Tumakuru: ಎಚ್ಎಎಲ್‌ಗೆ ಜಮೀನು ನೀಡಿದ್ದ ರೈತರಿಗೆ ಪರ್ಯಾಯ ಭೂಮಿ ನೀಡಿದ ಸರ್ಕಾರ

By Kannadaprabha NewsFirst Published Sep 27, 2024, 11:37 PM IST
Highlights

ಎಚ್ಎಎಲ್ ಘಟಕಕ್ಕೆ ಭೂಮಿ ನೀಡಿದ್ದ ರೈತರಿಗೆ ಸರ್ಕಾರ ಪರ್ಯಾಯ ಭೂಮಿ ನೀಡಿದ್ದು ಗುರುವಾರ ಜಿಲ್ಲಾಧಿಕಾರಿಗಳ ಆದೇಶದಂತೆ ತಾಲೂಕು ಅಧಿಕಾರಿಗಳು ರೈತರಿಗೆ ಭೂಮಿ ಹದ್ದುಬಸ್ತು ಮಾಡಿಕೊಟ್ಟರು. 

ಗುಬ್ಬಿ (ಸೆ.27): ಎಚ್ಎಎಲ್ ಘಟಕಕ್ಕೆ ಭೂಮಿ ನೀಡಿದ್ದ ರೈತರಿಗೆ ಸರ್ಕಾರ ಪರ್ಯಾಯ ಭೂಮಿ ನೀಡಿದ್ದು ಗುರುವಾರ ಜಿಲ್ಲಾಧಿಕಾರಿಗಳ ಆದೇಶದಂತೆ ತಾಲೂಕು ಅಧಿಕಾರಿಗಳು ರೈತರಿಗೆ ಭೂಮಿ ಹದ್ದುಬಸ್ತು ಮಾಡಿಕೊಟ್ಟರು. ಇಲ್ಲಿಗೆ ಸಮೀಪದ ಬಿದರೆಕಾವಲ್ ವ್ಯಾಪ್ತಿಯ ಸರ್ಕಾರಿ ಪ್ರದೇಶದಲ್ಲಿ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಹಾಗೂ ತಹಶೀಲ್ದಾರ್ ಆರತಿ ಬಿ. ನೇತೃತ್ವದಲ್ಲಿ ಡಿ ವೈ ಎಸ್ಪಿ ಶೇಖರ್ ಸಮ್ಮುಖದಲ್ಲಿ ಜಾಗವನ್ನು ಗುರ್ತಿಸಿಕೊಡುವ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು.

ಬಿದರೆಹಳ್ಳ ಕಾವಲ್ ಗ್ರಾಮಸ್ಥರು ತಮ್ಮ ಜಮೀನು ಎಚ್ಎಎಲ್ ಘಟಕಕ್ಕೆ ನೀಡಿದ್ದರಿಂದ ಪರ್ಯಾಯ ಜಮೀನು ಕೊಡಬೇಕಾಗಿದ್ದು ಆದ್ಯ ಕರ್ತವ್ಯವಾಗಿದ್ದು, ಅದರಂತೆ ಬಿದರೆಹಳ್ಳ ಕಾವಲ್ ಗ್ರಾಮದ ಸರ್ವೆ ನಂಬರ್ ನಂತೆ ಜಮೀನನ್ನು ಒಟ್ಟಾಗಿ ಸ್ಥಳಾಂತರಿಸಿ ಪ್ರತ್ಯೇಕ ಗಡಿ ಗುರ್ತಿಸಿ ಕೊಟ್ಟಿರದ ಕಾರಣ ಹಲವು ವರ್ಷಗಳಿಂದ ಸರ್ಕಾರದ ಮೇಲೆ ಒತ್ತಡ ತಂದು ಗುರುವಾರ ಆ ಕಾರ್ಯ ನಡೆಯಿತು. ಗಡಿ ಗುರ್ತಿಸಿ ಕೊಡಲು ತಾಲೂಕು ಆಡಳಿತ ಮುಂದಾದ ಸಂದರ್ಭದಲ್ಲಿ ಜಮೀನನ್ನು ಕಳೆದುಕೊಂಡ ರೈತರು ನಮ್ಮ ಜಮೀನನ್ನು ಬಿಟ್ಟು ಕೊಡುವುದಿಲ್ಲ. 

