ಹೂವಿನ ಮಾರ್ಕೆಟ್‌ನಲ್ಲಿ ಗೋಲ್‌ಮಾಲ್‌; ಪ್ರತ್ಯೇಕ ಮಾರುಕಟ್ಟೆಗೆ ಆಗ್ರಹ

By Kannadaprabha NewsFirst Published Sep 25, 2022, 1:08 PM IST
Highlights

ಹೂವಿನ ಮಾರುಕಟ್ಟೆಯಲ್ಲಿ ದಳ್ಳಾಳಿ ಹಾಗೂ ಮರ್ಚೆಂಟ್‌ಗಳು ಅಳತೆಯಲ್ಲಿ ವ್ಯತ್ಯಾಸ ಮಾಡುವುದರಿಂದ ಹೂವಿನಿಂದ ಜೀವನ ಸಾಗಿಸುವ ರೈತರಿಗೆ ಅನ್ಯಾಯವಾಗುತ್ತಿದೆ. ನಿಯಮ ರೂಪಿಸಿ ಪಟ್ಟಣದಲ್ಲಿ ಶೀಘ್ರ ಪ್ರತ್ಯೇಕ ಹೂವಿನ ಮಾರುಕಟ್ಟೆತೆರೆಯುವಂತೆ ಆಗ್ರಹಿಸಿ, ತಾಲೂಕು ರೈತ ಸಂಘದಿಂದ ತಿಭಟನೆ. 

ಪಾವಗಡ (ಸೆ.25) : ಹೂವಿನ ಮಾರುಕಟ್ಟೆಯಲ್ಲಿ ದಳ್ಳಾಳಿ ಹಾಗೂ ಮರ್ಚೆಂಟ್‌ಗಳು ಅಳತೆಯಲ್ಲಿ ವ್ಯತ್ಯಾಸ ಮಾಡುವುದರಿಂದ ಹೂವಿನಿಂದ ಜೀವನ ಸಾಗಿಸುವ ರೈತರಿಗೆ ಅನ್ಯಾಯವಾಗುತ್ತಿದೆ. ನಿಯಮ ರೂಪಿಸಿ ಪಟ್ಟಣದಲ್ಲಿ ಶೀಘ್ರ ಪ್ರತ್ಯೇಕ ಹೂವಿನ ಮಾರುಕಟ್ಟೆತೆರೆಯುವಂತೆ ಆಗ್ರಹಿಸಿ, ತಾಲೂಕು ರೈತ ಸಂಘದಿಂದ ಶುಕ್ರವಾರ ಪ್ರತಿಭಟನೆ ನಡೆಸಿದರು. ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದ ಬಳಿಕ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಶಾಖೆಯ ಅಧ್ಯಕ್ಷ ಪೂಜಾರಪ್ಪ ಮಾತನಾಡಿ, ಪಟ್ಟಣದ ಹೊಸಬಸ್‌ ನಿಲ್ದಾಣದ ಬಳಿ, ಅನಧಿಕೃತವಾಗಿ ತೆರೆದಿರುವ ಖಾಸಗಿ ಹೂವಿನ ಮಾರುಕಟ್ಟೆಯಲ್ಲಿ ಭಾರಿ ಗೋಲ್‌ ಮಾಲ್‌ ನಡೆಯುತ್ತಿದೆ.

ಪಾವಗಡ: ಸ್ಫೋಟಕ ಬಳಸಿ ಗ್ರಾಪಂ ಕಚೇರಿ ಧ್ವಂಸಕ್ಕೆ ಯತ್ನ

ಮಾರು ಹಾಕುವಾಗ ಹೂವಿನ ಅಳತೆಯಲ್ಲಿ ದಳ್ಳಾಳಿ ಹಾಗೂ ಮರ್ಚೆಂಟ್‌ಗಳು ರೈತರಿಗೆ ವಂಚಿಸುತ್ತಿದ್ದಾರೆ. ಒಂದು ಕೆಜಿ ಕಾಗಡ ಹೂವಿಗೆ 12 ಮಾರು ಆದರೆ, ಮಾರುಕಟ್ಟೆಯಲ್ಲಿ ಕೇವಲ ನಾಲ್ಕೈದು ಮಾರುಗೆ ಸೀಮಿತಗೊಳಿಸುತ್ತಾರೆ. ಒಂದು ಕೆಜಿಗೆ 16 ಮಾರು ಆಗುವ ಕನಕಾಂಬರ ಹೂವನ್ನು ಬರೀ 7 ಮಾರು ಹಾಗೂ ಒಂದು ಕೆಜಿ ಮಲ್ಲಿಗೆಗೆ 15 ಮಾರು ಬದಲಿಗೆ ಕೇವಲ ಆರು ಮಾರುಗಳಿಗೆ ಅಳತೆ ಮಾಡಿ ವಂಚಿಸುತ್ತಿರುವುದಾಗಿ ಆರೋಪಿಸಿದರು.

