ಗುಂಬಜ್ ಬಸ್‌ ಶೆಲ್ಟರ್‌ ವಿವಾದಕ್ಕೆ ಟ್ವಿಸ್ಟ್: ಕಿಡಿಗೇಡಿಗಳಿಂದ ಸುಳ್ಳು ಸುದ್ದಿ ಎಂದ ಶಾಸಕ ರಾಮದಾಸ್!

By Ravi JanekalFirst Published Nov 16, 2022, 8:27 AM IST
Highlights

ಮೈಸೂರಿನಲ್ಲಿ ಗುಂಬಜ್ ಮಾದರಿ ಬಸ್ ನಿಲ್ದಾಣ ನಿರ್ಮಾಣದ ವಿಚಾರ ವಿವಾದ ಸ್ವರೂಪ ಪಡೆದಿದೆ. ಸಂಸದ ಪ್ರತಾಪ್ ಸಿಂಹ ತಂಗುದಾಣ ಮಸೀದಿ ವಿನ್ಯಾಸದಲ್ಲಿದೆ ಅದನ್ನು ಒಡೆದುಹಾಕಲಾಗುವುವುದು ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಕೆ.ಆರ್.ಕ್ಷೇತ್ರದ ಶಾಸಕ ಎಸ್‌.ಎ.ರಾಮದಾಸ್ ತಿರುಗೇಟು ನೀಡಿದ್ದಾರೆ. .

ಮೈಸೂರು (ನ.16) : ಮೈಸೂರಿನಲ್ಲಿ ಗುಂಬಜ್ ಮಾದರಿ ಬಸ್ ನಿಲ್ದಾಣ ನಿರ್ಮಾಣದ ವಿಚಾರ ವಿವಾದ ಸ್ವರೂಪ ಪಡೆದಿದೆ. ಸಂಸದ ಪ್ರತಾಪ್ ಸಿಂಹ ತಂಗುದಾಣ ಮಸೀದಿ ವಿನ್ಯಾಸದಲ್ಲಿದೆ ಅದನ್ನು ಒಡೆದುಹಾಕಲಾಗುವುವುದು ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಕೆ.ಆರ್.ಕ್ಷೇತ್ರದ ಶಾಸಕ ಎಸ್‌.ಎ.ರಾಮದಾಸ್ ತಿರುಗೇಟು ನೀಡಿದ್ದಾರೆ. .

ಮೈಸೂರು ಪಾರಂಪರಿಕ ನಗರ. ಇದರ ಮಹತ್ವ ಸಾರುವ ದೃಷ್ಟಿಯಿಂದ  ಬಸ್ ತಂಗುದಾಣ ನಿರ್ಮಿಸಲಾಗುತ್ತಿದೆ ಹೊರತು ಯಾವುದೇ ಧರ್ಮದ ಆಧಾರದ ಮೇಲೆ ಅಲ್ಲ. ಮಸೀದಿ ವಿನ್ಯಾಸದಲ್ಲಿ ನಿರ್ಮಾಣವಾಗುತ್ತಿದೆ ಎಂಬುದು ಸುಳ್ಳು ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ತಜ್ಞರ ಸಮಿತಿಗೆ ಒತ್ತಾಯಿಸಿದ್ದಾರೆ.

ಗುಂಬಜ್‌ ಒಡೆಯುತ್ತೇನೆ ಅನ್ನುವುದಕ್ಕೆ ಪ್ರತಾಪ್‌ ಸಿಂಹ ಯಾರು?: ಸಿದ್ದರಾಮಯ್ಯ

ಕ್ಷೇತ್ರದ ವಿವಿಧ ಸ್ಥಳಗಳಲ್ಲಿ ವಿವಿಧ ವಿನ್ಯಾಸಗಳಲ್ಲಿ ಶಾಸಕರ ಅನುದಾನದಲ್ಲಿ ರೂ 10 ಲಕ್ಷ ವೆಚ್ಚದಲ್ಲಿ ಬಸ್ ತಂಗುದಾಣ ನಿರ್ಮಾಣವಾಗುತ್ತಿದ್ದು, ಇದರ ಕಾಮಗಾರಿ ಪ್ರಗತಿಯಲ್ಲಿದೆ  ಈಗಾಗಲೇ ಶೇ.60ರಷ್ಟು ಕಾಮಗಾರಿ ಮುಗಿದಿದೆ. ಊಟಿ ರಸ್ತೆಯಲ್ಲಿ ಬರುವ ಬಸ್ ತಂಗುದಾಣವನ್ನು ಅರಮನೆ ಮಾದರಿಯಲ್ಲಿ ವಿನ್ಯಾಸ ಮಾಡಲಾಗುತ್ತಿದೆ. ಆದರೆ ಈ ಕಾಮಗಾರಿಯಲ್ಲಿ ಗುತ್ತಿಗೆದಾರನೊಬ್ಬ ಮುಸ್ಲಿಂನಾಗಿದ್ದು ಮಸೀದಿ ರೀತಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು  ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. 

