ಎರಡು ಜಿಲ್ಲೆಯ ರೈತರಿಗೆ ಸುಮಾರು 20 ಸಾವಿರ ಹಸು ವಿತರಣೆ ಯೋಜನೆ ಘೋಷಿಸಿದ ರಾಜ್ಯ ಸರ್ಕಾರ

Published : Apr 26, 2026, 06:02 AM IST
Cows

ಸಾರಾಂಶ

ಬೆಳಗಾವಿಯಲ್ಲಿ ವಿಶ್ವ ಪಶುವೈದ್ಯಕೀಯ ದಿನಾಚರಣೆಯಂದು ಕಾಲು-ಬಾಯಿ ರೋಗ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ವೇಳೆ, ಪಶು ಸಂಗೋಪನೆ ಸಚಿವರು 2 ಜಿಲ್ಲೆಗಳ ರೈತರಿಗೆ ಶೇ.25ರ ಸಬ್ಸಿಡಿಯೊಂದಿಗೆ 20 ಸಾವಿರ ಹಸುಗಳನ್ನು ವಿತರಿಸುವ ಯೋಜನೆಯನ್ನು ಘೋಷಿಸಿದರು.

ಬೆಳಗಾವಿ: ಗ್ರಾಮೀಣ ಭಾಗದ ಜನರಿಗೆ ಹೈನುಗಾರಿಕೆ ಆದಾಯದ ಪ್ರಮುಖ ಮೂಲವಾಗಿದ್ದು, ಸರ್ಕಾರದಿಂದ ಈ ಕ್ಷೇತ್ರಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಮಹಾಂತೇಶ ನಗರದ ಸ್ಪೇಷಾಲಿಟಿ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ವಿಶ್ವ ಪಶುವೈದ್ಯಕೀಯ ದಿನಾಚರಣೆ ಅಂಗವಾಗಿ 9ನೇ ಸುತ್ತಿನ ಕಾಲು-ಬಾಯಿ ರೋಗ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 

20 ಸಾವಿರ ಹಸುಗಳನ್ನು ವಿತರಿಸುವ ಯೋಜನೆ

ರಾಜ್ಯದಲ್ಲಿ ದಿನಕ್ಕೆ 70-80 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದ್ದು, ಸರ್ಕಾರದ ಪ್ರೋತ್ಸಾಹದಿಂದ ಇದು 1 ಕೋಟಿಗೂ ಹೆಚ್ಚು ಲೀಟರ್‌ಗೆ ಏರಿಕೆಯಾಗಿದೆ. ಬಡ ರೈತರಿಗೆ ಹಸು ಖರೀದಿಸಲು ಅನುಕೂಲವಾಗಲು ಶೇ.25 ಸಬ್ಸಿಡಿ ನೀಡಲಾಗಿದ್ದು, ಬೆಳಗಾವಿ ಮತ್ತು ಕಲಬುರಗಿ ಜಿಲ್ಲೆಗಳಿಗೆ ಸುಮಾರು 20 ಸಾವಿರ ಹಸುಗಳನ್ನು ವಿತರಿಸುವ ಯೋಜನೆ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಜಾನುವಾರುಗಳ ಆರೋಗ್ಯ ರಕ್ಷಣೆಗಾಗಿ ಲಸಿಕಾ ಕಾರ್ಯಕ್ರಮ ಅತ್ಯಂತ ಅಗತ್ಯವಾಗಿದೆ. ಪ್ರತಿಯೊಂದು ಗ್ರಾಮ ಹಾಗೂ ಕುಟುಂಬಕ್ಕೂ ಇದರ ಪ್ರಯೋಜನ ತಲುಪಬೇಕು ಎಂದರು.

ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ಹೈನುಗಾರಿಕೆ ಮಹಿಳೆಯರೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಸರ್ಕಾರದ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಬೇಕು. ಎಲ್ಲ ಜಾನುವಾರುಗಳಿಗೆ ಸೂಕ್ತ ಲಸಿಕೆ ನೀಡುವಂತೆ ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ ಶಾಸಕ ಆಸೀಫ್ ಸೇಠ್, ಪಶುಸಂಗೋಪನೆಯನ್ನು ಉತ್ತೇಜಿಸಿ ಜಾನುವಾರುಗಳ ಸಮರ್ಪಕ ಆರೈಕೆ ಮಾಡಬೇಕು ಎಂದು ತಿಳಿಸಿದರು.

ಲಸಿಕಾ ಕಾರ್ಯಕ್ರಮ ಯಶಸ್ವಿ

ಪಶುಪಾಲನೆ ಇಲಾಖೆ ಆಯುಕ್ತ ಶಿಲ್ಪಾ ನಾಗ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಾದ್ಯಂತ ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಗಣೇಶ ಹುಕ್ಕೇರಿ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಉಪ ಮೇಯರ್‌ ಹನುಮಂತ ಕೊಂಗಾಲಿ, ಪಶು ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಶಿವಶರಣಪ್ಪ ಯಲಗೋಡ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ನಿರ್ದೇಶಕ ಡಾ.ಪಿ.ಶ್ರೀನಿವಾಸು, ಅಪರ ನಿರ್ದೇಶಕ ಡಾ.ಶಿವರುದ್ರಪ್ಪ, ಕೆ.ಎಲ್.ಅಪರ ನಿರ್ದೇಶಕ ಡಾ.ಪ್ರಸಾದ ಮೂರ್ತಿ, ಪೊಲೀಸ್ ಆಯುಕ್ತ ಭೂಷಣ್ ಬೊರಸೆ, ಜಿಪಂ ಸಿಇಒ ರಾಹುಲ್ ಶಿಂಧೆ, ಜಂಟಿ ನಿರ್ದೇಶಕ ಡಾ.ಹೆಚ್.ನಾಗರಾಜ್, ಬೆಳಗಾವಿ ಹಾಲು ಒಕ್ಕೂಟ ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರೀಕಾಂತ.ವಿ.ಎನ್, ಅಧಿಕಾರಿಗಳು ಉಪಸ್ಥಿತರಿದ್ದರು

PREV
Read more Articles on
click me!

Recommended Stories

ಪ್ರಜ್ಞಾಹೀನ ಸ್ಥಿತಿಯಲ್ಲಿ ಸಚಿವ ಹಿರಿಯೂರು ಸುಧಾಕರ್‌; ಆಸ್ಪತ್ರೆಗೆ ಭೇಟಿ ನೀಡಿ ವಿವರ ಪಡೆದ ಸಿಎಂ
ಚಿಕ್ಕಬಳ್ಳಾಪುರದ ವಿದ್ಯಾರ್ಥಿ ಜನಿವಾರಕ್ಕೆ ಕತ್ತರಿ; ವಾರದ ಹಿಂದೆ ಉಪನಯನ ಆದವಗೆ ಅಪಮಾನ