ಇದೇ ರೀತಿ ಮಾರುಕಟ್ಟೆಗೆ ತರುವ ತರೆವಾರಿ ಹೂವುಗಳನ್ನು ಮನಬಂದಂತೆ ಅಳತೆ ಮಾಡಿ ಮಾರುಕಟ್ಟೆದರಕ್ಕಿಂತ ಕಡಿಮೆ ದರದಲ್ಲಿ ಮಾರು ಲೆಕ್ಕದಲ್ಲಿ ಹಣ ನೀಡುತ್ತಾರೆ. ಪ್ರಶ್ನಿಸಿದರೆ ಮಾರುಕಟ್ಟೆಯಿಂದ ಗ್ರಾಮೀಣ ರೈತರನ್ನು ವಾಪಸ್ಸು ಕಳುಹಿಸುತ್ತಾರೆ. ಅವರು ಹಾಕಿದ ಅಳತೆ ಮತ್ತು ಕೊಟ್ಟಷ್ಟುಹಣ ಪಡೆದು ಮನೆಗೆ ಹೋಗುವ ಸ್ಥಿತಿ ಇದೆ. ಇಲ್ಲಿನ ಹೂವಿನ ಮಾರುಕಟ್ಟೆಯ ಮರ್ಚೆಂಟ್‌ ಹಾಗೂ ದಳ್ಳಾಳಿಗಳು ಯಾವುದೇ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ವ್ಯಾಪಾರ ವಹಿವಾಟು ನಡೆಸುತ್ತಿದ್ದು, ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರದ ದಂಧೆ ನಡೆಯುತ್ತಿದೆ. ತಾಲೂಕಿನ ಗ್ರಾಮೀಣ ಪ್ರದೇಶಗಳ ತೋಟಗಳಿಂದ ನಿತ್ಯ ನೂರಾರು ಕೆಜಿ ಹೂವು ಮಾರುಕಟ್ಟೆಗೆ ಬರುತ್ತಿದ್ದು ಪ್ರತಿದಿನ ಮಾರುಕಟ್ಟೆಯಲ್ಲಿ ಸಾವಿರಾರು ಕ್ವಿಂಟಾಲ್‌ ಹೂವಿನ ವ್ಯಾಪಾರ ವಹಿವಾಟು ನಡೆಯುತ್ತಿದೆ. ಕೂಡಲೇ ಪರಿಶೀಲಿಸಿ ನ್ಯಾಯಸಮ್ಮತವಾದ ಅಳತೆ ಮತ್ತು ಅಂದಿನ ಮಾರುಕಟ್ಟೆಯ ಬೆಲೆ ನಿಗದಿಪಡಿಸುವ ಮೂಲಕ ಅನುಕೂಲ ಕಲ್ಪಿಸಬೇಕು. ಬಸ್‌ ನಿಲ್ದಾಣದಲ್ಲಿರುವ ಅನಧಿಕೃತ ಹೂವಿನ ಮಾರುಕಟ್ಟೆತೆರವುಗೊಳಿಸಬೇಕು, ಪಟ್ಟಣದಲ್ಲಿ ಸೂಕ್ತ ಮಾರುಕಟ್ಟೆನಿರ್ಮಿಸಿ, ರೈತರಿಗೆ ಅನುಕೂಲ ಕಲ್ಪಿಸುವಂತೆ ತಹಸೀಲ್ದಾರ್‌ ಹಾಗೂ ಪುರಸಭೆ ಮುಖ್ಯಾಧಿಕಾರಿಗೆ ಒತ್ತಾಯಿಸಿದರು.

ಆಂಜನೇಯ ದೇಗುಲದಲ್ಲಿ ನಿಧಿ ಶೋಧ ಆಂಧ್ರ ಮೂಲದ 5 ಮಂದಿ ಬಂಧನ

ಈ ಸಂದರ್ಭದಲ್ಲಿ ಕನ್ನಮೇಡಿ ಕೃಷ್ಣಮೂರ್ತಿ, ನರಸಣ್ಣ, ರಮೇಶ್‌, ಚಿತ್ತಯ್ಯ, ಕಿರ್ಲಾಲಹಳ್ಳಿ ಈರಣ್ಣ, ಸದಾಶಿವಪ್ಪ, ಚಿತ್ತಪ್ಪ, ನಾಗಭೂಷಣಪ್ಪ, ಅಂಜನಪ್ಪ, ಕೃಷ್ಣಪ್ಪ, ತಿಪ್ಪೇಸ್ವಾಮಿ, ಸಿದ್ದಪ್ಪ, ನರಸಿಂಹಪ್ಪ, ಮೂರ್ಕಣಪ್ಪ, ಹೂವು ಬೆಳೆಗಾರರು ಮತ್ತು ರೈತ ಸಂಘದ ಪದಾಧಿಕಾರಿಗಳಿದ್ದರು.

click me!