.ಲತಾಶ್ರೀ ಎನ್. ಮತ್ತು ಡಾ.ಶಾಹಿನ್ ಎಂ. ಅವರು ರಾಷ್ಟ್ರೀಯ ಮಟ್ಟದ ಸಮ್ಮೇಳನದಲ್ಲಿ ಭಾಗವಹಿಸಲು ಹಾಸನದಿಂದ ವಾರಣಾಸಿಗೆ ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಇದೇ ವೇಳೆ ಅವರಿದ್ದ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ಹಠಾತ್ತನೆ ತೀವ್ರ ಹೆರಿಗೆ ನೋವು ಆರಂಭವಾಗಿದ್ದು, ಮೂವರು ಮಹಿಳೆಯ ನೆರವಿಗೆ ಧಾವಿಸಿ ಸಹ ಪ್ರಯಾಣಿಕರ ಸಹಕಾರದೊಂದಿಗೆ ಹೆರಿಗೆ ಪ್ರಕ್ರಿಯೆಯನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಿಸಿದ್ದಾರೆ.