ನಿಜಗುಣಪ್ರಭು ಸ್ವಾಮೀಜಿಗೆ ಕೊಲೆ ಬೆದರಿಕೆ: ಶ್ರೀಗಳಿಗೆ ಗನ್‌ಮ್ಯಾನ್‌ ಭದ್ರತೆ

By Kannadaprabha NewsFirst Published Jun 6, 2020, 9:14 AM IST
Highlights

ಸರ್ಕಾರ ಭಕ್ತರು ನನ್ನ ಪರವಾಗಿ ಮಾಡಿಕೊಂಡ ಮನವಿಗೆ ಸರ್ಕಾರ ಸ್ಪಂದನೆ: ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ| ಇದುವರೆಗೂ ನನಗೆ ನೇರವಾಗಿ ಯಾವುದೇ ಕರೆಗಳು ಬಂದಿಲ್ಲ| ಅನಾಮಧೇಯ ಪತ್ರಗಳು ಬಂದಿವೆ|

ಮುಂಡರಗಿ(ಜೂ.06): ಇತ್ತೀಚಿನ ದಿನಗಳಲ್ಲಿ ತಮಗೆ ಕೊಲೆ ಬೆದರಿಕೆ, ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ನಿಂದನೆಗಳು ಯಥೇಚ್ಚವಾಗಿ ಬರುತ್ತಿವೆ. ಅದರ ಬಗ್ಗೆ ಬೆಳಗಾವಿ, ಮುಂಡರಗಿ ಸೇರಿದಂತೆ  ರಾಜ್ಯಾಧ್ಯಂತ ವಿವಿಧ ಜಿಲ್ಲೆಗಳಲ್ಲ ಭಕ್ತರ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಸರ್ಕಾರವೂ ಸಹ ಜವಾಬ್ದಾರಿ ತೆಗೆದುಕೊಂಡಿದೆ. ನನ್ನ ಪರವಾಗಿ ಭಕ್ತರು ಮನವಿ ಮಾಡಿಕೊಂಡಿದ್ದಕ್ಕೆ ಸರ್ಕಾರ ಸ್ಪಂದಿಸಿದೆ ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದ್ದಾರೆ. 

ಅವರು ಶುಕ್ರವಾರ ಮುಂಡರಗಿ ತೋಂಟದಾರ್ಯ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ನನ್ನ ವಿಚಾರಗಳು ವೈಚಾರಿಕ ಚಿಂತನೆಯ ವಿಚಾರಗಳಾಗಿರುತ್ತವೆಯೇ ವಿನಹ ದ್ವೇಶದ ಚಿಂತನೆಗಳಾಗಿರುವುದಿಲ್ಲ. ಆದರೆ ಅವುಗಳನ್ನು ದ್ವೇಶಕ್ಕೆ ತೆಗೆದುಕೊಂಡು ಹೋಗುವುದು, ಕೊಲೆ ಬೆದರಿಕೆ ಹಾಕುವುದು, ಸಾವಿನ ಸಮೀಪಕ್ಕೆ ತೆಗೆದುಕೊಂಡು ಹೋಗುವಂತದ್ದು, ಜಾತಿ ಸಮೀಕರಣಗೊಳಿಸುವಂತಹ ಕೆಟ್ಟ ಮನೋಭಾವನೆಯನ್ನು ನಾವಿಂದು ಕಾಣುತ್ತಿದ್ದೇವೆ. ಆದ್ದರಿಂದ ನನ್ನದೊಂದು ವಿನಂತಿ ಏನೆಂದರೆ ನಾವು ಎಂದೂ ಸಹ ಬಸವಾದಿ ಪ್ರಮಥರ ವೈಚಾರಿಕ ಸಿದ್ದಾಂತದ ತಳಹದಿಯ ಮೇಲೆಯೇ ಮಾತನಾಡಿದ್ದೇವೆಯೇ ಹೊರತು ಅದರ ಮೇಲೆ ಮಾತನಾಡಿಲ್ಲ. 

ಜೀವಬೆದರಿಕೆ ಪತ್ರ: ನಿಜಗುಣಾನಂದ ಸ್ವಾಮೀಜಿ ಪ್ರತಿಕ್ರಿಯೆ?

ಬಹಳ ಜನ ನನಗೆ ಬಾಹ್ಮಣರ ವಿರೋಧಿ ಎಂದು ಹೇಳುತ್ತಾರೆ. ನಾನೆಂದೂ ಬ್ರಾಹ್ಮಣರ ವಿರೋಧಿಯಲ್ಲ, ಆ ಕರ್ಮಠತೆಯ ವಿರೋಧಿ. ಈ ಧರ್ಮಕ್ಕೆ ಬ್ರಾಹ್ಮಣನಾದ ಮಧುವರಸರೂ ಪ್ರಾಣ ಕೊಟ್ಟಿದ್ದಾರೆ, ದಲಿತರಾದ ಹರಳಯ್ಯನವರೂ ಪ್ರಾಣ ಕೊಟ್ಟಿದ್ದಾರೆ. ಹೀಗಾಗಿ ನಾವಾಗಲಿ, ಗದುಗಿನ ಜಗದ್ಗುರುಗಳಾಗಲಿ, ಬಸವಣ್ಣನವರಾಗಲಿ, ಬ್ರಾಹ್ಮಣರ ವಿರೋಧಿ ಅಥವಾ ದಲಿತರ ವಿರೋಧಿಗಳಾಗಲಿ ಅಲ್ಲ. ಅಥವಾ ಮುಸ್ಲೀಮರ ಪರವಾದಿಗಳೂ ಅಲ್ಲ.  ಜೀವದಯ ಪರವಾದಿಗಳು ಎನ್ನುವಂತಹ ವಿಚಾರವನ್ನು ಇಟ್ಟುಕೊಂಡು ನಾವು ಮಾತನಾಡುತ್ತಿದ್ದೇವೆ. ಸಮಾಜದಲ್ಲಿ ಇಂತಹ ಆಗು ಹೋಗುಗಳು ನಡೆಯುತ್ತಲೇ ಇರುತ್ತವೆ. ಆದರೂ ಎದೆಗುಂದದೇ ಊರಿನವರ ಸಹಕಾರ, ಸಹ ಭಕ್ತರ ಸಹಕಾರ, ಪ್ರೀತಿ, ವಿಶ್ವಾಸ, ಮಾಧ್ಯಮದವರ ಸಹಕಾರ, ಕಾನೂನಿನ ಸಹಕಾರದಿಂದಾಗಿ ನಾವು ಧೈರ್ಯದಿಂದ ಕೆಲಸ ಮಾಡುತ್ತಿದೇವೆ. 

ಇವೆಲ್ಲವನ್ನು ಸರ್ಕಾರದ ಗ್ರಹ ಇಲಾಖೆಯ ಗಮನಕ್ಕೆ ತೆಗೆದುಕೊಂಡು ಬಂದಿದ್ದು, ಸರ್ಕಾರವೂ ಸಹ ನಮ್ಮ ಮನವಿಗೆ ಸ್ಪಂದಿಸಿದ್ದು, ಈಗಾಗಲೇ ಸರ್ಕಾರದಿಂದ ಇಬ್ಬರು ಗನ್ ಮ್ಯಾನ್ ಗಳನ್ನು ನೀಡಿದ್ದು, ಪ್ರತಿದಿನವೂ ಸಹ ಇಲಾಖೆ ಪರಿಶೀಲನೆ ನಡೆಸುತ್ತಿದೆ ಎಂದರು.
 

click me!