ಕೊಡಗು ನೆರೆ ಸಂತ್ರಸ್ತರ ಜೊತೆ ಕರುನಾಡು! ಸಂತ್ರಸ್ತರಿಗಾಗಿ ಕೂಡಿಟ್ಟ ಹಣ ಕೊಟ್ಟ ಬಾಲಕಿ! ವಿಜಯಪುರ ಜಿಲ್ಲೆಯ ಬಬಲೇಶ್ವರ್ ತಾಲೂಕು! ಸಂತ್ರಸ್ತರಿಗಾಗಿ 500 ರೂ. ಕೊಟ್ಟ ಸುಷ್ಮಿತಾ
ವಿಜಯಪುರ(ಆ.18): ಟಿವಿಯಲ್ಲಿ ಕೊಡಗು ಜಿಲ್ಲೆಯ ಮಳೆ ಸಂತ್ರಸ್ತರ ಸಂಕಷ್ಟವನ್ನು ನೋಡಿ ಶಾಲಾ ಬಾಲಕಿಯೊಬ್ಬಳು ತಾನು ಕೂಡಿಟ್ಟ ಹಣವನ್ನು ದೇಣಿಗೆ ನೀಡಿದ ಘಟನೆ ವಿಜಯಪುರದಲ್ಲಿ ನಡೆದಿದೆ.
ಬಬಲೇಶ್ವರ ತಾಲೂಕಿನ ದದಾಮಟ್ಟಿ ಗ್ರಾಮದ ಸುಷ್ಮಿತಾ ರವಿ ಬೆನಕಟ್ಟಿ ಎಂಬ ೧೦ ವರ್ಷದ ಬಾಲಕಿ, ತಾನು ಇದುವರೆಗೂ ಕೂಡಿಟ್ಟ ಹಣವನ್ನು ದೇಣಿಗೆ ರೂಪದಲ್ಲಿ ನೀಡಲು ಜಿಲ್ಲಾಧಿಕಾರಿ ಕಚೇರಿಗೆ ತಂದೆಯೊಂದಿಗೆ ಬಂದಿದ್ದಾಳೆ.
ಸುಷ್ಮಿತಾ ೪ನೇ ತರಗತಿಯಲ್ಲಿ ಓದುತ್ತಿದ್ದು, ಟಿವಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಬೀಳುತ್ತಿರುವ ಭಾರೀ ಮಳೆಯ ಕುರಿತು ಸುದ್ದಿ ನೋಡಿದ್ದಾಳೆ. ಕೂಡಲೇ ನೆರವಿನ ಮನವಿಗೆ ಸ್ಪಂದಿಸಿದ ಸುಷ್ಮಿತಾ, ತಾನು ಕೂಡಿಟ್ಟಿದ ಹಣದ ಜೊತೆಗೆ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದಾಳೆ.
ಬಾಲಕಿ ತಂದೆ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದು, ಸುಷ್ಮಿತಾ ಕಳೆದ ಕೆಲವು ವರ್ಷಗಳಿಂದ ತಂದೆ ಕೊಡುತ್ತಿದ್ದ ಚಿಲ್ಲರೆ ಹಣವನ್ನು ಕೂಡಿಡುತ್ತಿದ್ದಳು. ಇನ್ನು ಸುಷ್ಮಿತಾಳ ಮಾನವೀಯತೆ ಮೆಚ್ಚಿರುವ ಜಿಲ್ಲಾಧಿಕಾರಿ, ಬಾಲಕಿ ಕೊಟ್ಟಿರುವ ಹಣವನ್ನು ಕೊಡಗು ನೆರೆ ಸಂತ್ರಸ್ತರಿಗಾಗಿ ಕಳುಹಿಸಿ ಕೊಡಲಾಗುವುದು ಎಂದು ತಿಳಿಸಿದ್ದಾರೆ.