ರಾಜ್ಯ ಸರ್ಕಾರವು ಅಂಗವಿಕಲ ವಿದ್ಯಾರ್ಥಿಗಳ ಶಿಕ್ಷಣ ನೀತಿಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿದೆ| ಯಾವುದೇ ಅಂಗವಿಕಲ ಮಗು ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳಲಾಗುತ್ತಿದೆ| ಅಂತಹ ಮಕ್ಕಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ|
ಬೆಂಗಳೂರು(ಡಿ.12): ಅಂಗವಿಕಲ ಮಕ್ಕಳ ಶೈಕ್ಷಣಿಕ ಸೌಲಭ್ಯಗಳಿಗಾಗಿ ಬಜೆಟ್ನಲ್ಲಿ ಸರ್ಕಾರಗಳು ಪ್ರತ್ಯೇಕ ಅನುದಾನ ಮೀಸಲಿಡಬೇಕು, ಅಂಗವಿಕಲ ಹಕ್ಕುಗಳ ಕಾಯ್ದೆ 2016ಕ್ಕೆ ಹೊಂದಾಣಿಕೆಯಾಗುವಂತೆ ಆರ್ಟಿಇ ಕಾಯ್ದೆಗೆ ತಿದ್ದುಪಡಿ ತರಬೇಕು ಎಂಬುದು ಸೇರಿದಂತೆ ಅಂಗವಿಕಲ ಮಕ್ಕಳ ಸಮಗ್ರ ಅಭಿವೃದ್ಧಿಗೆ ಯುನೆಸ್ಕೋ ತನ್ನ ವರದಿಯಲ್ಲಿ ಪ್ರಮುಖ ಹತ್ತು ಶಿಫಾರಸುಗಳನ್ನು ಮಾಡಲಾಗಿದೆ.
ಯುನೆಸ್ಕೋ ಮತ್ತು ಸರ್ವ ಶಿಕ್ಷಣ ಅಭಿಯಾನದಿಂದ ನಗರದ ಶಿಕ್ಷಣಕರ ಸದನದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಈ ವರದಿಯನ್ನು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರವು ಅಂಗವಿಕಲ ವಿದ್ಯಾರ್ಥಿಗಳ ಶಿಕ್ಷಣ ನೀತಿಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿದೆ. ಯಾವುದೇ ಅಂಗವಿಕಲ ಮಗು ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳಲಾಗುತ್ತಿದೆ. ಅಂತಹ ಮಕ್ಕಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಎಲ್ಲ ಶಾಲೆಗಳಲ್ಲೂ ದಿವ್ಯಾಂಗ ಮಕ್ಕಳನ್ನು ಸಾಮಾನ್ಯ ವಿದ್ಯಾರ್ಥಿಗಳಂತೆ ಉಪಚರಿಸಬೇಕು. ಇತರೆ ಸಾಮಾನ್ಯ ವಿದ್ಯಾರ್ಥಿಗಳ ಜತೆ ವಿಶೇಷ ಚೇತನ ಮಕ್ಕಳು ಬೆರೆಯಲು ಅವಕಾಶ ನೀಡಬೇಕು. ಅವರನ್ನು ಪ್ರತ್ಯೇಕ ದೃಷ್ಟಿಯಿಂದ ನೋಡಬಾರದು ಎಂದು ತಿಳಿಸಿದರು.
ಅಂಗವಿಕಲ ಮಕ್ಕಳ ಶ್ರೇಯೋಭಿವೃದ್ಧಿಗೆ ಯುನೆಸ್ಕೋ ತನ್ನ ವರದಿಯಲ್ಲಿ ಮಾಡಿರುವ ಶಿಫಾರಸುಗಳು ಪೂರಕವಾಗಿವೆ. ಅವುಗಳನ್ನು ರಾಜ್ಯದಲ್ಲಿ ಜಾರಿಗೊಳಿಸಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಅಂಗವಿಕಲರ ಅಧಿನಿಯಮದ ಆಯುಕ್ತ ವಿ.ಎಸ್.ಬಸವರಾಜು, ಯುನೆಸ್ಕೋ ನಿರ್ದೇಶಕ ಎರಿಕ್ ಫಾಲ್ಟ್, ಸಿಬಿಎಂ ಇಂಡಿಯಾ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟಿಡಾ.ಸಾರಾ ವರ್ಗಿಸ್ ಮೊದಲಾದವರು ಇದ್ದರು.