Latest Videos

ಹಲವು ವರ್ಷಗಳಿಂದ ಉಳುಮೆ ಮಾಡುತ್ತಿದ್ದ ನಮ್ಮ ಜಮೀನನ್ನು ಅದು ಹೇಗೆ ಬೇರೆಯವರಿಗೆ ಕೊಡಲು ಸಾಧ್ಯ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಹಲವು ವರ್ಷಗಳಿಂದ ಈ ಸಮಸ್ಯೆ ಇದ್ದು ಇಲ್ಲಿಯವರೆಗೂ ಸುಮ್ಮನೆ ಇದ್ದದ್ದು ಏಕೆ? ನಿಮ್ಮ ಬಳಿ ಇದಕ್ಕೆ ಸಂಬಂಧಿಸಿದ ದಾಖಲೆಗಳು ಇಲ್ಲ. ಯಾವುದೇ ಕಾರಣಕ್ಕೂ ಒಂದು ಗಂಟೆಯೂ ಕಾಲಾವಕಾಶ ಕೊಡುವುದಿಲ್ಲ ಎಂದು ಹೇಳಿ ತಮ್ಮ ಕಾರ್ಯ ಆರಂಭಿಸಿ ರೈತರ ಜಮೀನಿನ ಗಡಿಯನ್ನು ಗುರ್ತಿಸಿ ಕೊಟ್ಟರು. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ತಹಸೀಲ್ದಾರ್ ಬಿ. ಆರತಿ, ನಿಟ್ಟೂರು ಹೋಬಳಿ ಬಿದರೆಹಳ್ಳ ಕಾವಲ್ ಗ್ರಾಮಸ್ಥರ ಜಮೀನು ಎಚ್ಎಎಲ್ ಘಟಕಕ್ಕೆ ಭೂಸ್ವಾಧೀನದ ಆದ ಹಿನ್ನೆಲೆ ಅದಕ್ಕೆ ಪರ್ಯಾಯವಾಗಿ ಸರ್ವೆ ನಂಬರ್ 200, ರಿಂದ 207, 196, 112, 114, 124,126,198 ನ್ನು ಸರ್ವೆ ನಂಬರ್ ನಲ್ಲಿ ಮಂಜೂರು ಮಾಡಿದ್ದು, ಈ ಪೈಕಿ 36 ಮಂದಿಗೆ ಜಮೀನನ್ನು ಒಟ್ಟಾಗಿ ಸ್ಥಳಾಂತರಿಸಿದ್ದೇವೆ. 

ಕಿದ್ವಾಯಿ ಸರ್ಕಾರಿ ಆಸ್ಪತ್ರೆಯಲ್ಲಿ ಥಲಸ್ಸೇಮಿಯ ಬಾಲಕನಿಗೆ ಮೊದಲ ಬಾರಿ ಅಸ್ಥಿಮಜ್ಜೆ ಚಿಕಿತ್ಸೆ ಯಶಸ್ವಿ: ಸಚಿವರ ಮೆಚ್ಚುಗೆ

ಈ ಜಾಗವನ್ನು ಪ್ರತ್ಯೇಕವಾಗಿ ಗುರ್ತಿಸಿ ಕೊಡದೆ ಇದ್ದ ಕಾರಣ ಆಜುಬಾಜಿನ ಗ್ರಾಮಸ್ಥರು ಹಾಗೂ ರೈತರ ಜಗಳ ನಡೆಯುತ್ತಿದ್ದು. ಈ ಹಿನ್ನೆಲೆ ಜಮೀನನ್ನು ಗುರ್ತಿಸಿ ಕೊಡುವಂತೆ ಮನವಿ ಸಲ್ಲಿಸಲಾಗಿತ್ತು. ಅದರಂತೆ ಸರ್ಕಾರವು ಸೂಚಿಸಿದ ತರುವಾಯ ಜಿಲ್ಲಾಧಿಕಾರಿಗಳು ಕಾನೂನಿನ ಅಡಿಯಲ್ಲಿ ಗಡಿಯನ್ನು ಗುರ್ತಿಸಿ ಕೊಡಲು ತಾಲೂಕು ಆಡಳಿತಕ್ಕೆ ಸೂಚಿಸಿದ್ದರು. ಅವರ ಆದೇಶದಂತೆ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು. ಈ ವೇಳೆ ಡಿ ವೈ ಎಸ್ಪಿ ಶೇಖರ್, ಎಡಿಎಲ್ ಆರ್ ತಿಮ್ಮಯ್ಯ, ವೃತ್ತ ನಿರೀಕ್ಷಕ ಗೋಪಿನಾಥ್, ಕಂದಾಯ ನಿರೀಕ್ಷಕ ಮೋಹನ್, ಸರ್ವೇಯರ್ ನಿಜಗುಣಪ್ಪ ಸೇರಿದಂತೆ ಇತರರಿದ್ದರು.

click me!