ಮಸೀದಿ ರೀತಿ ನಿರ್ಮಾಣವಾಗುತ್ತಿದೆ ಎಂಬುದು ಸುಳ್ಳು.  ಈ ಬಗ್ಗೆ ಮೈಸೂರು ನಗರದ ಪೊಲೀಸ್ ಕಮಿಷನರ್ ಗೆ ಪತ್ರದ ಮೂಲಕ ದೂರು ನೀಡಿದ್ದೇನೆ. ಮೈಸೂರಿನಲ್ಲಿ ಈಗಾಗಲೇ ಹಲವಾರು ಸ್ಥಳಗಳಲ್ಲಿ ಇದೇ ಮಾದರಿಯ ಬಸ್ ತಂಗುದಾಣ ಆಗಿದೆ‌. ಅದರ ವಿನ್ಯಾಸದ ಆದಾರದ ಮೇಲೆ ನಮ್ಮ ಕ್ಷೇತ್ರದಲ್ಲಿ ನಿರ್ಮಾಣ ಆಗುತ್ತಿದೆ‌. ಕಾಮಗಾರಿಯನ್ನು ಗುತ್ತಿಗೆದಾರ ಮಹದೇವ್ ದಂತ ಕನ್ಸ್ಟ್ರಕ್ಷನ್ ಎಂಬ ಹೆಸರಿನಲ್ಲಿ ನಿರ್ಮಿಸುತಿದ್ದಾರೆ.

2 ದಿನದಲ್ಲಿ ಬಸ್‌ ಶೆಲ್ಟರ್‌(ಗುಂಬಜ್‌) ನಾನೇ ತೆರವು ಮಾಡ್ತೇನೆ: ಪ್ರತಾಪ್‌ ಸಿಂಹ

ಸಂಸದ ಪ್ರತಾಪ ಸಿಂಹ ಚಾನೆಲ್ ಒಂದಕ್ಕೆ ಹೇಳಿಕೆ ನೀಡಿದ ನಂತರ ರಾತ್ರೋರಾತ್ರಿ ಕಳಶ ಅಳವಡಿಸಲಾಗಿದೆ ಎಂಬುದು ಸುಳ್ಳು.
ಕಳೆದ ವಾರವೇ ಇದನ್ನು ಅಳವಡಿಸಲಾಗಿದೆ ಅದರ  ಸಾಕ್ಷಿಗೆ ಗೂಗಲ್ ಇಮೇಜ್ ಬಿಡುಗಡೆ ಮಾಡಿರುವ ಶಾಸಕರು, ಇದರಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದರೆ ತಜ್ಞರ ಸಮಿತಿ ಬಂದು ಪರಿಶೀಲಿಸಿ ವರದಿ ನೀಡಿದರೆ ಬದಲಾಯಿಸಿಕೊಳ್ಳುತ್ತೇವೆ. ಎಂದು ಶಾಸಕ ರಾಮದಾಸ್ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.

 ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದಿಂದ  ನೋಟಿಸ್

ಅನಧಿಕೃತವಾಗಿ ಕಟ್ಟಿರುವ ಬಸ್ ನಿಲ್ದಾಣದ ಶೆಲ್ಟರ್ ತೆರವುಗೊಳಿಸುವಂತೆ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದಿಂದ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ನೋಟಿಸ್ ನೀಡಲಾಗಿದೆ. ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಂದ ನೋಟಿಸ್ ಕಳಿಸಲಾಗಿದ್ದು, ರಾಷ್ಟ್ರೀಯ ಹೆದ್ದಾರಿಯ ಬಲ ಭಾಗದಲ್ಲಿ ತಂಗುದಾಣ ನಿರ್ಮಾಣ ಮಾಡಲಾಗಿದೆ.
ಈ ಹಿಂದೆ ಅನೇಕ ಬಾರಿ ಕೆಲಸವನ್ನು ನಿಲ್ಲಿಸಿದ್ದರೂ ಸಹ ಬಸ್ ನಿಲ್ದಾಣವನ್ನು ಮತ್ತೆ ನಿರ್ಮಿಸಲಾಗಿದೆ. ಹೀಗಾಗಿ ನೋಟಿಸ್ ತಲುಪಿದ ಒಂದು ವಾರದ ಒಳಗೆ ವಿವಾದಾತ್ಮಕ ನಿಲ್ದಾಣವನ್ನು ತೆರವುಗೊಳಿಸುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ. 

ಸದ್ಯ ಇದು ಕೋಮು ಸಮಸ್ಯೆಯಾಗಿ ಪರಿವರ್ತನೆಯಾಗಿದೆ.ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾಯ್ದೆ ಅನ್ವಯ ಇದನ್ನೇ ನೋಟಿಸ್ ಎಂದು ಪರಿಗಣಿಸಬೇಕು. ಇಲ್ಲ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾಯ್ದೆ 2003ರ ಅನ್ವಯ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದೆ. ನೋಟಿಸ್ ಈಗಾಗಲೇ ಪಾಲಿಕೆ ಆಯುಕ್ತರ ಕೈ ಸೇರಿದೆ. ಪ್ರಾಧಿಕಾರದ ಮುಂದಿನ ನಡೆ ಏನು ಎಂದು ಕಾದುನೋಡಬೇಕು.

click me!